Home / ಕವನ / ಕವಿತೆ / ಎಲ್ಲ ಹುಡುಗಿಯರ ಕನಸು

ಎಲ್ಲ ಹುಡುಗಿಯರ ಕನಸು

ಅವ್ವ ಕೇಳೇ ನಾನೊಂದ ಕನಸ ಕಂಡೇ….
ಅವ್ವ ಕೇಳೇ ಕನಸೊಂದ ಕಂಡೆನೆ….
ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು
ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು
ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು
ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು. ||ಅವ್ವ||

ಕಣ್ಣರೆಪ್ಪೆ ಬಿಗಿಯೆ ಕದ ತಟ್ಟಿ ಒಳಬಂದ
ಕಾರಿರುಳ ಕೆಂಜೆಡೆಗೆ ಚಂದಿರನ ಮುಡಿದಿದ್ದ
ಕಾಲ್ಗಜ್ಜೆ ಕುಣಿಸುತ್ತ ಶರಣು ಶರಣು ಅಂದ
ಮುಕ್ಕಣ್ಣ ತಾನೆಂದು ಮುಂಗೈಗೆ ಮುತ್ತಿಟ್ಟ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ….
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ ||ಅವ್ವ||

ತುಂಬೆಯ ಹೂ ಬಿಡಿಸಿ ತುರುಬಿಗೆ ಮುಡಿಸಿದ
ಒಂದೊಂದು ಕಿವಿಯಲ್ಲೂ ದುಂಬಿಯ ಇರಿಸಿದ
ಮಿಂಚಿನ ಹುಳೂವಲ್ಲೇ ಮೂಗುತಿಯ ಮಾಡಿದ
ನೇರಳೆ ಹಣ್ಣಿನ ಹಾರವ ತೊಡಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ…..
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ ||ಅವ್ವ||

ಹುಲಿಚರ್‍ಮ ಹೊದ್ದರೂ ಹಾಲುಮನಸಿನ ಹುಡುಗ
ಡೊಳ್ಳ ಬಾರಿಸಿ, ಢಕ್ಕೆಯ ಬಡಿದು, ಡಮರುಗ ನುಡಿಸಿದ
ನವಿಲ ಹಾಗೆ ಕುಣಿದು ಮಿಂಚು ಮಳೆ ಕರೆದ
ಹಕ್ಕಿಪಿಕ್ಕಿಯಂಗೆ ಕೂಗಿ ನಕ್ಕು ನಗಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ….
ಮುದ್ದಾಗಿ ಮಾತಾಡಿ ಮರಳು ಮಾಡಿದನವ್ವ ||ಅವ್ವ||

ಚಪ್ಪರ ತೋರಣ ಒಡವೆ ಓಲಗವಿಲ್ಲ
ಮಂಟಪ ಮಂಡಿಗೆ ಧಾರೆ ದಿಬ್ಬಣವಿಲ್ಲ
ಆರತಿ ಎತ್ತಲು ಮುತ್ತೈದೆಯರಿಲ್ಲ
ಮಂತ್ರಗಳಿಲ್ಲ ಶಾಸ್ತ್ರಗಳಿಲ್ಲ….
ಮಸಣದೊಳಗೆ ಮದುವಣಗಿತ್ತಿ ನಾನದೆವನವ್ವ….
ಬೂದಿಬಡುಕನ ಬಾಳ ಬೆಳಗಿದನವ್ವ ||ಅವ್ವ||

ಕದಳಿಯ ಬನದೊಳಗೆ ಕಾದಿಹನವ್ವ….
ಕಣಗಿಲೆ ಹೂ ಹಾಸಿ ಕಾದಿಹನವ್ವ….
ಕಣ್ಣ ಬತ್ತಿಯ ಉರಿಸಿ ಕಾದಿಹನವ್ವ….
ಜನುಮ ಜನುಮದ ಒಲವು ಫಲಗೂಡಿತವ್ವ….
ಹುಟ್ಟು-ಸಾವಿನಾಚೆಯ ದಡದಿ ಮನೆ ಮಾಡಿಹನವ್ವ
ತಪ್ಪೋ ಒಪ್ಪೋ ಮನ್ನಿಸಿ ಹರಸವ್ವ
ತಪ್ಪೊ ಒಪ್ಪೋ ಹರಸಿ ನೀ ಕಳಿಸವ್ವ. ||ಅವ್ವ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...