Home / ಕವನ / ಕವಿತೆ / ದೇವರೆಂದರೇನು ಅಜ್ಜ?

ದೇವರೆಂದರೇನು ಅಜ್ಜ?

“ದೇವರೆಂದರೇನು ಅಜ್ಜ, ದೇವರೆಂದರೇನು ?
ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ”

“ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು,
ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು,
ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ.
ಏಸು, ಗಾಂಧಿ ಜೀವಜಲವ ಸುರಿಸಿ ಬೆಳೆದ ತೆನೆ.
ಎಂಥ ಮಾರುಕಟ್ಟೆಯಲ್ಲೂ ಸಿಗದ ಸರಕು ಮಗೂ,
ತಾಯ ಕಣ್ಣ ಬೆಳಕಿನಲ್ಲಿ ಹೊಳೆವ ತಾರೆ ಅದು.

“ದೇವರನ್ನೆ ಹೋಲುವುದು ರಾತ್ರಿ ತೆರೆದ ಬಾನು,
ತಲೆಯನೆತ್ತಿ ನೋಡಿದವರಿಗೆಲ್ಲ ಕಂಡರೂನು
ಮುಟ್ಟಬರದು, ಬೆನ್ನನಟ್ಟಿ ಹೋದರೂನು ಸಿಗದು,
ಇದೆ, ಇಲ್ಲ ಎರಡೂ ನಿಜ ತೆಕ್ಕೆಯೊಳಗೆ ಬರದು.
ಬಿತ್ತದೊಳಗೆ ಮಲಗಿರುವ ವೃಕ್ಷದಂತೆ ಅದು,
ಹೂವಿನೆದೆಯ ಮಾರ್ದವದಲಿ ಹರಿವ ಹಾಗೆ ಮಧು.

“ಎಷ್ಟೇ ಮಳೆ ಸುರಿದೂ ಅದು, ಗಾಳಿಯ ಥರ, ನೆನೆಯದು,
ಗಾಳಿ ಎಷ್ಟೆ ಬೀಸಿದರೂ, ಬೆಳಕಿನ ಥರ, ಅಲುಗದು,
ಮತ್ತೆ ಮತ್ತೆ ಮೊಗೆದರೂ ಕುಳಿ ಬೀಳದ ನೀರು,
ಕತ್ತಲ ಪಡೆ ಸೀಳಿ ನಡೆವ ತಂಬೆಳಕಿನ ತೇರು.
ನಮ್ಮ ಸುತ್ತ ಇದ್ದೂ ಅದು ನಮಗೆ ಸಿಗುವುದಲ್ಲ,
ಸಿಕ್ಕವರಿಗೆ ಕೂಡ ಆದನು ತಿಳಿಸಬರುವುದಿಲ್ಲ.

“ಮುಗಿಲ ರೆಕ್ಕೆ ಮಡಚಿ ಕುಂತ ಕಾಲವೆಂಬ ಹಕ್ಕಿ,
ಗ್ರಹ ತಾರಗಳದಕೆ ತಿನ್ನಲೆರಚಿದಂಥ ಅಕ್ಕಿ.
ಮ್ಮೆತುದಿಗಳೆ ಕಾಣದಂಥ ಮಹದಾಕೃತಿ ಅದು,
ಅಣುವಿನೆದುರ ಬೆಟ್ಟದಂತೆ ನಮ್ಮೆದುರಲಿ ಅದು.
ಹೀಗಿದ್ದೂ ಅದು ಸಣ್ಣನೆ ಕಣಕೂ ಕಿರಿದಂತೆ,
ಕೇಳುವ ನಮ್ಮೊಳಗಿನೊಳಗೆ ಅಣುವಾಗಿದೆಯಂತೆ!

“ದೇವರೆನುವುದೆಲ್ಲಕಿಂತ ತುಂಬ ಸರಳ ಮಗೂ.
ಆದರದನು ತಿಳಿದವರು ತುಂಬ ವಿರಳ ಮಗೂ”
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...