Home / ಕವನ / ಕವಿತೆ / ವಿಧಿ

ವಿಧಿ

ಹೇಳಿರಲಿಲ್ಲಿವೆ ನಾನು ನಿಮಗೆ
ಅವನಿರುವುದೆ ಹಾಗೆ
ಅವನ ಕೆಣಕಬೇಡಿರಿ ಎಂದು

ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ
ಪ್ರೀತಿಯ ನೆಪದಲ್ಲಿ
ತಲೆ ಸಡಿಲಾದವನಲ್ಲ
ವಂಶಪಾರಂಪರ್ಯವಲ್ಲ
ಅವನ ಪೂರ್ವಜರಲ್ಲಿ
ಹೀಗೆ ಯಾರಿಗೂ ಇದ್ದಿರಲಿಲ್ಲ
ಅವನಷ್ಟಕ್ಕೆ ಬಿಟ್ಟರೆ ಅವನು
ಯಾರಿಗೇನೂ ಮಾಡುವುದಿಲ್ಲ

ಮಾತು ಬಯ್ಗಳದಂತೆ
ನಿಮಗೆ ಅನ್ನಿಸಬಹುದು
ಅವನ ರೀತಿ ಬೇರೆ-
ಪದಗಳನ್ನು ಹಣ್ಣಿನಂತೆ
ಕಚ್ಚುತ್ತಾನೆ
ಕಲ್ಲಿನಂತೆ ಎಸೆಯುತ್ತಾನೆ
ಜಗಲಿಯಲ್ಲಿ ಕುಳಿತು ವಾಕ್ಯಗಳನ್ನು
ನೂಲಿನಂತೆ ನೇಯುತ್ತಾನೆ
ಬೀಡಿಯ ಹೊಗೆಯಂತೆ
ಉಗುಳುತ್ತಾನೆ ಅರ್ಥದ
ದಟ್ಟ ಮೋಡಗಳನ್ನು

ದೇಶವಿದೇಶ ಸುತ್ತಿದವನಲ್ಲ
ಬಿಹಾರ ಬಂಗಾಳ ಒರಿಸ್ಸ
ಕಾಶ್ಮೀರ ಹಿಮಾಚಲಪ್ರದೇಶ
ಪಂಜಾಬ ಗುಜಾರಾತ ಮರಾಠ
ಎಲ್ಲಿಗೂ ಹೋಗಿಲ್ಲ
ಬೆಲ್ಚಿ ಭೋಪಾಲ ಭಾಗಲ್ಪುರ
ಮೀನಾಕ್ಷಿಪುರ ಕಾಮಾಟಿಪುರ ತಿರುವನಂತಪುರ
ಚಾರ್ಮಿನಾರ್ ಕುತುಬ್‌ಮಿನಾರ್ ಶ್ರವಣಬೆಳಗೂಳ
ಹಳದೀಘಾಟ ರಾಜಘಾಟ ತಾಳೀಕೊಟೆ
ಜಲಿಯನ್‌ವಾಲಾಬಾಗ್
ನೋಡಿದವನಲ್ಲ
ಗಾಂಧಿ ನೆಹರು ಪಟೇಲ ಜಿನ್ನ
ಶೇಖ್‌ಅಬ್ದುಲ್ಲ ಇಂದಿರಾಗಾಂಧಿ ಸಂಜಯಗಾಂಧಿ
ಫೂಲನ್ ದೇವಿ ಹಾಜಿಮಸ್ತಾನ
ಮೊರಾರ್ಜಿ ದೇಸಾಯಿ ಕಾಂತಿದೇಸಾಯಿ ವಾಜಪೇಯಿ
ಅಕ್ಬರ್ ಆಶೋಕ ತುಘಲಕ
ಚರಣ್‌ಸಿಂಗ್ ಸ್ವರಣ್‌ಸಿಂಗ್ ಭಿಂದ್ರಾನ್‌ವಾಲೆ
ರಾಜನಾರಾಯಣ್ ಅಮಜದ್‌ಖಾನ್
ಖಾನ್ ಅಬ್ದುಲ್ ಗಫಾರ್‌ಖಾನ್
ಡಾಕ್ಟರ್ ರಾಮ ಮನೋಹರ ಲೋಹಿಯಾ
ಯಾರನ್ನೂ ಕಂಡವನಲ್ಲ
ಆದರೂ ಅವನು ಹೇಳುವುದರಲ್ಲಿ ಸುಳ್ಳಿಲ್ಲ
ಎಲ್ಲ ಕಡೆ ಹೋಗಿದ್ದಾನೆ
ಎಲ್ಲ ನೋಡಿದ್ದಾನೆ
ಎಲ್ಲ ಕಂಡಿದ್ದಾನೆ

ಯಾರು ನಂಬಿದರೆಷ್ಟು ಬಿಟ್ಟರೆಷ್ಟು
ಮಹಾತ್ಮಾ ಗಾಂಧಿ ತಾನೇ ಎಂದು
ಕಿತ್ತೊಗೆದಿದ್ದನು ಅಂಗಿಯನ್ನು
ದಂಡಿಯಾತ್ರೆ ಕೈಗೊಳ್ಳುವೆನೆಂದು
ನಡೆದು ಹೋಗಿದ್ದನು ಕುಂಬಳೆಗೆ
ಅದೆಷ್ಟೋ ಬಾರಿ ಅನ್ನನೀರು ಬಿಟ್ಟು
ಉಪವಾಸ ಮಲಗಿದ್ದನು
ಗಾಂಧಿಯ ಕೊಲೆಯಾದಂದು
ತಾನೇ ಸತ್ತ ಎಂದುಕೊಂಡಿದ್ದನು
ನಂತರ ನಾಥೂರಾಮ್ ಗೋಡ್ಸೆಯನ್ನು
ಗಲ್ಲಿಗೇರಿಸಿದಾಗ
ತಲೆಬಾಗಿಸಿ ನಿಂತವನು ಇವನೇ!

ಕೊಲೆ ಸುಲಿಗೆ ಅತ್ಯಾಚಾರ ಅಹಿಂಸೆ
ಕ್ಷಾಮ ದಾಮರ ರೋಗ ರುಜಿನು ಮಹಾಯುದ್ಧ
ಎಲ್ಲ ವಿಧಿಗೂ ಬದ್ಧ
ನಡು ಮಧ್ಯಾಹ್ನದ ಸೂರ್ಯನನ್ನು
ಬಿಡುಗಣ್ಣಿನಿಂದ ನೋಡಿ ನಿಲ್ಲುವನು
ಎಂಥ ಸತ್ಯಕ್ಕೂ ಸಿದ್ಧ
ಆದರೂ ಯಾವ ದೇಶ ತಾನೆ
ಇಬ್ಬರು ಸೂರ್ಯರನ್ನು ಸಹಿಸುವುದು?
ಇವನು ಈಗಾಗಲೆ
ಅಂಧನಾಗತೊಡಗಿದ್ದಾನೆ !
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...