Home / ಕವನ / ಕವಿತೆ / ಅಮ್ಮ

ಅಮ್ಮ

ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ
ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ
ತನ್ನತನ ಮುಕ್ಕಾಗಿ ಸಿನಿಮಾ ಮಹಲು
ರಸ್ತೆಯಮಲಿಗೆ ಸಿಕ್ಕಿದವಳಲ್ಲ.
ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು
ಕೂದಲು ನರೆತವಳು.
ಸದಾ ಸೌದೆ ಬುತ್ತಿ ನೆತ್ತಿಮೇಲಿಟ್ಟು ಕರ್ಮಿಸುವ
ನೀತಿ ನಿಯತ್ತು ನಿರ್ಮಿಸುವ
ನಿದರ್ಶನವಾದವಳು.
ಭೂತ ಗರ್ಭದಲ್ಲಿ ಹೊತ್ತು ವರ್ತಮಾನದಲ್ಲಿ ಹೆತ್ತು
ಭವಿಷ್ಯದ ಬಾಗಿಲಿಗೆ ನನ್ನ ಬಿಟ್ಟವಳು.
ಬಗಲಲ್ಲಿ ಜಗಲಿಯಲ್ಲಿ ಹರಿಸುವ ತೊದಲಲ್ಲಿ
ತಣಿದು ಕೈಹಿಡಿದು ನಡೆಸಿದವಳು
ಮೌನಗೌನಿನಲ್ಲಿ ಅರಳುಮನವಾದವಳು.

ಆಕೆ ಬಿತ್ತಿದ ಬಯಲು ಮಮತೆ ಮಡಿಲು
ಸುಳಿಯಾಗಿ ಬಿಡುತ್ತೆ.
ಕುರ್ಜಿಗೆಯಿಂದ ಕಳೆ ತೆಗೆದು ಪೈರು ಮುದ್ದಿಸುವ
ಸಹಜ ಸ್ಫುರಣ ಹೂರಣ ಒಳಗೆಳೆಯುತ್ತೆ.

ಅಲ್ಲಿ ಹಬ್ಬಿದಾಲದ ನೆರಳು; ತಬ್ಬಿ ತಣಿಯುವ ಕರುಳು
ಆಳದ ಹೆಜ್ಜೆಯೊತ್ತುಗಳು; ಭೂತ ಬದ್ಧಗಳು;
ಭಟ್ಟಂಗಿ ಸ್ವಾ-ಗತ ಶೈಲಿ ಮೈಲಿಗಲ್ಲುಗಳು.

ಅಮ್ಮನ ಬಾಳ ಬೇಲಿಯಲ್ಲಿ ಬೆಳೆದೆ.
ತೋಳುತಲ್ಪದಲ್ಲಿ ಒಂದೊಂದೇ ತುತ್ತು ತಿಂದೆ.
ನೆರಳು ಕರುಳು ಕರೆದ ಸುಖಕ್ಕೆ ಸಂದೆ.
ಬರಬರುತ್ತ ಬೇಲಿಯಾಚೆ ಬದುಕಿನ ಬೆದಕು; ಚುರುಕು.
ಗೇಟು ದಾಟಿ ಹೊರಗೆ ಹೂದೋಟ ನೋಟ; ಸಿದ್ದಾರ್ಥಮಾಟ.
ಬಿಸಿಲ ಟಿಸಿಲಲ್ಲಿ ಹೂ ಹಣ್ಣಿನಾಸೆ; ಬುದ್ಧಪಿಪಾಸೆ.
ಹುಡುಕುತ್ತ ಹೊರಟವನನ್ನು ಬೇಲಿಬಿಟ್ಟು-
ನೋಡುತ್ತಾಳೆ; ಭವಿಷ್ಯ ತಿನಸು ಕನಸುತ್ತಾಳೆ.
ಹೋಗುತ್ತಲೇ ಇರುವ ನಾನಲ್ಲೇ ಕರಗುವುದನು
ಕಾಣಲಾರದೆ ಕೈಬೀಸಿ ಧ್ವನಿಸುತ್ತಾಳೆ.
ಓಡಿಬಂದು ಗೇಟಿನ ಬಳಿ ತಾಯ ತೆಕ್ಕೆಗೆ ಬಿದ್ದ
ನನಗೆ ಹೂದೋಟದಾಸೆ.
ತಾಯ ಬೇಲಿ-ನನ್ನ ಹೂದೋಟಗಳ
ಗೇಟು ಒಂದಾಗಿಸುವಾಸೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...