Home / ಕವನ / ಕವಿತೆ / ಪಾಣಿಪತ

ಪಾಣಿಪತ

(ಒಂದು ಯಕ್ಷಗಾನ ದೃಶ್ಯ)
[ವಾರ್ಧಿಕ ಷಟ್ಪದಿ]

ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ
ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್
ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ ||
ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು
ಕುಂಭಜನ ಚಕ್ರಕೋಟೆಗೆ ನಡೆವ ಅಭಿಮನ್ಯು
ವೆಂಬವೋಲ್ ಮಾರಾಟದಳವೆರಸಿ ಪೊರಮಟ್ಟನಾ ಸದಾಶಿವ ಭಾವುವೂ

[ಸೌರಾಷ್ಟ್ರ ತ್ರಿವಿಡೆ]
ಆ ಸಮರದಲ್ಲಿ ಭಾವು ಓಲಗ
ದಾ ಸಭೆಯ ರಚಿಸಿದನು ಸಿಂಧ್ಯ ವಿ
ಲಾಸಿ ಗಾರ್ಡಿಯ ಹೋಳಕರ ವಿಶ್ವಾಸರಾವೊಡನೆ ||

ಭಾವು:- ಹೊಳೆಯ ಕಳೆದೆವು; ಹೊಳಲು ಹಿಡಿದೆವು;
ತುಳಿದೆವಫ್ಘಾನ್‌ ಸರ್ಪವನು ಇ
ನ್ನುಳಿದು ಹೋದರೆ ಕಚ್ಚದಂದದಿ ತಿಳಿಪುದಿಂದೆನಗೆ ||

[ಭಾಮಿನಿ ಷಟ್ಪದಿ]
ಭಾವುವಿನ ನುಡಿಕೇಳಿ ಮಂತ್ರಿ ಸ
ಭಾವಲಯ ಭಟರಂತರಂಗದ
ಭಾವ ತೋರದೆ, ಓರ್ವರೋರ್ವರ ಮೊಗವ ನೋಡುತಿರೆ; |
ನಾವು ತಳುವುದೊ? ತಳರುವುದೂ? ಮೇಣ್
ಸಾವಿಗಂಜುತ ಹಿಂದುಳಿವುದೋ?
ನೀವು ಯೋಚಿಸಿ ಹೇಳ್ವುದೆಂದನು ಕೈಯಮೀಸೆಯಲಿ |

(ಕಾಂಬೋಧಿ-ಝಂಪೆತಾಳ)
ಹೋಳಕರ:- ದಳವಾಯಿ ಲಾಲಿಪುದು ಹಳಬರ ನುಡಿಯೆಂದು
ಹುಲುಗೆಡಹಿ ಹೊಳೆಯ ದಾಟಿರುವೆ!
ತಲೆಗಟ್ಟಿ ಎಂದು ಕಲ್ಲನು ಹಾಯ್ದೆ ಭಾವುವೇ
ತಿಳಿಗೇಡಿ, ಹೊರ ಕುರುಬನಿಗೆ ಕುರಿಯ ಕೊಟ್ಟೆ |
ಘೋರ ಸೈನ್ಯಗಳಿಂದ ಹೋರದೆ, ಕೆಲಮಂದಿ
ವೀರರಿಂ ಕಾದಾಡಿ ಹಗೆಯಾ
ಮಾರಾಯ ಮೇಲ್ಬಿದ್ದು ಹಾರಿಸುವುದನು ತೊರೆದೆ.
ದೂರ ಸೀಮೆಯು! ದವಸ ಪೂರೈಕೆ ಅಹುದೆ ||

[ಸಾರಂಗ-ಅಷ್ಟತಾಳ]
ಗಾರ್ಡಿ:- ವಂಚನೆಯಲಿ ವೈರಿಯನು ಕೊಲ್ಲಲಾಗದು-ಭಾವು ಕೇಳು-ಒಳ
ಸಂಚಿನ ರಣವಿದ್ಯೆಯನ್ನು ತೋರಲಾಗದು, ಭಾವು ಕೇಳು, ||
ಫ್ರೆಂಚರು ಜಯಲಕ್ಷ್ಮಿ ಸೆಳೆಯುವ ಹಂಚಿಕೆ-ಭಾವು ಕೇಳು-ಸಿಡಿ
ಲ್ಮಿಂಚಿನೊಲ್‌ ಒಮ್ಮೆಯೇ ಬಾಳುತ, ಬಡಿವುದು;- ಭಾವುಕೇಳು, ||

