Home / ಕವನ / ಕವಿತೆ / ಬ್ರಹ್ಮಾಂಡದ ದನಿಗಳು

ಬ್ರಹ್ಮಾಂಡದ ದನಿಗಳು

ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು
ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ
ಒಂದಿಷ್ಟು ಹಳತಾಗದ ಅದನ್ನೊಯ್ದು
ನೆತ್ತಿಯ ಗೋಡೆಗೆ
ಅಂಟಿಸಿಕೊಂಡರೆ ಚೆನ್ನ
ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ.

ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್ದು
ನೆಲಪಾಲಾದ ಕಸಗಳನ್ನೆಲ್ಲಾ ಎತ್ತಿ ಬಿಸಾಡಿದರೂ
ಕಂಬನೆಟ್ಟ ಕುಣಿ ಅರೆತೆರೆದುಕೊಂಡು ಹಾಗೇ ಬಿದ್ದಿದೆ
ಮಣ್ಣು ಕಲ್ಲುಗಳ ತುಂಬಿ ತಗ್ಗು ಮುಚ್ಚುಲೇ?
ಎನ್ನುತ್ತಿದ್ದಾನೆ- ಕೆಲಸದ ಮಂಕಾಳು.

ಸಿದ್ಧಾಂತ ತತ್ವ ಆದರ್ಶಗಳು ಜಪಕ್ಕಾಗಿ
ವಾದ ಪ್ರತಿವಾದ ಆಶಯಗಳು ನೆಪಕ್ಕಾಗಿ
ಹೀಗೆ ಪರಸ್ಪರ ವೈರುಧ್ಯಗಳ ಬಿಸಿನೀರು
ತುಂಬಿಕೊಂಡ ಹಂಡೆ
ಬೋರಲಾಗಿ ಬಿದ್ದರೆ, ಆ ನೆಲ ಹಸಿರುಕ್ಕಿಸಲಾರದು
ಎನ್ನುತ್ತಿದ್ದಾರೆ ಪ್ರೊಫೆಸರ್ರೊಬ್ಬರು.

ಭಾವ ಚಿಗುರುವುದು ಎದೆಯಲ್ಲಿ
ಮೆದುಳು ಮೀಯಬೇಕು ಸತ್ಯಂ ಶಿವಂ ಸುಂದರಂ
ಈ ಚುಕ್ಕಿ ಹೊಳಹನ್ನು
ಭಾಷ್ಯವಾಗಿಸುವುದೇ ಕಾಯಕವಾದ
ಗುರುಗಳ ಕೈಲಿಡಿದ ಬಳಪ ನೋಡುತ್ತ,
ಅದನ್ನೆ ಚೀಪುವ ಆಸೆಯುಕ್ಕಿ
ಬೆನ್ನಿಗೆ ಹೊಟ್ಟೆಯಂಟಿಸಿಕೊಂಡ ಹುಡುಗ
ಎಣ್ಣೆಗಾಣದ ಒಣಗೂದಲ ಕೆರೆದುಕೊಳ್ಳುತ್ತಾನೆ.
ಬಿಸಿಯೂಟದ ಘಮಘಮ ಬರುತ್ತಿಲ್ಲವೇ?
ಪಕ್ಕದ ಹುಡುಗನಿಗೆ ತಿವಿದು ಕೇಳುತ್ತಿದ್ದಾನೆ.

ಶತಶತಮಾನಗಳಿಂದ ಉರಿಬಿದ್ದ
ಬೆಂಕಿಯ ಮನೆಯ
ತಣ್ಣಗಾಗಿಸಲೆಂದು ಇದ್ದಿಲನ್ನು ಸುರಿಯುತ್ತಿದ್ದಾರೆ
ಆಚೀಚೆಯ ಮನೆಯವರು
ಆ ಮನೆಹೊಕ್ಕ ಇದ್ದಿಲು ಕ್ಷಣದಲ್ಲಿ
ನಿಗಿ ನಿಗಿಕೆಂಡವಾಗುತ್ತ
ವ್ಯಾಪಿಸಿಕೊಳ್ಳುತ್ತಿದೆ ಇನ್ನರ್ಧ ಜಾಗೆಯನ್ನು ಬಿಡದೆ
ನೆಲವೂ ಧಗಧಗನೇ ಉರಿಯಲಾರಂಭಿದರೆ ಮುಂದೇನು?
ಕಂಗಾಲಾಗಿ ಕೇಳುತ್ತಿದ್ದಾರೆ ನೆರೆಹೊರೆಯವರು.

ಸಮನ್ವಯತೆ ಫಲಕ ಧರಿಸಿದ ವಿಭಜಕ ಕಂಬಕ್ಕೆ
ಡಿಕ್ಕಿಹೊಡೆದ ಪಾರಿವಾಳವೊಂದು
ಸತ್ತೇ ಹೋಯಿತು
ಪರಿತಪಿಸುತ್ತಿದ್ದಾಳೆ ಹೆಣ್ಣೊಬ್ಬಳು

ಹತ್ತಾರು ರಾಗಗಳು ಗಿರಕಿ ಹೊಡೆಯುತ್ತವೆ
ಒಂದೇ ಮಂಡಲದಲ್ಲಿ ತಾರಕಕ್ಕೇರುತ್ತಿದೆ.
ಬ್ರಹ್ಮಾಂಡ ಜ್ಞಾನದ ಆಲಾಪಗಳಂತೆ
ಮುಖ ಎದೆ ಹೊಟ್ಟೆ ತುಂಬಾ ನೆರಿಗೆಗಳ
ಆಭರಣ ಧರಿಸಿದ ಸಾಧುವೊಬ್ಬ ಮುಗುಳ್ನಗುತ್ತಾನೆ.

ಬೆಂಕಿ ಮುಳ್ಳುಗಳನ್ನೆಲ್ಲಾ ಜಾಡಿಸಿ ಗುಡಿಸಿ
ಸೆಳೆದೊಯ್ಯುವಂತಹ ಮಳೆ ಬರುವ ಸುಣುಕು
ಆ ಹೊಸ ಸೋನೆ ಹನಿಯಲ್ಲಿ ಇವರೆಲ್ಲರೆಲ್ಲರೂ
ಅಪಾದಮಸ್ತಕ ನೆನೆಯಲಿ
ಮುದಗೊಳ್ಳಲಿ ದೇವರೇ..
ಕನಸುತ್ತೇನೆ ನಾನು…
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...