Home / ಕವನ / ಕವಿತೆ / ಅರಿವು

ಅರಿವು

ಬೆದೆ ಹತ್ತಿದ ಎದೆ ಹಾಡಿದಾಗ
ಸದೆ ಬಡಿಯುವ ಸಿಂಹಾಸನವೇ
ಸಾವ ಸಂಭ್ರಮದಲ್ಲಿ ನೋವು
ನಿವಾರಿಸುವ ಜೋಳವಾಳಿಯೇ.

ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ
ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ
ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್
ದರ್‍ಶನ ವಿರಾಟಪರ್‍ವದ ಅಜ್ಞಾತ ಅಳಿಯುತ್ತಿದೆ.

ನಂಬಿಕೆ ನಿಷ್ಠೆಯ ಜಡಕಾಡು
ಋಣದ ಒಣಹವೆಯಲ್ಲಿ ಹದ್ದು-
ಬಸ್ತಾಗಿ ಹಸ್ತಿನಾವತಿಯ ಹರಕೆ ಹೊತ್ತು
ಅಲೆಮಾರಿಯಾದದ್ದು ಹನ್ನೆರಡಕ್ಕೇ ಸಾಕು;
ಅಜ್ಞಾತವಾಸದ ಹುತ್ತ ವಾಲ್ಮೀಕಿಯಾಗಬೇಕು.
ಮತ್ತದೇ ರಾಮಾಯಣ!
ಅಲೆಮಾರಿ ಅರಿವಿಗೆ ಹದಿನಾಲ್ಕರ ಹರೆಯ!

ಹೆಪ್ಪುಗಟ್ಟುತ್ತ ಬಂದ ಗಡಿಯಾರ
ಹನ್ನೆರಡು ಹೊಡೆದಾಗ ಕಾಲ ಕಡೆದ ಮೊಸರಲ್ಲಿ
ಹೊರಬಂದ ಬಸವಾದಿ ಅಸಂಖ್ಯಾತ ಅರಿವು-
ಅಸ್ಪೃಶ್ಯರ ಹಟ್ಟಿಯಿಂದ
ಮಹಿಳೆಯ ಮುಟ್ಟಿನಿಂದ
ದೋಣಿಯ ಹುಟ್ಟಿನಿಂದ
ಕಟ್ಟೊಡೆದು ಬಂದ ನಿಟ್ಟುಸಿರು
ನಲಿವಾಯಿತು ಅದು ನಿಲುವಾಯಿತು.

ಹನ್ನೆರಡಕ್ಕೆ ಎರಡು ಸೇರಿ ಹದಿನಾಲ್ಕು ತುಂಬಿದಾಗ
ಆಸ್ಥಾನ ದೂರ ಅಲೆಮಾರಿ ಅರಿವು
ಹರಿದಾಸ ತೇರಾಯಿತು ಊರೆಲ್ಲ ಹರಿದಾಡಿತು.

ಮಹಾಭಾರತದ ಹನ್ನೆರಡಾಗಲಿ
ರಾಮಾಯಣದ ಹದಿನಾಲ್ಕಾಗಲಿ
ಅಲೆಮಾರಿ ಅನುಭವಕ್ಕೆ ಅರಮನೆಯಿಲ್ಲ
ಅರಿವಿಗೆ ಆಸ್ಥಾನವಿಲ್ಲ.

ಪುರಾಣದ ಸ್ಥಿತಿಯಾಗಿ ಇತಿಹಾಸದ ಗತಿಯಾಗಿ
ಗತಿ ಸ್ಥಿತಿಯ ಸ್ಥಿತ್ಯಂತರದಲ್ಲೇ
ಮುಷ್ಟಿಗೆ ಸಿಕ್ಕದ ಸೃಷ್ಟಿಯಾಗಿ
ವಚನವಾಗಿ ದಾಸರ ಪದವಾಗಿ
ಗುಡಿಸಲ ಗೋಳಾಗಿ ನೇಗಿಲ ನೋವಾಗಿ
ಪದವಿಟ್ಟಳುಪದೊಂದಗ್ಗಳಿಕೆಯಾಗ ಹೊರಟರೂ
ಮಸಿ ಅಳಿಸುವ ರಬ್ಬರು ಉತ್ಪಾದನೆಯಾಗುತ್ತದೆ
ಮತ್ತೆ ಮತ್ತೆ ಅಕ್ಷರ ಆಕಾರ ತಳೆಯುತ್ತದೆ.

ಇದು ಇಂದು ನೆನ್ನೆಯದಲ್ಲ
ಕಾಲ ಸಾಯುವುದಿಲ್ಲ
ಹದಿನಾಲ್ಕಕ್ಕೆ ಹಿಂದೆ ಹನ್ನೆರಡು
ಹನ್ನೆರಡಕ್ಕೆ ಹಿಂದೆ ಹತ್ತು ಇರುತ್ತದೆ
ಚರಿತ್ರೆಯ ಸರಪಳಿ ಬೆಳೆಯುತ್ತದೆ.

ಹತ್ತರ ಪಂಪ ಪೊರೆ ಬಿಡುತ್ತ ಬಂದದ್ದು
ಒತ್ತೆಯಿಟ್ಟ ಉಸಿರು ಉತ್ತರ ಹುಡುಕ ತೊಡಗಿದ್ದು
ಸುಳಿವು ಸಿಕ್ಕಿದ ಸಿಂಹಾಸನ ಗಡಗಡ ನಡುಗಿದ್ದು
ಪಂಡಿತರಿಗೆ ಪಡಿತರ ಹಂಚಿ ಪಟ್ಟಾಗಿ ಕೂತದ್ದು
ಪಟ್ಟದ ಕೆಳಗೆ ಚಟ್ಟದ ಚರಿತ್ರೆ
ನಿಲ್ಲದೆ ನಿರ್‍ಮಾಣವಾಗುತ್ತ ಬಂದದ್ದು-

ಎಲ್ಲಾ ಗೊತ್ತಾಗುತ್ತಿದೆ ಸಿಂಹಾಸನವೇ
ನಿನಗೆ ಹೊತ್ತಾಗುತ್ತಿದೆ ಜೋಳವಾಳಿಯೇ

ಈಗ-
ನನ್ನ ಕಿವಿ ನನ್ನದು
ನನ್ನ ನುಡಿ ನನ್ನದು
ನನ್ನ ಚರ್‍ಮ ನನ್ನದು
ನನ್ನ ಮೂಗು ನನ್ನದು
ನನ್ನ ಕಣ್ಣು ನನ್ನದು
ಕಡೆಗೆ-
ಈ ಮಣ್ಣು ನನ್ನದು.

ಯಾಕೆಂದರೆ-
ನೋಟ ನುಡಿಗಳ ಮೇಲೆ
ಸ್ಪರ್‍ಶ ಸಂವೇದನೆಯ ಮೇಲೆ
ಶಬ್ದ ಸ್ಪಂದನದ ಮೇಲೆ
ವಾಸನೆ ವಿವೇಚನೆಯ ಮೇಲೆ

ಗುಲಾಮ ಗೀರುಗಳು ಈಗ ಮಾಯುತ್ತಿವೆ
ವರ್‍ತಮಾನದ ಅರ್‍ಥ ಹುಡುಕುತ್ತಿವೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