Home / ಕವನ / ಕವಿತೆ / ಅವತಾರಿ ಬರುತ್ತಾನೆ

ಅವತಾರಿ ಬರುತ್ತಾನೆ

ಅವನು ಬರುತ್ತಾನೆ
ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು
ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ
ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ
ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ಮುಳುಗಿಸುತ್ತ
ಬಾಯ ಒರಳಲ್ಲಿ ಹಿರಿಯರನರೆದಾಡುತ್ತ

ಹಲ್ಲ ತೀಟೆಯಲ್ಲಿ ಕಿರಿಯರ ಕೊರೆದು ಸಣ್ಣ ಮಾಡುತ್ತ
ಮೂಗಿನ ನೇರಕ್ಕೆ ಜಗವನಳೆದು ಸೀನಿ ಸುರಿಯುತ್ತ
ಬಡಾಯಿ ಬಾಹುಗಳ ಉದ್ದಗಲಗಳಿಗೆ ಚಾಚಿ ತಬ್ಬಿ
ಹೂಟ್ಟೆಯುಬ್ಬರ ತೋರುತ್ತ ತನ್ನಪ್ಪನೊಬ್ಬನೇ ಪರಮ ಪುರುಷ
ತನ್ನವಗವಳೊಬ್ಬಳೇ ಜಗಮೀರಿದ ಗರತಿ ಎನುತ್ತ

ತನ್ನ ವಂಶ ವೃಕ್ಷಕ್ಕೆ ಅನಾದಿ ಬೀಜದ ಪಾವಿತ್ರ್ಯ ತೋರುತ್ತ
ಹಗಲಿನ ಮುಖಕ್ಕೆ ಕೊಳ್ಳಿ ತೋರಿಸುತ್ತ
ವಿಶ್ವಗೂಢತೆಯ ರೋಮರೋಮಗಳಲ್ಲಿ ತುಂಬಿಕೊಂಡು
ತಾನು ಕುಡಿದೊಂದೆರಡು ಬಾವಿಗಳಲ್ಲಿ ಸಾಗರಗಳ ಮುಕ್ಕಳಿಸುತ್ತ
ತನ್ನ ಬಾಯಲ್ಲೀರೇಳು ಲೋಕಗಳ ಬಿಂಬಿಸಿ
ಕೃಪಾಪೋಷಕ ನಗೆಯಿಂದ ಜಗವ ಪಾವನಗೊಳಿಸಿ

ನಮ್ಮನು ಉದ್ಧರಿಸುಲು ಬರುತ್ತಾನೆ
ಬಂದು ನಿಂತು ಜಗದಗಲ ಮುಗಿಲಗಲವಾದ
ತನ್ನುದರದಡಿಯಲ್ಲಿ ನಮಗೆ ಕಾವು ಕೊಡುತ್ತಾನೆ
ಬೆಚ್ಚಗಿದೆಯೆಂದು ನಾವು ಆಶ್ರಯ ಪಡೆದೆವೋ ಸರಿ
ಕಪ್ಪ ನೆರಳಪುಟ್ಟಿ ನಮ್ಮ ಮುಚ್ಚಿ
ಉಸಿರುಕಟ್ಟಿ ನಾವು ಮೂಕರಾಗಿ
ಬಿಳಿಚಿಕೊಂಡು ಬೆಪ್ಪರಾದರೆ ಅವನ ತಪ್ಪೇ?

ನೋಡು ಅವನು ಬಂದೇ ಬರುತ್ತಾನೆ
ಬಿಡಿಸಿಕೊಳ್ಳಲು ನೀನು ಯತ್ನಿಸಿದಂತೆಲ್ಲಾ
ಪರಲೋಕಕೇರುವ ಪರಿಪೂರ್ಣ ಪವಾಡದೇಣಿಯಿಂದಾದರೂ
ನಿನ್ನ ಸೆಳೆದು ತನ್ನ ಸುತ್ತಲೇ ಜೇಡನಂತೆ ತಿರುಗಾಡಿಸುತ್ತಾ
ಕೊನೆಗೆ ನಿನ್ನ ನುಂಗಿ ನೀರು ಕುಡಿಯುತ್ತಾನೆ
ಸೋಹಮ್ಮೆಂದು ನಿನ್ನ ಸೊನ್ನೆಯಾಗಿಸುತ್ತಾನೆ
ನೀನು ನೀನಾಗುಳಿಯಬೇಕೆಂದರೆ ದೂರ ಓಡು
ಅಗೋ ಬಂದ! ಬಂದೇ ಬರುತ್ತಾನೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...