Home / ಕವನ / ಕವಿತೆ / ಹಸಿಮಣ್ಣಾಗುವ ಹಿಮಾಲಯ

ಹಸಿಮಣ್ಣಾಗುವ ಹಿಮಾಲಯ

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ
ಮುಖಗಳನ್ನು ಹುಡುಕುತ್ತಾ
ಬೆಕ್ಕಸ ಬೆರಗಾಗುತ್ತಾನೆ
ತನ್ನದೇ ಮುಖ ಕಂಡ ನಿರ್ಲಿಪ್ತ
ಆದರೂ ಹುಚ್ಚು ಪ್ರೇಮಿ!

ತಪ್ಪು – ಸರಿಗಳ ಲೆಕ್ಕ ಹಿಡಿದು
ತೂಗಲಾರದ ತಕ್ಕಡಿಗಳಿಗೆ
ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನೆಗಳಿಗೆ
ಎಲ್ಲಾ ಇದ್ದೂ ಏನೂ ಇಲ್ಲೆನುತ
ಮತ್ತೇನೂ ಬೇಡೆನುವ ನಿರಾಕರಣಕ್ಕೆ
ಹಿಮಾಲಯದೆತ್ತರಗಳಲಿ
ಉತ್ತರ ಹುಡುಕುವ ಹುಚ್ಚು
ಮುಖವೊಂದಕ್ಕೆ.

ಪ್ರಶ್ನೆಯೊಂದಕ್ಕೇ ನೂರು
ಉತ್ತರಗಳ ಸಮಜಾಯಿಷಿಯಲಿ
ಎಲ್ಲವೂ ಬೇಕು
ಎಲ್ಲವೂ ನಾನೇ ಎನುವ
ಪ್ರೀತಿಯಮಲಿಗೆ
ಮತ್ತೆ ಮತ್ತೆ ಸಿಕ್ಕಿ

ಹಸಿಮಣ್ಣಿನ ಸೆಳೆತಕ್ಕೆ
ಇಳಿದು ಅದರಾಳದಾಳಕ್ಕೆ
ಎಲ್ಲವಾಗುತ್ತಲೇ ಇಲ್ಲವಾಗುವ
ತೆವಲು ಇನ್ನೊಂದು ಮುಖಕ್ಕೆ.

ಸಂತನಂತೆ ಹಿಮಾಲಯದೆತ್ತರಕ್ಕೆ
ಏರಿ ನಿಲ್ಲುವುದು ಸುಲಭ
ಎಲ್ಲ ಎಲ್ಲವೂ ಸಾಕೆನಿಸಿ
ಎಲ್ಲ ಕಿತ್ತೂಗೆದು, ಸುತ್ತ
ತಣ್ಣನೆಯ ಹಿಮದ ಆಲಯವನ್ನೆ
ಕಟ್ಟಿಕೊಳ್ಳುತ್ತಾ ಜೀವನ್ಮುಕ್ತನಾಗುವದೂ ಸಾಧ್ಯ

ಆದರೆ…
ಈ ನೆಲದ ಆರ್ದ್ರ ಹಸಿಮಣ್ಣಿನ ಹುಡಿಯಲ್ಲಿ
ಮೆಲ್ಲಗೆ ಬೆರೆತು
ಕಣಕಣದಲ್ಲೂ ಕಲೆತು
ಹದಗೊಳ್ಳುತ್ತಲೇ
ಮತ್ತೆ ಮತ್ತೆ ಬಿಡದೇ
ಕುಡೆಯೊಡೆಸುವ ತಾಕತ್ತು
ಆ ಶಾಖಕ್ಕೇ ಹಿಮಮಣಿಗಳ
ಕರಗಿಸಿ ನೀರಾಗಿಸಿ
ಬೊಗಸೆ ತುಂಬಿಕೊಳ್ಳುತ್ತಾ ಹೀರಿ
ನಿಧಾನಕ್ಕೆ ಹಸಿಮಣ್ಣೇ ಆಗುವ ರೀತಿ
ಜೀವಂತಿಕೆಗೇ
ಮುಖಾಮುಖಿಯಾಗುವ ಪ್ರೀತಿ
ಆಗಿಬಿಡುವುದು ಕಷ್ಟ – ಸಾಧ್ಯ!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...