Home / ಕವನ / ಕವಿತೆ / ಸ್ವಾತಂತ್ರ್ಯ- ಕನಸು ನನಸು

ಸ್ವಾತಂತ್ರ್ಯ- ಕನಸು ನನಸು

ಅವರು ಬಿಳಿ ಬಣ್ಣದ ಮಾಯಾ
ಮಂದರಿ ಹೊದ್ದು ಬಂದಿದ್ದರು
ತೆವಳುತ್ತ, ಸರ್ಪಸಂತತಿ
ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು.
ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ
ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ,
ಒಡೆದು ಆಳುವ ತಂತ್ರ ಕುತಂತ್ರ
ಶ್ರೇಷ್ಠ ನಾಗರಿಕತೆಯ ಬುಡದಲ್ಲಿತ್ತು
ಅಪರ ಅನಾಗರಿಕತೆ, ಮತ್ತೆ ಕೆಲವರ
ಕೈಯಲ್ಲಿತ್ತು ಧರ್ಮಗಾಥೆಯ ಹೊತ್ತಿಗೆ
ಬೆಣ್ಣೆಮಾತಿನ ಬುದ್ದಿವಂತರ ಮತ್ತೊಂದು
ಅವತಾರ – ಅವಾಂತರ ಮತಾಂತರ
ಕನಸಾಯಿತು ಸ್ವಾತಂತ್ರ್ಯ
ಹೆಣ್ಣು, ಹೊನ್ನು ಮಣ್ಣುಗಳ ಪರತಂತ್ರ
ಹುಟ್ಟದಿದ್ದರೆ ಹೇಗೆ? ಸೇಡು
ಮನೆ ಮನೆಯಂಗಳದಿ ಒಂದೇ ಕಲರವ
ಹಕ್ಕು-ಸ್ವಾತಂತ್ರ್ಯ, ಅಲ್ಲೊಬ್ಬ ಇಲ್ಲೊಬ್ಬರಲ್ಲ
ಅವರೊಳಗೆಲ್ಲಾ ಒಬ್ಬನೆ-ವೀರ
ಮುತ್ತಿದರು ಅಕ್ಷೋಹಿಣಿ, ಅಕ್ಷೋಹಿಣಿ
ಹಣಾಹಣಿಗೆ, ನೆತ್ತರುಕ್ಕಿಸಿದರು. ಗಲ್ಲು ಗೆದ್ದರು.
ಬೂಟು ಕಾಲಿಗೆ, ತುಪಾಕಿ ಪೀರಂಗಿಗೂ
ಗುಂಡುಗುಂಡಿಗೂ ಗುಂಡಿಗೆಯ ಒಡ್ಡಿದರು.
ಒಂದೇ ಮಂತ್ರಘೋಷ -ಆದ್ಯ ಕನಸು
ತರುಣ ಧಮನಿಗಳಲಿ ಉರಿವ ಶಿಖೆ
ಜಾತಿ ಮತ ಪಂಥಗಳ ನಡುವೆ ಒಂದೇ ಮರ್ಮ
ಸ್ವಾತಂತ್ರ್ಯ ನಮ್ಮ ಧರ್ಮ

ಹುತ್ತ ಬೆಳೆದಿತ್ತು ಬೃಹದಾಕಾರ
ಆದರೆ ಪಕ್ಕದಲ್ಲೊಬ್ಬ ಅರೆನಗ್ನ ಮಂತ್ರವಾದಿ
ನಿಂತಿದ್ದ ಪುಂಗಿ ಹಿಡಿದು, ಹೆಡೆ ಎತ್ತಿದ
ಸರ್ಪಗಳ ಹೆಡೆ ಮುರಿಗೆ ಕಟ್ಟಲು
ಮತ್ತೊಬ್ಬ ಬಿಲ್ಲುಗಾರ ಕೋನೆ ಕೋನೆಗೂ
ಕಣ್ಣು ಮುಚ್ಚಿ ಬಾಣ ಬಿಡತೊಡಗಿದ.
ಇರುವೆ ಕಟ್ಟಿದ ಗೂಡು
ತನ್ನದೆಂದು ಬೀಗುತ್ತಿದ್ದ ಸರ್ಪಗಳು
ಸದ್ದಿಲ್ಲದೇ ಸರಿದು ಹೋದವು
ಹುತ್ತಕ್ಕೆ ಬೆಂಕಿ ಬೀಳತೊಡಗಲು
ನನಸಾಯಿತು ಸ್ವಾತಂತ್ರ್ಯ
ಭಾರತೀಯರ ಎದೆಗೂಡ ಕಹಳೆಯಲ್ಲೀಗ
ಜೈಹಿಂದ ಒಂದೇ ಮಂತ್ರ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...