Home / ಕವನ / ಕವಿತೆ / ಹಸಿಮಣ್ಣಾಗುವ ಹಿಮಾಲಯ

ಹಸಿಮಣ್ಣಾಗುವ ಹಿಮಾಲಯ

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ
ಮುಖಗಳನ್ನು ಹುಡುಕುತ್ತಾ
ಬೆಕ್ಕಸ ಬೆರಗಾಗುತ್ತಾನೆ
ತನ್ನದೇ ಮುಖ ಕಂಡ ನಿರ್ಲಿಪ್ತ
ಆದರೂ ಹುಚ್ಚು ಪ್ರೇಮಿ!

ತಪ್ಪು – ಸರಿಗಳ ಲೆಕ್ಕ ಹಿಡಿದು
ತೂಗಲಾರದ ತಕ್ಕಡಿಗಳಿಗೆ
ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನೆಗಳಿಗೆ
ಎಲ್ಲಾ ಇದ್ದೂ ಏನೂ ಇಲ್ಲೆನುತ
ಮತ್ತೇನೂ ಬೇಡೆನುವ ನಿರಾಕರಣಕ್ಕೆ
ಹಿಮಾಲಯದೆತ್ತರಗಳಲಿ
ಉತ್ತರ ಹುಡುಕುವ ಹುಚ್ಚು
ಮುಖವೊಂದಕ್ಕೆ.

ಪ್ರಶ್ನೆಯೊಂದಕ್ಕೇ ನೂರು
ಉತ್ತರಗಳ ಸಮಜಾಯಿಷಿಯಲಿ
ಎಲ್ಲವೂ ಬೇಕು
ಎಲ್ಲವೂ ನಾನೇ ಎನುವ
ಪ್ರೀತಿಯಮಲಿಗೆ
ಮತ್ತೆ ಮತ್ತೆ ಸಿಕ್ಕಿ

ಹಸಿಮಣ್ಣಿನ ಸೆಳೆತಕ್ಕೆ
ಇಳಿದು ಅದರಾಳದಾಳಕ್ಕೆ
ಎಲ್ಲವಾಗುತ್ತಲೇ ಇಲ್ಲವಾಗುವ
ತೆವಲು ಇನ್ನೊಂದು ಮುಖಕ್ಕೆ.

ಸಂತನಂತೆ ಹಿಮಾಲಯದೆತ್ತರಕ್ಕೆ
ಏರಿ ನಿಲ್ಲುವುದು ಸುಲಭ
ಎಲ್ಲ ಎಲ್ಲವೂ ಸಾಕೆನಿಸಿ
ಎಲ್ಲ ಕಿತ್ತೂಗೆದು, ಸುತ್ತ
ತಣ್ಣನೆಯ ಹಿಮದ ಆಲಯವನ್ನೆ
ಕಟ್ಟಿಕೊಳ್ಳುತ್ತಾ ಜೀವನ್ಮುಕ್ತನಾಗುವದೂ ಸಾಧ್ಯ

ಆದರೆ…
ಈ ನೆಲದ ಆರ್ದ್ರ ಹಸಿಮಣ್ಣಿನ ಹುಡಿಯಲ್ಲಿ
ಮೆಲ್ಲಗೆ ಬೆರೆತು
ಕಣಕಣದಲ್ಲೂ ಕಲೆತು
ಹದಗೊಳ್ಳುತ್ತಲೇ
ಮತ್ತೆ ಮತ್ತೆ ಬಿಡದೇ
ಕುಡೆಯೊಡೆಸುವ ತಾಕತ್ತು
ಆ ಶಾಖಕ್ಕೇ ಹಿಮಮಣಿಗಳ
ಕರಗಿಸಿ ನೀರಾಗಿಸಿ
ಬೊಗಸೆ ತುಂಬಿಕೊಳ್ಳುತ್ತಾ ಹೀರಿ
ನಿಧಾನಕ್ಕೆ ಹಸಿಮಣ್ಣೇ ಆಗುವ ರೀತಿ
ಜೀವಂತಿಕೆಗೇ
ಮುಖಾಮುಖಿಯಾಗುವ ಪ್ರೀತಿ
ಆಗಿಬಿಡುವುದು ಕಷ್ಟ – ಸಾಧ್ಯ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...