Home / ಕವನ / ಕವಿತೆ / ವಿಧಿ

ವಿಧಿ

ಹೇಳಿರಲಿಲ್ಲಿವೆ ನಾನು ನಿಮಗೆ
ಅವನಿರುವುದೆ ಹಾಗೆ
ಅವನ ಕೆಣಕಬೇಡಿರಿ ಎಂದು

ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ
ಪ್ರೀತಿಯ ನೆಪದಲ್ಲಿ
ತಲೆ ಸಡಿಲಾದವನಲ್ಲ
ವಂಶಪಾರಂಪರ್ಯವಲ್ಲ
ಅವನ ಪೂರ್ವಜರಲ್ಲಿ
ಹೀಗೆ ಯಾರಿಗೂ ಇದ್ದಿರಲಿಲ್ಲ
ಅವನಷ್ಟಕ್ಕೆ ಬಿಟ್ಟರೆ ಅವನು
ಯಾರಿಗೇನೂ ಮಾಡುವುದಿಲ್ಲ

ಮಾತು ಬಯ್ಗಳದಂತೆ
ನಿಮಗೆ ಅನ್ನಿಸಬಹುದು
ಅವನ ರೀತಿ ಬೇರೆ-
ಪದಗಳನ್ನು ಹಣ್ಣಿನಂತೆ
ಕಚ್ಚುತ್ತಾನೆ
ಕಲ್ಲಿನಂತೆ ಎಸೆಯುತ್ತಾನೆ
ಜಗಲಿಯಲ್ಲಿ ಕುಳಿತು ವಾಕ್ಯಗಳನ್ನು
ನೂಲಿನಂತೆ ನೇಯುತ್ತಾನೆ
ಬೀಡಿಯ ಹೊಗೆಯಂತೆ
ಉಗುಳುತ್ತಾನೆ ಅರ್ಥದ
ದಟ್ಟ ಮೋಡಗಳನ್ನು

ದೇಶವಿದೇಶ ಸುತ್ತಿದವನಲ್ಲ
ಬಿಹಾರ ಬಂಗಾಳ ಒರಿಸ್ಸ
ಕಾಶ್ಮೀರ ಹಿಮಾಚಲಪ್ರದೇಶ
ಪಂಜಾಬ ಗುಜಾರಾತ ಮರಾಠ
ಎಲ್ಲಿಗೂ ಹೋಗಿಲ್ಲ
ಬೆಲ್ಚಿ ಭೋಪಾಲ ಭಾಗಲ್ಪುರ
ಮೀನಾಕ್ಷಿಪುರ ಕಾಮಾಟಿಪುರ ತಿರುವನಂತಪುರ
ಚಾರ್ಮಿನಾರ್ ಕುತುಬ್‌ಮಿನಾರ್ ಶ್ರವಣಬೆಳಗೂಳ
ಹಳದೀಘಾಟ ರಾಜಘಾಟ ತಾಳೀಕೊಟೆ
ಜಲಿಯನ್‌ವಾಲಾಬಾಗ್
ನೋಡಿದವನಲ್ಲ
ಗಾಂಧಿ ನೆಹರು ಪಟೇಲ ಜಿನ್ನ
ಶೇಖ್‌ಅಬ್ದುಲ್ಲ ಇಂದಿರಾಗಾಂಧಿ ಸಂಜಯಗಾಂಧಿ
ಫೂಲನ್ ದೇವಿ ಹಾಜಿಮಸ್ತಾನ
ಮೊರಾರ್ಜಿ ದೇಸಾಯಿ ಕಾಂತಿದೇಸಾಯಿ ವಾಜಪೇಯಿ
ಅಕ್ಬರ್ ಆಶೋಕ ತುಘಲಕ
ಚರಣ್‌ಸಿಂಗ್ ಸ್ವರಣ್‌ಸಿಂಗ್ ಭಿಂದ್ರಾನ್‌ವಾಲೆ
ರಾಜನಾರಾಯಣ್ ಅಮಜದ್‌ಖಾನ್
ಖಾನ್ ಅಬ್ದುಲ್ ಗಫಾರ್‌ಖಾನ್
ಡಾಕ್ಟರ್ ರಾಮ ಮನೋಹರ ಲೋಹಿಯಾ
ಯಾರನ್ನೂ ಕಂಡವನಲ್ಲ
ಆದರೂ ಅವನು ಹೇಳುವುದರಲ್ಲಿ ಸುಳ್ಳಿಲ್ಲ
ಎಲ್ಲ ಕಡೆ ಹೋಗಿದ್ದಾನೆ
ಎಲ್ಲ ನೋಡಿದ್ದಾನೆ
ಎಲ್ಲ ಕಂಡಿದ್ದಾನೆ

ಯಾರು ನಂಬಿದರೆಷ್ಟು ಬಿಟ್ಟರೆಷ್ಟು
ಮಹಾತ್ಮಾ ಗಾಂಧಿ ತಾನೇ ಎಂದು
ಕಿತ್ತೊಗೆದಿದ್ದನು ಅಂಗಿಯನ್ನು
ದಂಡಿಯಾತ್ರೆ ಕೈಗೊಳ್ಳುವೆನೆಂದು
ನಡೆದು ಹೋಗಿದ್ದನು ಕುಂಬಳೆಗೆ
ಅದೆಷ್ಟೋ ಬಾರಿ ಅನ್ನನೀರು ಬಿಟ್ಟು
ಉಪವಾಸ ಮಲಗಿದ್ದನು
ಗಾಂಧಿಯ ಕೊಲೆಯಾದಂದು
ತಾನೇ ಸತ್ತ ಎಂದುಕೊಂಡಿದ್ದನು
ನಂತರ ನಾಥೂರಾಮ್ ಗೋಡ್ಸೆಯನ್ನು
ಗಲ್ಲಿಗೇರಿಸಿದಾಗ
ತಲೆಬಾಗಿಸಿ ನಿಂತವನು ಇವನೇ!

ಕೊಲೆ ಸುಲಿಗೆ ಅತ್ಯಾಚಾರ ಅಹಿಂಸೆ
ಕ್ಷಾಮ ದಾಮರ ರೋಗ ರುಜಿನು ಮಹಾಯುದ್ಧ
ಎಲ್ಲ ವಿಧಿಗೂ ಬದ್ಧ
ನಡು ಮಧ್ಯಾಹ್ನದ ಸೂರ್ಯನನ್ನು
ಬಿಡುಗಣ್ಣಿನಿಂದ ನೋಡಿ ನಿಲ್ಲುವನು
ಎಂಥ ಸತ್ಯಕ್ಕೂ ಸಿದ್ಧ
ಆದರೂ ಯಾವ ದೇಶ ತಾನೆ
ಇಬ್ಬರು ಸೂರ್ಯರನ್ನು ಸಹಿಸುವುದು?
ಇವನು ಈಗಾಗಲೆ
ಅಂಧನಾಗತೊಡಗಿದ್ದಾನೆ !
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...