Home / ಲೇಖನ / ಇತರೆ / ಕೃತಕತೆಯಂದ ನೈಜತೆಗೆ

ಕೃತಕತೆಯಂದ ನೈಜತೆಗೆ

ಪ್ರಿಯ ಸಖಿ

ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವಾಗುತ್ತಿದ್ದೇವೆ ಎಂದು ತನ್ನಷ್ಟಕ್ಕೇ ಗೋಚರವಾಗುತ್ತಾ ಸಾಗುತ್ತದೆ. ಇಂದು ಆಧುನಿಕ ಮಾನವನ ನಡೆನುಡಿಗಳೆಲ್ಲಾ ವ್ಯವಹಾರಿಕವಾಗಿವೆ. ತನಗೆ ಇಷ್ಟವಿರಲಿ ಬಿಡಲಿ ಕಾರ್ಯಸಾಧನೆಗೆ ಅನಿವಾರ್ಯವೆಂಬಂತೆ ಹಲವಾರು ಮುಖವಾಡಗಳನ್ನು ತೊಟ್ಟುಕೊಂಡು ಬಿಟ್ಟಿದ್ದಾನೆ. ಕೆಲವೊಮ್ಮೆ ತನ್ನ ನಿಜ ಮುಖ ಯಾವುದು? ಮುಖವಾಡ ಯಾವುದು? ಎಂಬುದೇ ಅವನಿಗೆ ಗೊಂದಲವಾಗುವಷ್ಟು ಮುಖವಾಡಗಳು ಇಂದು ಪ್ರಮುಖ ಪಾತ್ರ ವಹಿಸುತ್ತಿವೆ.

ಆದರೆ ಸೂಕ್ಷ್ಮ ವ್ಯಕ್ತಿಯೊಬ್ಬನಿಗೆ ತನ್ನ ನೈಜ ಮುಖ ಸದಾ ಕಾಡುತ್ತಿರುತ್ತದೆ. ನೈಜ, ಸೂಕ್ಷ್ಮ ಭಾವನೆಗಳು ಕೃತಕತೆಯ ದಾಳಿಯಿಂದ ಮನದಾಳದಲ್ಲಿ ಸದಾ ನಲುಗುತ್ತಿರುತ್ತದೆ. ವ್ಯಕ್ತಿ ಹೆಚ್ಚು ಹೆಚ್ಚು ಮಹತ್ವಾಕಾಂಕ್ಷಿ, ಅಹಂಕಾರಿ, ಆಶೆಬುರುಕನಾದಷ್ಟೂ ಅವನ ಈ ಎಲ್ಲಾ ಗುಣಗಳ ಪೂರೈಕೆಗಾಗಿ ತನ್ನ ಸುತ್ತಲೂ ಕೋಟೆಗಳನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ. ಜೊತೆಗೆ ಹೆಚ್ಚು ಮುಖವಾಡಗಳನ್ನು
ತೊಟ್ಟುಕೊಳ್ಳುತ್ತಾ ಸಾಗುತ್ತಾನೆ. ಹಾಗೇ ತಾನು ಹಿರಿಯ, ದೊಡ್ಡವ್ಯಕ್ತಿ, ಪ್ರತಿಭಾವಂತ, ಶ್ರೇಷ್ಟ, ಗೌರವಾನ್ವಿತ ಎಂಬೆಲ್ಲಾ ಭ್ರಮೆಗಳು ತಲೆಯನ್ನು ಹೊಕ್ಕರೆ ಅದನ್ನು ಪೂರೈಸುವ ಸಲುವಾಗಿಯೂ ತಾನಾಗಿಲ್ಲದ್ದರ, ಆದರೆ ತಾನು ಭ್ರಮಿಸಿದ್ದರಂತೆ ಕಾಣಲು ಬಲವಂತಕ್ಕೆ ಮುಖವಾಡಗಳನ್ನು ಹಾಕಿಕೊಂಡು ಪೋಸುಗಳನ್ನು ಕೊಡಲು ಪ್ರಾರಂಭಿಸಿ ಬಿಡುತ್ತಾನೆ.

