Home / ಕವನ / ಕವಿತೆ / ರಸ್ತೆ ಹೋಗುವುದೆಲ್ಲಿಗೆ?

ರಸ್ತೆ ಹೋಗುವುದೆಲ್ಲಿಗೆ?

ಬೂದು ಬಣ್ಣದ ಚಳಿಗೆ
ಮುಂಜಾವದ ತುಟಿಯೊಡೆದಿದೆ
ಆಕಾಶ ಚಂದಿರನನ್ನು
ಹಣೆಯಲ್ಲಿ ಧರಿಸಿ ನಸುನಗುತಿದೆ
ಮಿಲ್ಲುಗಳಿಂದ ಹೊಗೆಯನ್ನೂ
ಹುಣ್ಣುಗಳನ್ನೂ
ಬಳುವಳಿಯಾಗಿ ಪಡೆದಿರುವ ಭದ್ರೆ
ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ
ಜಿಪುಣಶೆಟ್ಟಿ ಸೂರ್ಯನದು
ತೂಕದ ವ್ಯವಹಾರ
ಒಂದೊಂದೆ ಕಿರಣ ಚೆಲ್ಲುತ್ತಿದ್ದಾನೆ
ನೆಲದ ಕೊರಳಿಗೆ ಹಾರ.

ಅಂದವಾಗಿ ಅಲಂಕರಿಸಿಕೊಂಡು
ಅಚ್ಚುಕಟ್ಟಾಗಿ ಕುಳಿತುಕೊಂಡಿರುವ
ಹಾಲಿನ ಬಾಟಲಿಗಳಿಗೆ
ಮೈತುಂಬಾ ನಿರೀಕ್ಷೆ
ಯಾರೋ ಮಡಿವಂತರು
ಸಾರಿಸಿ ಗುಡಿಸಿದ ಅಂಗಳ
ಗುಬ್ಬಚ್ಚಿಗಳಿಗೆ ರಂಗಸಜ್ಜಿಕೆ.

ಕೈಗಾಡಿಯ ಬೈಟೂ ಕಾಫಿಯಲ್ಲಿ
ಬೋನಸ್ಸು ಮುಷ್ಕರ ಹಬೆಯಾಡುತ್ತಿದೆ
ದೂರದ ಚರ್ಚಿನ ಗಂಟೆ
ಎಂಟು ಹೊಡೆದಿದೆ.
ಪುಸ್ತಕದ ಬೆಟ್ಟ ಹೊತ್ತ
ಪುಟಾಣಿಗಳಿಂದ ಪ್ರಾರ್ಥನಾಗೀತೆ
ಕಾಡಿನ ಕಡವೆಯ ಮರಿಗಳು
ಊರ ಉದ್ಯಾನವನದ
ಕಬ್ಬಿಣದ ಕಂಬಗಳಿಗೆ
ಹತಾಶೆಯಿಂದ ಕೊರಳು ಉಜ್ಜುತ್ತಿವೆ
ಬತ್ತಲಾದ ಪುಟ್ಟ ಗಿಡಗಳು
ವನಮಹೋತ್ಸವದ ದಿನ ಎಣಿಸುತ್ತಿವೆ.

ಚಪ್ಪಲಿ, ಚೀಲ, ಕೊಡೆ
ಚದುರಿ ಚೆಲ್ಲಾಪಿಲ್ಲಿಯಾಗಿವೆ.
ವರದಕ್ಷಿಣೆ ತರದ ಹುಡುಗಿಯ ಹಾಗೆ
ಇಡಿಯಾಗಿ ಮೈಸುಟ್ಟುಕೊಂಡಿರುವ
ಕಾರು ಮುಖ ಮಾತ್ರ ಉಳಿಸಿಕೊಂಡಿದೆ.
ಕೈಗಾಡಿಗೆ ಕಾಲಿಲ್ಲ
ಶನಿದೇವರ ರಥ ಕಾಣೆಯಾಗಿದೆ.
ಚುರುಮುರಿ ಉಂಡೆಯನ್ನು
ಸುತ್ತಿರುವ ಮಾಸಲು ಹಾಳೆಯಲ್ಲಿ
ಉಲ್ಲಾಸಭರಿತ ಕವಿತೆ.

ಒಂದಿಷ್ಟು ಕದನ-ಕುತೂಹಲ
ಆಮೇಲೆ-
ಲಾಠಿ ಬೂಟುಗಳ ಟಪ ಟಪ
ಸದ್ದಿನ ಹಿನ್ನೆಲೆಯಲ್ಲಿ
ಟೋಪಿಗಳ ಶಾಂತಿಸಭೆ.

ಭಜನೆ, ತಾಳ, ಬೆಂಕಿ
ಸಣ್ಣಗೆ ಉಸಿರು ಕಟ್ಟಿಸುವ ಹೊಗೆ.
ಯಾರದ್ದೊ….
ಕೊನೆಯ ಮೆರವಣಿಗೆ.
ಸೀಳಿಹೋದ ಅಭಯಹಸ್ತದ ಮಗ್ಗುಲಲ್ಲಿ
ಚಿಂದಿಚಿಂದಿಯಾದ
ನೇಗಿಲು ಹೊತ್ತ ರೈತನ ಚಿತ್ರ.

ಕಣ್ಣರಳಿಸಿ ನೋಡುತ್ತಿದ್ದಾನೆ
ಹಸಿರು ರುಮಾಲಿನ ಹುಡುಗ
ಮಾಕ್ಸ್, ಬುದ್ಧ, ಗಾಂಧಿ
ಚಿಂತನೆಯಲ್ಲಿ ಗಡ್ಡ ಹಣ್ಣಾಗುತ್ತಿದೆ
ಮೈಮರೆತು ನಿಂತಿದ್ದಾನೆ ಹುಡುಗ!

ಗಾಳಿಯೊಳಗೆ ತೇಲಿದಂತೆ
ಚೆಲುವಾಗಿ ಹೂವಿನ ಹಾಗೆ
ಪರಿಮಳಿಸುತ್ತ ನಡೆದು ಬರುತ್ತಿದ್ದಾಳೆ
ಸೇಬು ಕೆನ್ನೆಯ ಹುಡುಗಿ
ಉತ್ಸವದ ಮೂರುತಿಯ ಹಾಗೆ ಶಿಸ್ತಾಗಿ
ಉತ್ಸಾಹ ಉಕ್ಕುಕ್ಕಿ ಚೆಲ್ಲುವ ಹಾಗೆ
ಹರಿದು ಬರುತ್ತಿದ್ದಾಳೆ ಹುಡುಗಿ
ಮೊಟ್ಟ ಮೊದಲ ಹೆಜ್ಜೆ ಇಟ್ಟ
ಮಗುವಿನ ಸಂಭ್ರಮದಲ್ಲಿ
ಅವರಿವರನ್ನು ಕೇಳುತ್ತಿದ್ದಾಳೆ….
ಈ ರಸ್ತೆ ಹೋಗುವುದೆಲ್ಲಿಗೆ?


Tagged:

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...