Home / ಕವನ / ಕವಿತೆ / ಬ್ರಹ್ಮಾಂಡದ ದನಿಗಳು

ಬ್ರಹ್ಮಾಂಡದ ದನಿಗಳು

ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು
ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ
ಒಂದಿಷ್ಟು ಹಳತಾಗದ ಅದನ್ನೊಯ್ದು
ನೆತ್ತಿಯ ಗೋಡೆಗೆ
ಅಂಟಿಸಿಕೊಂಡರೆ ಚೆನ್ನ
ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ.

ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್ದು
ನೆಲಪಾಲಾದ ಕಸಗಳನ್ನೆಲ್ಲಾ ಎತ್ತಿ ಬಿಸಾಡಿದರೂ
ಕಂಬನೆಟ್ಟ ಕುಣಿ ಅರೆತೆರೆದುಕೊಂಡು ಹಾಗೇ ಬಿದ್ದಿದೆ
ಮಣ್ಣು ಕಲ್ಲುಗಳ ತುಂಬಿ ತಗ್ಗು ಮುಚ್ಚುಲೇ?
ಎನ್ನುತ್ತಿದ್ದಾನೆ- ಕೆಲಸದ ಮಂಕಾಳು.

ಸಿದ್ಧಾಂತ ತತ್ವ ಆದರ್ಶಗಳು ಜಪಕ್ಕಾಗಿ
ವಾದ ಪ್ರತಿವಾದ ಆಶಯಗಳು ನೆಪಕ್ಕಾಗಿ
ಹೀಗೆ ಪರಸ್ಪರ ವೈರುಧ್ಯಗಳ ಬಿಸಿನೀರು
ತುಂಬಿಕೊಂಡ ಹಂಡೆ
ಬೋರಲಾಗಿ ಬಿದ್ದರೆ, ಆ ನೆಲ ಹಸಿರುಕ್ಕಿಸಲಾರದು
ಎನ್ನುತ್ತಿದ್ದಾರೆ ಪ್ರೊಫೆಸರ್ರೊಬ್ಬರು.

ಭಾವ ಚಿಗುರುವುದು ಎದೆಯಲ್ಲಿ
ಮೆದುಳು ಮೀಯಬೇಕು ಸತ್ಯಂ ಶಿವಂ ಸುಂದರಂ
ಈ ಚುಕ್ಕಿ ಹೊಳಹನ್ನು
ಭಾಷ್ಯವಾಗಿಸುವುದೇ ಕಾಯಕವಾದ
ಗುರುಗಳ ಕೈಲಿಡಿದ ಬಳಪ ನೋಡುತ್ತ,
ಅದನ್ನೆ ಚೀಪುವ ಆಸೆಯುಕ್ಕಿ
ಬೆನ್ನಿಗೆ ಹೊಟ್ಟೆಯಂಟಿಸಿಕೊಂಡ ಹುಡುಗ
ಎಣ್ಣೆಗಾಣದ ಒಣಗೂದಲ ಕೆರೆದುಕೊಳ್ಳುತ್ತಾನೆ.
ಬಿಸಿಯೂಟದ ಘಮಘಮ ಬರುತ್ತಿಲ್ಲವೇ?
ಪಕ್ಕದ ಹುಡುಗನಿಗೆ ತಿವಿದು ಕೇಳುತ್ತಿದ್ದಾನೆ.

ಶತಶತಮಾನಗಳಿಂದ ಉರಿಬಿದ್ದ
ಬೆಂಕಿಯ ಮನೆಯ
ತಣ್ಣಗಾಗಿಸಲೆಂದು ಇದ್ದಿಲನ್ನು ಸುರಿಯುತ್ತಿದ್ದಾರೆ
ಆಚೀಚೆಯ ಮನೆಯವರು
ಆ ಮನೆಹೊಕ್ಕ ಇದ್ದಿಲು ಕ್ಷಣದಲ್ಲಿ
ನಿಗಿ ನಿಗಿಕೆಂಡವಾಗುತ್ತ
ವ್ಯಾಪಿಸಿಕೊಳ್ಳುತ್ತಿದೆ ಇನ್ನರ್ಧ ಜಾಗೆಯನ್ನು ಬಿಡದೆ
ನೆಲವೂ ಧಗಧಗನೇ ಉರಿಯಲಾರಂಭಿದರೆ ಮುಂದೇನು?
ಕಂಗಾಲಾಗಿ ಕೇಳುತ್ತಿದ್ದಾರೆ ನೆರೆಹೊರೆಯವರು.

ಸಮನ್ವಯತೆ ಫಲಕ ಧರಿಸಿದ ವಿಭಜಕ ಕಂಬಕ್ಕೆ
ಡಿಕ್ಕಿಹೊಡೆದ ಪಾರಿವಾಳವೊಂದು
ಸತ್ತೇ ಹೋಯಿತು
ಪರಿತಪಿಸುತ್ತಿದ್ದಾಳೆ ಹೆಣ್ಣೊಬ್ಬಳು

ಹತ್ತಾರು ರಾಗಗಳು ಗಿರಕಿ ಹೊಡೆಯುತ್ತವೆ
ಒಂದೇ ಮಂಡಲದಲ್ಲಿ ತಾರಕಕ್ಕೇರುತ್ತಿದೆ.
ಬ್ರಹ್ಮಾಂಡ ಜ್ಞಾನದ ಆಲಾಪಗಳಂತೆ
ಮುಖ ಎದೆ ಹೊಟ್ಟೆ ತುಂಬಾ ನೆರಿಗೆಗಳ
ಆಭರಣ ಧರಿಸಿದ ಸಾಧುವೊಬ್ಬ ಮುಗುಳ್ನಗುತ್ತಾನೆ.

ಬೆಂಕಿ ಮುಳ್ಳುಗಳನ್ನೆಲ್ಲಾ ಜಾಡಿಸಿ ಗುಡಿಸಿ
ಸೆಳೆದೊಯ್ಯುವಂತಹ ಮಳೆ ಬರುವ ಸುಣುಕು
ಆ ಹೊಸ ಸೋನೆ ಹನಿಯಲ್ಲಿ ಇವರೆಲ್ಲರೆಲ್ಲರೂ
ಅಪಾದಮಸ್ತಕ ನೆನೆಯಲಿ
ಮುದಗೊಳ್ಳಲಿ ದೇವರೇ..
ಕನಸುತ್ತೇನೆ ನಾನು…
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...