[ಮಾರವಿ-ಏಕತಾಳ]
ಹೋಳಕರ:- ಉದ್ಧತ ಗಾರ್ಡಿ, ಪ್ರಸಿದ್ಧನೆ ನಿನ್ನ ಪ್ರಬುದ್ಧಿಯ ಕಾರಣದಿ,||
ಯುದ್ಧದಿ ನುರಿತೀ ವೃದ್ಧರಿಗಪ್ಪುದೆ ಪದ್ಧತಿ ಇದು ರಣದಿ?||
ಹಿರಿಯರ ಕಲೆಯಿಂ ದೊರಕಿತು ಮಾರಾಟರ ರಾಜ್ಯೋದಯವು||
ಬರುವುದು ಗಾರ್ಡಿಯ ಪರದೇಶದ ಹೊಸ ಹರಿಬದಿ ಅಪಜಯವು||
ಹೊತ್ತಿತು ಕಲಹವು ಕತ್ತಿಯನಿಬ್ಬರು ಎತ್ತಲು ಸಭೆಯಲ್ಲಿ
ಮುತ್ತುಗ ಮುಳ್ಳನು ತೆತ್ತಿಸಿದಂತೆಯೆ ನಿತ್ತನು ದೊರೆ ಆಲ್ಲಿ||

[ವಾರ್ಧಿಕ ಷಟ್ಪದಿ]
ಕಾಳಗಕ್ಕನುವಾಗಿ ಬಂದಿದ್ದ ಭಾವುವಿನ
ಪಾಳೆಯದಿ ಕಚ್ಚಾಟವೆಂಬಂತೆ ಮಲ್ಹಾರಿ
ಹೋಳಕರ ಮಹದಾಜಿ ಸಿಂಧ್ಯದಾಮಾಜಿ ಗಾಯಕವಾಡ ವೀರಗಾರ್ಡಿ ||
ಹಾಳುನೆವ ಹೂಡಿ ಜಗಳಾಡಿ ಕೆಲರೋಡಿದರು
ಮಳವಕೆ ಬಳಿಕಾ ಮರಾಟ ಸೈನ್ಯವನೊತ್ತಿ
ತೂಳಿದುದು ಶಹನಪಡೆ ಗೂಡಿನಲಿ ಸಿಲುಕಿದಿಲಿಯಂತಾದನಾ ಭಾವುವು ||

ಎಳೆ ಅಡಕೆ ಕತ್ತರಿಯ ಬಾಯೊಳಗೆ ಬಿದ್ದಂತೆ
ಮಳೆ ಹೊಯ್ವ ಹೊಯ್ಲಿನಲಿ ಹಸಿ ಮಡಕೆ ಅದ್ದಂತೆ,
ಬೆಳೆಯ ತೆಂಗಿನ ಗಿಡಕೆ ಕಾಡ್ಗಿಚ್ಚು ಹೊದ್ದಂತೆ ರಣರಂಗದಬ್ದಾಲಿಯಾ ||
ದಳದುಳಕ್ಕಿಂಬಾಗಿ ಬಾಗಿ ಬೇಸತ್ತು ಸ
ತ್ತುಳಿದು ತುಳಿದಳವಳಿದು ಕೊಳುಗುಳದೊಳಾ ಭಾವು
ದಳವಾಯಿ ಪಡೆಯೊಡನೆ ಪವಡಿಸಿದ ವೀರ ಶ್ರೀ ಹಾರವಂ ಜೋಗುಳಿಸಲು

[ಮೋಹನ-ಏಕತಾಳ]
ಮಂಗಲಮ ಜಯ ಮಂಗಲಂ ಶುಭ ಮಂಗಲಂ ಜಯ ಮಂಗಲಂ,
ನೆತ್ತರ ಮೂಲಕ ಧರ್ಮವನು-ಹಾ!
ಇಂಬು ಗೊಂಡುದ್ರೇಕದಿಂದ ನಿಂದಿರಲಿತ್ತ.
ಬಿತ್ತರಿಸುವ ದುಷ್ಕರ್ಮವನು ||
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಭೇಧವ ತಂದವಗೆ, ||
ಬಲವಂತರು ತಮ್ಮಯ ಬಲದೆ-ದು
ರ್ಬಲರನು ಕಾಳಗದಲಿ ಕೊಲದೆ, ||
ಒಲಿದವರವರಾತ್ಮೋನ್ನತಿಯನು ಗಳಿ
ಸಲು ಬೇಕನ್ನುತ ಸಾರುವಗೆ ||
ಹಿಂದು ಮುಸಲ್ಮಾನ ಸುನ್ನಿ ಶೇಕ್-ಜೈ
ನಾಂಧ್ರ ಕಿರಿಸ್ತಾನ್ ಫಾರಸಿ ಶೀಕ್ ||
ಇಂದಾ ಐದನೆ ಜೋರ್ಜರ ಕೊಡೆಯಲಿ
ಒಂದಾಗಿರಿಸಿದ ಮಹಿಮನಿಗೆ, ||
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟ್ರೋನ್ನತಿಯೇ ಇಹಸುಖವೆಂದು, ||
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ ||
-ಭಕ್ತಿಸಂದೇಶ
(ರೌದ್ರಿ ಸಂವತ್ಸರ)
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...