Home / ಕವನ / ಕವಿತೆ / ಮೂರು ಲಂಗಗಳ ಮಾತುಕತೆ

ಮೂರು ಲಂಗಗಳ ಮಾತುಕತೆ

ಲಂಗ ೧

‘ಏನೇ
ಇಷ್ಟೊಂಽಽಽದು ಘಮ್ ಅಂತೀಯಾ
ರಾತ್ರಿಯೆಲ್ಲಾ ಜೋರಾಽಽಽ?

ಒಂದಕ್ಕೊಂದು ಗಂಟು ಹಾಕಿ
ದ ಗಂಟಿನೊಳಗೇ ಕುಳಿತು
ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ
ಗಂಟು ಮೋರೆಯ ಸಡಿಲಿಸುತ

ಲಂಗ ೨

‘ಅದು ಬ್ಯಾರೆ ಕೇಡು ಈ ಜನುಮಕ್ಕೆ
ನಾನೇನು
ನಿನ್‌ಥರ
ಇದ್ದವರ ಮನೆಯ ಮಗಳಾ?
ಬೆಳಗೆದ್ರೆ ನೀರು ಬರಲಿಲ್ಲ
ತರಕಾರಿ ತರಲಿಲ್ಲ
ಹಾಲು ಸಿಗಲಿಲ್ಲ
ಕರೆಂಟು ಬಿಲ್ಲು ಕಟ್ಟಲಿಲ್ಲ
ನೂಽಽಽರು ರಗಳೆ
ಸಂಜೆ ಟ್ಯೂಷನ್ನಿಗೋದ ಮಕ್ಕಳು
ಮನೆ ಸೇರುವವರೆಗೂ ಜೀವವಿಲ್ಲ
ಕುಡಿದು ತೂರಾಡುವ ಗಂಡ
ನಿಗೆ ಕಾದ ಮೈ
ಕೆಂಡವಾಗಿದ್ದಷ್ಟೇ ಪುಣ್ಯ
ಉಫ್… ನನ್ ಹಣೆ ಬರಹ’

ಮುದುಡಿಕೊಂಡಿದ್ದ ಕೆಂಪು
ಲಂಗದ ಕಡೆ ಮುಖ ತಿರುವಿ
‘ನೀನೇನು
ಎಷ್ಟೊಂದು ಮೆತ್ತಗಾಗಿದ್ದೀಯಾ
ಏನ್ ಸಮಾಚಾರ, ಸುಸ್ತಾ…?’

ಲಂಗ ೩
ತೂಕಡಿಸುವ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ
ಮೂಲೋಕ ಕಾಣುವಂತೆ ಆಕಳಿಸುತ್ತಾ

‘ನನ್ ಸುಸ್ತು ಯಾರ್ ಕೇಳ್ತಾರೆ ಬಿಡಕ್ಕ
ನನಗೋ
ಗಂಟೆಗೊಬ್ಬ ಗೆಳೆಯ
ಅವ ತಂದಿದ್ದು ಉಡುವುದೊರೊಳಗೆ
ಇವ ಕೈ ಮಾಡಿ ಕರೆಯುತ್ತಾನೆ
ಬಾಗಿಲಲ್ಲಿ ಹೂ ಹಿಡಿದು ನಿಲ್ಲುತ್ತಾನೆ

ಇನ್ನೊಬ್ಬ ಕಚ್ಚೆಗೇ ಕೈ ಹಾಕುತ್ತಾನೆ…
ರಾತ್ರಿಯೆಲ್ಲಾಽಽಽ
ಜೀವವಿಲ್ಲದ ಗೊಂಬೆಯಂತೆ
ಗಾಳಿ ಇಲ್ಲದ ಚೆಂಡಿನಂತೆ
ಹಾಸಿಗೆ ತುಂಬಾ ಅವರ ಬುಡಕ್ಕೆ
ಹರಕೆ ಹೊತ್ತವಳಂತೆ ಉರುಳಾಡಿ
ಪ್ರತಿನಿತ್ಯ ಜಾಗರಣೆ
ನಂದೂ ಒಂದು ಬದುಕು
ಅಂತ ಯಾರ್ಗೇಳಾಣ…?’

*

ಉಳಿದ ಲಂಗಗಳು ಮೂಕವಾಗಿ
ಬಾಯಿ ತೆರೆದು ಕೇಳುತ್ತಿರುವಂತೇ
ಎದುರು ಲಂಗದ ಕಣ್ಣಲ್ಲಿ
ಎರಡು ಹನಿ ಉದುರುವ ಮುನ್ನ
ಅಗಸಗಿತ್ತಿ
ಸರಬರನೆ ಎಲ್ಲರನು ಎತ್ತಿ
ಕುದಿವ ಹಂಡೆಯೊಳಗೆ ಒತ್ತಿ
ಕೈ ತೊಳೆದುಕೊಂಡು
ತನ್ನ ಹರಕು ಲಂಗಕ್ಕೆ
ಒರೆಸಿಕೊಂಡಳು
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...