Home / ಕವನ / ಕವಿತೆ / ಬಂದೆ ಬಂದೆ

ಬಂದೆ ಬಂದೆ

ಮಾತೃವಚನ

ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ
ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ
ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ
ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ ಪಾದವಿಟ್ಟೆ

ನಿನ್ನ ನೆನೆವು ನನ್ನೆದೆಯೊಳಿತ್ತದರ ಕರೆಯೆ ಹಾರಿ ಸಾರಿ
ನಿನ್ನತ್ತ ಬಂತು; ಹಾ ದೊರೆಯೆ ಎತ್ತೆತ್ತು ನಿನ್ನ ವೈರಿ
ಜಯಮತ್ತರಂತೆ ತೋರುತ್ತಲಿಹರು ಜಗದೊಡೆಯನೀಗ ಸತ್ಯ
ನೀನಿರದ ಬಾಳು ಅದು ಒಂದು ಸಾವು ಅದು ನರಕ ನಿತ್ಯನಿತ್ಯ

ಆಸೆಯನ್ನು ತಳ್ಳಿ ಸಂಶಯವೆ ಪಟ್ಟವನ್ನು ಕಟ್ಟಿಕೊಂಡು ಮತ್ತೆ
ಹುಸಿಬಂಡು ಪುಂಡು ಶರಣತೆಯ ನೂಕಿ, ನಂಬುಗೆಯ ತೀರಹತ್ತಿ
ಉಪಕಾರ ಸ್ಮೃತಿಯು ಹುಟ್ಟಿಲ್ಲವಿನ್ನು ಕಗ್ಗುರುಡು ಕಾಮ
ಕೊಲೆಗಡಕ ಬುದ್ದಿ ಬರುತಿಹುದು ನೋಡ ದುರ್ಬಲದ ತಪ್ಪಹೊಂದಿ

ಆ ನಿನ್ನ ಮಧುರತಮ ಪ್ರೇಮಧರ್ಮ ಬಾಯ್ಗಟ್ಟಿ ಉಸಿರುಗಟ್ಟಿ
ಉಮ್ಮಳಿಸುತಿಹುದು ಹಾ ದೊರೆಯೆ ನೀನೆ ಆಪಗೆಯ ಪಟ್ಟಗಟ್ಟಿ;
ಬಿಡುವಿಯೇನು? ಆ ಅನೃತವನ್ನು ಆ ವಿಕೃತಿಯನ್ನು ಮತ್ತೆ,
ಸಂತಾಪ ತಾಪ ಸಂತತಿಯನೆಲ್ಲ ಆ ಮಹಾವಿಜಯದತ್ತೆ.

ಹಾ ದೊರೆಯೆ ಆಜ್ಞೆಯನು ಕೊಟ್ಟು ನೋಡು ಕಟ್ಟಿಟ್ಟ ವಿಜಯವಹುದು
ನಾ ಬಲ್ಲೆ, ನಮಗೆ ಯೋಗ್ಯತೆಯು ಇಲ್ಲ ಜಗ ಸಿದ್ಧವಿಲ್ಲ; ಅಹುದು
ಕಡುಕಟ್ಟಿ ನಂಬುಗೆಯ ತುಟ್ಟತುದಿಯ ಮುಟ್ಟೊಮ್ಮೆ ಕೂಗಿಕೊಳುವೆ,
ದೊರೆ ಹೈ ಹಸಾದ ಜಗ ರಕ್ಷಿಸಯ್ಯ ಅದು ನಿನ್ನ ಅರುಳಿನಳವೆ.

ಇದು ಏನೆ ಇರಲಿ, ಇದು ಹೇಗು ಇರಲಿ, ತೋರಯ್ಯ ಕರುಣೆದೋರು.
ಉದ್ದಾರವಹುದು ಜಗವಮೃತವಹುದು ಭವಜಲಧಿ ದಾಟಿ ಪಾರು.
ಪಾತಾಳದಿಂದ ಎದೆಯಾಳದಿಂದ ಜೀವಾಳದಿಂದ ಒಂದು
ನಿನ್ನತ್ತ ನುಗ್ಗಿ ಹೊರಹೊಮ್ಮಿ ಹಿಗ್ಗಿ ಪ್ರಾರ್ಥನೆಯು ತಾನೆ ಬಂದು

ನಿನ್ನನ್ನು ಕಂಡೆ ಕಡುಕಾಂತಿಯಲ್ಲಿ ನೀನಾಗ ನನಗೆ ಅಂದೆ
ಎದೆಗೆಡಿಸಿಕೊಳ್ಳದಿರು, ಧೀರಳಾಗು, ಇಗೊ ನಂಬು ಬಂದೆಬಂದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...