Home / ಕವನ / ಕವಿತೆ / ದ್ರೌಪದಿಯ ಹಾಡು

ದ್ರೌಪದಿಯ ಹಾಡು

ಕರಿಯಪೂರ ನಗರದಲ್ಲಿ |
ಕಽವರವರು ಪಾಂಡವ್ರವರು |
ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧||

ಪರಮಪಾಪಿ ಶಕುನಿ ತಾನು|
ಫಾಶಾದೊಳಗ ಫಕೀರನಾಗಿ|
ಧರ್ಮರಾಜ ಧರುಣಿ ದೌಽಪತಿನ ಸೋತರ ||೨||

ಸೋತನಂತ ದುರ್ಯೋಧನ|
ಸಂತೋಷದಿಂದ ಕೇಳಿದಾನ|
ದೂತನ್ಹಚ್ಚಿದಾರು ಮಾರು ಬದುಕ ತರಸ್ಯಾರ ||೩||

ನಿಂಬೆಣ್ಹಂತ ಕೊಂಬೆಣ್ಹಂತ|
ಆನಿಹಂತ ನಿನ್ನ ನಡಗಿ|
ಜಾಣಮುತ್ತಿನಂಥ ರಂಬಿ ಬಾರ ದ್ರೌಪತಿ ||೪||

ಹೆಚ್ಚು ಕುಂದ್ಯಾನಾಡದಿಽರು|
ಹೆರವರ್ಹೆಣ್ಣಾ ನೋಡದಿಽರು|
ಹಲ್ಲ ಕಿತ್ತ್ಯಾರೈವರವರು ಬ್ಯಾಡೋ ದುಸುವಾಸಾ ||೫||

ಹೆಣ್ಣ ಬಾಲಿ ಇಽವಳಿಗೆ|
ಹೆಮ್ಮಿಯಾದ ಮಾತನ್ಯಾಕ|
ಕಣ್ಣ ಚಿವುಟಿ ದುರ್ಯೋಧನ ಸೆದರಿಗೊಪ್ಪ್ಯಾನ ||೬||

ಹೀನ ದುಸುವಾಸ ನಿನ್ನ|
ರಗತಿನೊಳೆಗೆ ನಿಲಿಯ ಹಿಂಡಿ|
ಕರಳ ತೆಗೆದು ಮಾಲಿಮಾಡಿ ಧರಿಸೇನಂದಳ ||೭||

ಮುದ್ದೆ ಮುಖದೆ ಮಾನವರಿಗಿ|
ಮುಂದೆ ಮಾಡಿ ತಂಜದೆವೆಂದ|
ಇಂದ ನಿಮಗ ಬಿನ್ನವೆಂದು ಕೈಯ ಮುಗಿದರ ||೮||

ನೀರಬೊಬ್ಬಿ ಇಕ್ಕತಾರ|
ಲಡ್ಡನಾದರು ಕಡವುತಾರ|
ಆಗ ದ್ರೌಽಪತಿಯ ಸೀರಿ ನೆಳೆಯುತಿದರ ||೯||

ಆಗ ಮಾಽಡಿಽದ ಪಾಪ|
ಈಗ ಬಂದು ಒದಗಿತೇನ|
ಕೃಷ್ಣದೇವನ ಪಾದಕ್ಹೋಗಿ ಎರಗಲೇೆನ ||೧೦||

ಹರಿಯ ಹರಿಯ ಅನ್ನುತಾಳ|
ಹರಿಗೆ ಮೊರೆಯನಿಡುವುತಾಳ|
ಧರಿಯ ಮ್ಯಾಲ ಬಿದ್ದು ದ್ರೌಪತ್ಹ್ಯೊರಳತಿದ್ದಳ ||೧೧||

ಆಽಕಾಶ ಬಣ್ಣ ಸೀರಿ|
ಲೋಕದಾಗ ಇಲ್ಲ ಸೀರಿ|
ಸಾಕ್ಷ ಕೊಽಟ್ವಂತ ಸೀರಿ ಸಂವಿಯಲ್ದ್ಹೋದವ ||೧೨||

ಹಾದಿ ಇಂಜಾನ ಕಾಯೊ|
ಗಿಡದ ಮಂಜಾನ ಕಾಯೊ|
ಹಿಂಡ ದೈತ್ಯರುಳುವಂಥ ದೇವ ನೀ ಕುಯೊ ||೧೩||
*****

ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಸೋತಾಗ ಕೌರವರು ಅವಳ ಸೀರೆಯನ್ನು ಸೆಳೆದ ಕತೆಯಿದು. ಇದರಲ್ಲಿ ಎಂಟನೆಯ ನುಡಿಯೊಂದನ್ನು ಬಿಟ್ಟರೆ ಉಳಿದೆಲ್ಲ ಹಾಡಿನ ಭಾವವು ಸಹಜವಾಗಿ ಲಕ್ಷ್ಯಕ್ಕೆ ಬರುವಂತಿದೆ. ಆದರೆ ಎಂಟನೆಯ ನುಡಿಯಲ್ಲಿ ಭೀಷ್ಮಾದಿಗಳನ್ನು ಕುರಿತು ದ್ರೌಪದಿಯು ಆಡಿದ ಮಾತು ಹೇಳಲ್ಪಟ್ಟಿದೆಯೋ ಎನೋ. ಹಾಗೆ ತಿಳಿದುಕೊಂಡರೆ ಅರ್ಥವು ಸುಲಭವಾಗುವುದು.

ಛಂದಸ್ಸು :- ಭೋಗಷಟ್ಪದಿ.

ಶಬ್ದ ಪ್ರಯೋಗಗಳು :- ಕರಿಯಪೂರ=ಹಸ್ತಿನಾವತಿ. ಫಾಶ=ಪಗಡಿ ಆಟಡೊಳಗಿನ ಗಾಳುಗಳು. ಫಕೀರ=ಕಾಡುವ ಸನ್ಯಾಸಿ. ದಾರು ಮಾರು ಬದುಕು=ಸ್ಥಾವರಜಂಗಮ ಆಸ್ತಿ. ಕುಂದ್ಯಾನಾಡದಿರು=ಕುಂದಿಡಬೇಡ. ಸದರು=ಮುಖ್ಯ ಸ್ಥಳ. ರಗತ=ರಕ್ತ. ಲಡ್ಡ=ಚಬಕ. ಇಂಜಾನ=ಇಂಧನ. ಮಂಜಾನ=ಮಂಜು(ಮಬ್ಬು).

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...