Home / ಲೇಖನ / ಇತರೆ / ಮೂರ್‍ಖರಾಗದೇ ಉಳಿವೆವೇ ?

ಮೂರ್‍ಖರಾಗದೇ ಉಳಿವೆವೇ ?

ಪ್ರಿಯ ಸಖಿ,

ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು ಮೂಡಿಸುವಂತಹ ಉತ್ತಮ ಶಿಕ್ಷಣವನ್ನು ನೀಡಬೇಕಿತ್ತು. ಆದರೆ ಯೋಚನೆ ಮಾಡದೇ ಅಂಧರಾಗಿ ಮೂರ್‍ಖರ ಪೆಟ್ಟಿಗೆಯನ್ನು ನೀಡಿಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ದೂರದರ್‍ಶನ ಹಾವಳಿಯಿಂದ ಇಂದು ಮನೆಗಳಲ್ಲಿ ಆರೋಗ್ಯ ಪೂರ್‍ಣ ಮಾತುಕತೆ, ಚರ್‍ಚೆ, ನಗುಹರಟೆಗಳು ಹೆಚ್ಚು ಕಡಿಮೆ ನಿಂತೇ ಹೋಗಿವೆ. ಕಿರಿಯರಲ್ಲಿ ಬುದ್ಧಿ ಕೌಶಲ್ಯವನ್ನು ಹೆಚ್ಚಿಸುತ್ತಿದ್ದ ನಮ್ಮ ಅನೇಕ ಒಳಾಂಗಣ ಆಟಗಳಾದ ಚೌಕಾಬಾರ, ಪಗಡೆ, ಅಳುಗುಳಿ ಮನೆ, ಹುಲಿ ಕುರಿ, ಇತ್ಯಾದಿ ಆಟಗಳು ಎಂದೋ ಮೂಲೆ ಸೇರಿವೆ. ಇಂದಿನ ಪೀಳಿಗೆಯ ಮಕ್ಕಳು ಬಹುಶಃ ಈ ಆಟಗಳ ಹೆಸರನ್ನೂ ಕೇಳಲಿಲ್ಲವೇನೋ? ಜೊತೆಗೆ ದೂರದರ್‍ಶನ ಈ ಪೀಳಿಗೆಯವರಿಂದ ಅತ್ಯಂತ ಮಹತ್ವದ ಓದಿನ ಹವ್ಯಾಸವನ್ನೇ ನುಂಗಿಬಿಟ್ಟಿದೆ. ಅಗಾಧ ಸಾಹಿತ್ಯ ಭಂಡಾರವನ್ನು ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರ, ಓದುವವರು ಕಡಿಮೆಯಾಗಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ಜನಪದರಿಂದ ಬಳುವಳಿ ಬಂದ ಒಗಟು, ಗಾದೆ, ನುಡಿಗಟ್ಟು, ಒಡಪಿನ ಹಾಡುಗಳು ಮಕ್ಕಳಿಗಿರಲಿ ದೊಡ್ಡವರಿಗೇ ಬೇಡವಾಗುತ್ತಿದೆ.

