Home / ಕವನ / ಕವಿತೆ / ವೇದಾಂತ

ವೇದಾಂತ

ವೇದಾಂತ ಹೇಳಬಹುದು
ಎಲ್ಲರೂ ಕೇಳಬಹುದು
ಶಾಲನ್ನು ಸುತ್ತಿಕೊಂಡು
ಬಿರುದನ್ನು ಧರಿಸಿಕೊಂಡು
ವ್ಯಾಖ್ಯಾನ ಮಾಡಬಹುದು
ಪುಸ್ತಕವ ಬರೆಯಬಹುದು
ವೇದಾಂತ ಸಮಯಕ್ಕೆ ಬರುವುದೇನು ?
ಕರುಳನ್ನು ಸಂತವಿಡಲಪ್ಪುದೇನು ?

ಕಷ್ಟಗಳು ಬಂದು ಮುತ್ತಿ
ದುಃಖಗಳು ಬಂದು ಒತ್ತಿ
ರೋಗಗಳು ಬಂದು ಹತ್ತಿ
ಸಾಲಗಳು ಬಂದು ಸುತ್ತಿ
ಕಣ್ಕಣು ಬಿಡುತಲಾಗ
ಮತಿಗೆಟ್ಟು ಹೋಗುವಾಗ
ವೇದಾಂತ ಬರುವುದನ್ನು ನೋಡಬೇಕು
ವೇದಾಂತ ನುಡಿವುದನು ಕೇಳಬೇಕು.
ತಾನಿದ್ದು ಮುದುಕನಾಗಿ
ಬೆಳೆದ ಮಗ ತೀರಿಹೋಗಿ
ಮೊಮ್ಮಗನು ಬಳಿಗೆ ಬಂದು
ಬೆಪ್ಪಾಗಿಯಳುತ ನಿಂದು
ಬಸಿರೆಲ್ಲ ಕುದಿಯುವಾಗ
ಕೊರಳ ಸೆರೆ ಬಿಗಿಯುವಾಗ
ಹೆಣವನ್ನು ಸುಡುಗಾಡಿಗೊಯ್ಯುವಾಗ
ಚಿಕ್ಕ ಸೊಸೆ ಮುಸುಕಿಟ್ಟು ಕೊರಗುವಾಗ;

ಮುಡುಪನ್ನು ಕಟ್ಟಿ ತಂದು
ಮುದ್ದು ಮಗಳಳುತ ನಿಂದು
ಪತಿಭಿಕ್ಷೆ ಬೇಡಲಾಗಿ
ಕಡೆಗೆಲ್ಲ ತೀರಲಾಗಿ
ತನ್ನ ಪತಿ ಹೋದನೆಂದು
ತನ್ನ ಬಾಳ್ ಮುಗಿಯಿತೆಂದು
ನೆಲದಲ್ಲಿ ಮೈಮರೆದು ಬೀಳುವಾಗ
ಕಣ್ಣೊಡೆದು ಎದೆಬಿಚ್ಚಿ ನೋಡುವಾಗ;

ಮುದ್ದಾಡಿ ಬೆಳಸಿದಂಥ
ಮನೆಯೆಲ್ಲ ಬೆಳಗಿದಂಥ
ಮಗುವನ್ನು ಮೃತ್ಯು ಹಿಡಿದು
ಹೆತ್ತವಳು ಬಸಿರು ಹಿಡಿದು
“ಎನ್ನ ಕಂದನ್ನ ಕೊಡಿರಿ
ಎನ್ನ ರತ್ನನ್ನ ಕೊಡಿರಿ”
ಎಂದಂದು ಬಿಕ್ಕುತ್ತ ಕೇಳುವಾಗ
ತೊಡೆ ಮೇಲೆ ಜೀವವದು ನಂದುವಾಗ;

ಊರಾಚೆ ಗುಣಿಯ ತೊಡಿ
ಇಡಲಲ್ಲಿ ಅಣಿಯ ಮಾಡಿ
‘ಬದುಕಿದೆಯೊ ಏನೋ!’ ಎಂದು
ಭ್ರಮೆಯಿಂದ ಆಸೆ ಬಂದು
ಮತ್ತೊಮ್ಮೆ ಮುಟ್ಟಿ ನೋಡಿ
ಕಡೆಗೊಮ್ಮೆ ಮುಖವ ನೋಡಿ
ಮಣ್ಣಿಂದ ಕಂದನ್ನ ಮುಚ್ಚುವಾಗ
ಜಗವೆಲ್ಲ ಕಣ್ಗಂದು ಸುತ್ತುವಾಗ;

ಇವರಾರ ಮಕ್ಕಳೆಂದು
ಅವರಾರ ನೆಂಟರೆಂದು
ಋಣ ಶೇಷ ತೀರಿತೆಂದು
ಸಾಲಿಗರು ಹೋದರೆಂದು
ಕಣ್ಣೀರು ಬತ್ತಿಸುತ್ತ
ಎದೆ ಕಲ್ಲು ಮಾಡಿಸುತ್ತ
ವೇದಾಂತ ! ವೇದಾಂತ ! ಇರುವುದೇನು
ಇದ್ದರೂ ಅದರಿಂದ ಬಂದುದೇನು ?

ಕಲ್ಲೆದೆಯ ನೀರುಮಾಡಿ
ಕಣ್ಣೀರು ಹರಿದು ಕೋಡಿ
ಮಾಲಿನ್ಯ ಹೋಗುತಿರಲು
ಕರುಣ ರಸ ತುಂಬುತಿರಲು
ಆರ್ತರಿಗೆ ಮರುಗುವಂತೆ
ಕೈನೀಡಿ ಸಲಹುವಂತೆ
ವೇದಾಂತ ನಮಗೆಲ್ಲ ತಿಳಿವ ತರಲಿ
ಶುದ್ಧಾತ್ಮ ಮಾನವರ ಮಾಡುತಿರಲಿ.
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...