ಸಖಿ, ಆದರೆ ಇವೆಲ್ಲಾ ಕೃತಕತೆಗಳು, ಮುಖವಾಡಗಳು, ನಾಟಕೀಯತೆಗಳು ಒಂದಿಲೊಮ್ಮೆ ವ್ಯಕ್ತಿಗೋ ಇಡೀ ಮಾನವ ಜನಾಂಗಕ್ಕೋ ಅಸಹ್ಯ ತರಿಸುವುದೇ ಇಲ್ಲವೇ? ಅಂತಹ ಕಾಲ ಬಹಳ ಬೇಗ ಬರಲಿ. ನಾವು ಮತ್ತೆ ನಮ್ಮ ನೈಜತೆಗೆ ಬೆಲೆ ಕೊಡುವಂತಾಗಲಿ, ನೈಸರ್ಗಿಕ ಭಾವನೆಗಳನ್ನು ಅರ್ಧೈಸಿಕೊಳ್ಳುವಂತಾಗಲಿ. ಈ ಎಲ್ಲಾ ಮುಖವಾಡಗಳನ್ನು ವ್ಯವಹಾರಿಕತೆಯನ್ನು ಮೀರಿ ನಮಗೆ ನಾವು ಸತ್ಯವಾಗುತ್ತಾ, ಪಾರದರ್ಶಕವಾಗುತ್ತಾ, ಹೋಗುವುದು ಸಾಧ್ಯವೇ ಇಲ್ಲವೇ? ಆ ದಿಕ್ಕಿನೆಡೆಗೆ ನಡೆದಾದರೂ ನೋಡಬೇಕೆಂಬ ಆಸೆ ಈ ಮನುಕುಲಕ್ಕೆ ಬರಬೇಕಲ್ಲವೇ?

ಹೀಗಾದಾಗ ನಮಗೆ ಯಾವ ಧರ್ಮ, ನೀತಿ, ಕಾನೂನು, ಶಾಸ್ತ್ರಗಳೂ ಬೇಕಿಲ್ಲ. ಏಕೆಂದರೆ ಸೂಕ್ಷ್ಮ ಸಂವೇದನೆಗಳಿಗೆ ಮಿಡಿಯುವ ನಮ್ಮ ಪ್ರಾಮಾಣಿಕ ನೈಜತೆ ಆಗ ನಮ್ಮೊಂದಿಗಿರುತ್ತದೆ. ಮನಸ್ಸೆಂಬ ಮಾನದಂಡ ಜೊತೆಗಿರುವ ವ್ಯಕ್ತಿಗೆ ತಪ್ಪು ಸರಿಗಳನ್ನು ತಾನೇ ನಿರ್ಧರಿಸಬಲ್ಲ ಸ್ಥೈರ್ಯವೂ ಇರುತ್ತದೆ. ಹೀಗಾದಾಗ ಬೇರೆ ಚೌಕಟ್ಟುಗಳೆಲ್ಲಾ ಏಕೆ?

ಸಖಿ, ಈ ವ್ಯವಹಾರದ ಬದುಕಿನಲ್ಲಿ ನಿತ್ಯವೂ ನಲುಗುತ್ತಿರುವ ನಮ್ಮ ನೈಜ ಸೂಕ್ಷ್ಮತೆಗಳನ್ನು ಇನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸೋಣ, ಬೇರೆ ಬೇರೆ ಸಂಸ್ಕೃತಿಯ ಧಾಳಿಗೆ ಈಡಾಗುವ ಮೊದಲು ನಮ್ಮ ನಮ್ಮ ಮನದ ಸ್ವಧರ್ಮಕ್ಕೆ ಹಿಂತಿರುಗೋಣ. ಅಲ್ಲಿಯೇ ನಮ್ಮ ನಿಜವಾದ ನೆಲೆಗಳಿರುವುದು. ಈ ಬದುಕಿಗೊಂದು ಬೆಲೆಯಿರುವುದು, ಅಲ್ಲವೇ ಸಖಿ ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...