Home / ಕವನ / ಕವಿತೆ / ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ.
ತನ್ನ ದಾರಿಯ ಪಥ ಸಂಚಲನ
ಸರಳೀಕರಿಸಿಕೊಳ್ಳುತ್ತ

ಗೊತ್ತು ಅವಳಿಗೆ,
ಆಸ್ಟ್ರೇಲಿಯಾದ ಏಕಾಂತ ಬೀದಿಗಳು
ಬೆಂಗಳೂರಿನ ಕಾಂಕ್ರೀಟು
ಕಾಡುಗಳ ಕಾಲುದಾರಿಗಳು
ನಮ್ಮ ನಿಮ್ಮೂರಿನ ಕಾಡಿನ
ಕವಲು ಹಾದಿಗಳು
ಚೂರು ಬದಲಾಗಿಲ್ಲ.
ನಾಯಿಗಳ ಆಕ್ರಮಣ
ಕೊಳ್ಳೆ ಹೊಡೆಯುವುದ ಬಿಟ್ಟಿಲ್ಲ.
ನಡೆಯುತ್ತಿದ್ದಾಳೆ ಅವಳು

ತುಂಡಂಗಿ ಗೀರಿದ ಉದ್ರೇಕ
ತಡೆಯಲಾಗದೇ
ತೋಳಗಳು ಮಾಂಸದ ರುಚಿಗೆ ಬಿದ್ದಿವೆ
ಎಂದೆಲ್ಲಾ ಜನರಾಡಿಕೊಳ್ಳುತ್ತಾರೆ.
ನಿಜಕ್ಕೂ ಅದಲ್ಲ.
ಬುರಖಾದ ಒಳಗಿನ ಮುಚ್ಚಿದ ಬೆಚ್ಚಗಿನ
ಮೈ ಕೂಡ ವಿವರ್ಣವಾಗಿದೆ.

ಕರಿಮಣಿಯ ಜೊತೆಗೆ ಅಲ್ಲಲ್ಲಿ
ಹೊಳೆವ ಗುಂಡುಗಳ ಪೋಣಿಸಿ
ಕನಸಿನಲ್ಲಿ ಮಾಲೆ ಕಟ್ಟುತ್ತಾಳೆ
ಲಾಸ್ಯವಾಡುತ್ತದೆ ತುಟಿಯಂಚು
ತಟ್ಟನೆ ಕೆಂಪು ದೀಪ ಉರಿಯುತ್ತದೆ.
ಭಗ್ನಗೊಳ್ಳುತ್ತವೆ,
ಸೆಟೆದು ಚೂರಾಗುತ್ತವೆ ಮಣಿಗಳು
ತುಟಿಯೊಡೆದು ರಕ್ತ ಒಸರುತ್ತದೆ.
ಮೂಲೆಯಲ್ಲಿ ರಾಶಿ ತುಪ್ಪೆಯಾಗಿರುವ
ಬಲೂನುಗಳು ಎದ್ದು
ವಿಕಾರ, ವಿದ್ರೂಪ ಭಂಗಿಗಳಲ್ಲಿ
ಗೋಡೆ ಎತ್ತರಕೆ ಜಿಗಿದು
ಜಡ್ಡುಗಟ್ಟಿಸುತ್ತವೆ ಅವಳನ್ನು.
ಆದರೂ ಕಣ್ಣು ಮುಚ್ಚಿ ಕನಸೇರುತ್ತಾಳೆ
ಮಣಿ ಪೋಣಿಸುತ್ತಾಳೆ.

ದಾರಿ ದಾರಿಯ ಮಧ್ಯೆ
ವೈರುಧ್ಯಗಳ ಕವಲು ಸೀಳುಗಳು
ಅಣಕಿಸುತ್ತವೆ ದಿಕ್ಕು ತಪ್ಪಿಸುತ್ತವೆ ಕೂಡಾ
ಮುಡಿ ಕಟ್ಟಿ, ಮುಡಿ ಬಿಚ್ಚಿ
ಬೆದರು ಬೊಂಬೆಗಳು ಯಾತ್ರೆಯಲ್ಲೂ
ಜಾತ್ರೆ ಮಾಡುತ್ತವೆ.
ಬಾವಿಕಟ್ಟೆಯ ಎಂದೂ ಒಣಗದ ಹಸಿಯಂತೆ.

ಯೂರೋಪಿನ ಕರಿಯ ಜೀತರ
ಮಾರಣ ಹೋಮ
ಇಸ್ರೇಲು, ಪ್ಯಾಲಿಸ್ತೇನಿನ ಕರಿಯ
ಬಂದೂಕುಗಳು
ಅರಬರ ಮರಳುಗಾಡು
ಕೊರಿಯಾದ ಕಗ್ಗೋಲೆಗಳು
ಸರಣಿ ಅನುಕ್ರಮವಾಗಿ
ಕೆಂಪು ಬಣ್ಣದ ಬಟ್ಟೆಗಳಲ್ಲಿ
ಕಸ ಎತ್ತಿ ಸುರುವಿ ಹಾಕುತ್ತವೆ.
ಕಥೆ ಹೇಳುತ್ತವೆ.
ಕಣ್ಣಿನ ದಳಗಳು ಕೊಳದಲ್ಲಿ ಮುಳುಗೇಳುತ್ತವೆ.
ನಡೆಯುತ್ತಿದ್ದಾಳೆ ಆಕೆ.

ಕಲಾಯಿ ಕಂದಿದ ತಾಮ್ರದ
ಪಾತ್ರೆಯಲ್ಲಿ ಅನ್ನಕ್ಕಿಡಬಾರದು
ಅಂದುಕೊಳ್ಳುತ್ತ ನಡೆಯುತ್ತಿದ್ದಾಳೆ.
ನಿತ್ಯಪಥದ ಮಿಗೆಯಗಲ ಅಂಕುರಿಸಿದ
ಕೊಳೆಗಳ ಕೈಗೆಟುಕುವಷ್ಟು ಕಿತ್ತೆಸೆದು
ಮತ್ತೆ ನಡೆಯುತ್ತಾಳೆ.
ಅಕ್ಷರದ ಅರಮನೆಗೆ ಪರಿಮಳವ
ಮಾರಿ ಬರಬೇಕು ಎನ್ನುತ್ತ
ನಡೆಯುತ್ತಿದ್ದಾಳೆ ಅವಳು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...