ಕ್ರೌರ್‍ಯ, ಹಿಂಸೆ, ಅನೈತಿಕ ಸಂಬಂಧಗಳನ್ನು ವೈಭವೀಕರಿಸುವ ಚಲನಚಿತ್ರ, ದೂರದರ್‍ಶನ ಧಾರಾವಾಹಿಗಳು ನೂರೆಂಟು ಚಾನೆಲ್ಗಳಲ್ಲಿ ಹರಿದು ಬರುವ ಹಾಡು ಕುಣಿತಗಳು ನಮ್ಮ ಸಂಸ್ಕೃತಿಯ ಔನ್ನತ್ಯವನ್ನು ಕ್ರಮೇಣ ನುಂಗಿಹಾಕುತ್ತಿವೆ. ಒಂದಾದ ನಂತರ ಒಂದು ಹರಿದು ಬರುವ ಧಾರಾವಾಹಿಗಳನ್ನು ನೋಡುತ್ತಾ ಅಮೂಲ್ಯ ಸಮಯ, ಕಲೆಗಾರಿಕೆ, ಹವ್ಯಾಸಗಳು, ಹೊಸದನ್ನು ಆವಿಷ್ಕರಿಸುವ ಮನೋಭಾವವನ್ನು ನಮ್ಮ ಪೀಳಿಗೆಯವರು ಕಳೆದುಕೊಳ್ಳುತ್ತಿರುವುದು ಅರಿವಿಗೆ ಬರುವುದು ಯಾವಾಗ ? ಧಾರಾವಾಹಿಗಳು ಬರುತ್ತಿರುವಾಗ ಮನೆಗೆ ಬಂದ ಅತಿಥಿ, ಸ್ನೇಹಿತರನ್ನು ಮಾತನಾಡಿಸುವ ತಾಳ್ಮೆ, ವ್ಯವಧಾನವೂ ಮನೆಯವರಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಮಾಜಿಕ ಸಮ್ಮಿಲನದ ಮೂಲ ಕೊಂಡಿಯೂ ಈ ಮೂಲಕ ಕಳೆದುಕೊಳ್ಳುತ್ತಿರುವುದು ತಿಳಿಯುತ್ತದೆ. ದೂರದರ್‍ಶನದ ನಿರಂತರ ನೋಡುವಿಕೆಯಿಂದ ಇತ್ತೀಚಿನ ದಿನಗಳಲ್ಲಿ ನೇತ್ರ ಸಂಬಂಧಿ ರೋಗಗಳು ಹೆಚ್ಚಿರುವುದನ್ನು, ಅವರ ಮುಂದೆ ಕುಳಿತು ಏಕಾಗ್ರತೆಯಿಲ್ಲದೆ ಊಟ, ತಿಂಡಿ ಮಾಡುವುದರಿಂದ ಜೀರ್‍ಣ ಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ.

ಸಖಿ, ದೂರದರ್‍ಶನದ ಕಪಿಮುಷ್ಠಿಗೆ ಸಿಲುಕಿರುವ ನಮ್ಮ ಸಮುದಾಯ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಮಾನಸಿಕ ದಾಸ್ಯಕ್ಕೆ ಒಳಗಾಗಿಬಿಟ್ಟಿದೆ. ಇಂದು ಕಣ್ಣಿಗೆ ಕಾಣದಂತಹ ಆದರೆ ನಾಳೆ ನಮ್ಮ ಸುಂದರ ಭವಿಷ್ಯವನ್ನು ಸದ್ದಿಲ್ಲದಂತೆ ನಿರ್‍ನಾಮ ಮಾಡಬಲ್ಲ ಶಕ್ತಿ ದೂರದರ್‍ಶನಕ್ಕಿದೆ. ಹಾಗೆಂದು ಅದರಲ್ಲಿ ಬರುತ್ತಿರುವ ಒಳಿತು, ಮಾಹಿತಿ, ತಿಳುವಳಿಕೆ, ಅವಶ್ಯವಿರುವಷ್ಟು ಆರೋಗ್ಯ ಪೂರ್‍ಣವಾದ ಮನರಂಜನೆಯನ್ನಷ್ಟೇ ತೆಗೆದುಕೊಂಡು ಮಿಕ್ಕಿದ್ದನ್ನು ಬಿಟ್ಟು ಬಿಡುವ ವಿವೇಚನೆ ನಮ್ಮಲ್ಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಸಖಿ, ಮೂರ್‍ಖರ ಪೆಟ್ಟಿಗೆಯನ್ನು ನೋಡುತ್ತಾ ಮೂರ್‍ಖರೂ ಆಗಬಹುದು, ಅದರಲ್ಲಿ ಬೇಕಷ್ಟನ್ನು ನೋಡಿ ಜಾಣರೂ ಆಗಬಹುದು. ಆಯ್ಕೆ ನಮ್ಮ ಮುಂದಿದೆ. ಮೂರ್‍ಖರಾಗದೇ ಉಳಿಯೋಣ ಆಲ್ಲವೇ ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...