Home / ಕವನ / ಕವಿತೆ / ಅಮ್ಮ ಹೇಳಿದ್ದು

ಅಮ್ಮ ಹೇಳಿದ್ದು

ಇದು ನನ್ನ ಕಲ್ಪನೆಯ
ಕಥೆಯಲ್ಲ ಮಗಳೇ
ನನ್ನಮ್ಮ ನನಗೆ ಹೇಳಿದ್ದು
ಅವಳಮ್ಮ ನನ್ನಮ್ಮನಿಗೆ ಹೇಳಿದ್ದಂತೆ
ಈಗ ನಾ ನಿನಗೆ ಹೇಳಿದಂತೆ
ನಾಳೆ ನೀ ನಿನ್ನ ಮಗಳಿಗೆ ಹೇಳುವಂತೆ
ಇದೊಂದು ರೀತಿ ಚಕ್ರದಂತೆ!

ಇದು ಕಥೆಯ ಮೂಲರೂಪವೂ
ಅಲ್ಲ ಮಗಳೇ
ನನ್ನಮ್ಮ, ಅವರಮ್ಮ,
ಅವರಮ್ಮ, ಅವರಮ್ಮನಮ್ಮನ
… … … … … …
… … … … … …
ಬಾಯ್ಗೆ ಹರಿದು
ಮೂಲರೂಪ ಹೇಗಿತ್ತೋ
ಸೃಷ್ಟಿಕರ್ತನಿಗೇ ಗೊತ್ತು!
*
“ಅಳಬೇಡ ಕಂದಮ್ಮ
ನಿನ ಪುಣ್ಯ ಇಲ್ಲಿ ರಾಕ್ಷಸನಿಲ್ಲ!”
ಏಳು ಸಮುದ್ರದಾಚೆ
ಅವನಿರುವುದೆಲ್ಲಾ
ನೀ ಅಳದಿದ್ದರೆ
ಅವನಿಲ್ಲಿಗೆ ಬರುವುದೂ ಇಲ್ಲ!
ಬಿಡು ಮಗಳೇ
ನಾವೂ ಅಲ್ಲಿಗೆ ಹೋಗುವುದಿಲ್ಲವಲ್ಲಾ!
*
ಅವನು ಕುಡಿಯುವುದು
ನನ್ನ – ನಿನ್ನಂತೆ
ಹಾಲು ಕಾಫಿಯಲ್ಲ
ಬೆಳಗು – ಬೈಗು
ಹಸಿ – ಹಸಿ ನೆತ್ತರೇ ಬೇಕಂತಲ್ಲಾ?
ನಿನ್ನಂತವರ ಕಣ್ಣೀರೆಂದರೆ
ಅವನಿಗೆ ಸಿಹಿ ತಿಂಡಿಯ ತರಹ!
ಅವ ತಿನ್ನುವುದೂ
ಸೊಪ್ಪು ಸದೆ ಹಣ್ಣಲ್ಲ
ನನ್ನ-ನಿನ್ನಂತವರೇ ಆಹಾರ
“ಅಳದಿರು ಬಂಗಾರಿ
ರಾಕ್ಷಸ ಇಲ್ಲಿಲ್ಲ!”
*
“ಹುಷ್ ಸುಮ್ಮನಿರೆ ನನ್ನ ಚಿನ್ನ”
ಅವನಂತವರೂ ಇಲ್ಲಿಲ್ಲ
ದೈತ್ಯ ಪರ್ವತವೇ
ಅವನ ಆಕೃತಿಯಂತಲ್ಲಾ!
ಅವನ ಘರ್ಜನೆಗೆ
ಏಳೇಳು ಸಮುದ್ರವೇ ನಡುಗಿ
ಅಲೆಗಳೇಳುವುದಂತಲ್ಲ
ಸಮುದ್ರದಲಿ ಅಲೆಗಳಿರುವವರೆಗೂ
ಅವನಿಗೋ ಸಾವಿಲ್ಲ!
*
ಆದರೂ ಅವನ ಪ್ರಾಣ
ಅವನ ಹೃದಯದಲಿಲ್ಲ!
“ಅಯ್ಯೋ ಹೀಗ್ಯಾಕಳುವೆ ನನ್ನ ಜೀವವೇ?”
ಏಳು ಕಾಡನು ದಾಟಿ ಮತ್ತೇಳೂ ಕಡಲನು ಮೀಟಿ
ಕೊಟ್ಟ ಕೊನೆಯ ಗುಹೆಯೊಳಗಿನ
ಗಿಣಿಯೊಳಗೇ ಇದೆಯಂತೆ ಆ
ರಾಕ್ಷಸನೆಂಬುವನ ಪ್ರಾಣ!
*
“ನನ ಮುದ್ದು ಮಗುವೇ ಅಳಬೇಡ”
ರಾಕ್ಷಸನಿಗೋ ಸಾವಿಲ್ಲ
ಅಮ್ಮ ಹೇಳಿದ್ದಳಲ್ಲಾ
ಅವ ನಿನ್ನ ಕದ್ದರೆ
ಕಾಪಾಡಲು ಯಾವ
ರಾಜಕುಮಾರನೂ ಬರುವುದಿಲ್ಲ
ಏಕೆಂದರೆ ಇಲ್ಲಿ ರಾಜಕುಮಾರ ಇಲ್ಲ!
ಅದಕೆಂದೇ ಮಗಳೇ ನೀ ಅಳಬೇಡ
*
ಹೀಗೇ… ಹೀಗೇ…
ನಗಬೇಕು ಕಂದಮ್ಮ
ಎಂದೆಂದೂ ಇಲ್ಲಿ ರಾಕ್ಷಸನಿಲ್ಲ
ನೀ ಅಳದಿದ್ದರೆ
ಅವನಿಲ್ಲಿಗೆ ಬರುವುದೂ ಇಲ್ಲ
ಬಿಡು ನಾವು ಜಾಣರು
ಅವನ ಬಾಯಿಗೆ
ಹೋಗುವುದೂ ಇಲ್ಲ!
*
ಅತ್ತವರಿಗಷ್ಟೇ ನನ್ನ ರನ್ನ
ರಾಕ್ಷಸನ ಹೆದರಿಕೆ
ಅಳುನುಂಗಿ ನಗುವವರಿಗೆ
ರಾಕ್ಷಸನ ಕಥೆಯೇಕೆ?
ಹೀಗೇ ಏನನ್ನೂ ಪ್ರಶ್ನಿಸದೇ
ನಗುನಗುತ್ತಿದ್ದರೆ ಬೇರೆ ಮಾತೇಕೆ?
*****

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...