Home / ಕವನ / ಕವಿತೆ / ಮೂರು ಲಂಗಗಳ ಮಾತುಕತೆ

ಮೂರು ಲಂಗಗಳ ಮಾತುಕತೆ

ಲಂಗ ೧

‘ಏನೇ
ಇಷ್ಟೊಂಽಽಽದು ಘಮ್ ಅಂತೀಯಾ
ರಾತ್ರಿಯೆಲ್ಲಾ ಜೋರಾಽಽಽ?

ಒಂದಕ್ಕೊಂದು ಗಂಟು ಹಾಕಿ
ದ ಗಂಟಿನೊಳಗೇ ಕುಳಿತು
ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ
ಗಂಟು ಮೋರೆಯ ಸಡಿಲಿಸುತ

ಲಂಗ ೨

‘ಅದು ಬ್ಯಾರೆ ಕೇಡು ಈ ಜನುಮಕ್ಕೆ
ನಾನೇನು
ನಿನ್‌ಥರ
ಇದ್ದವರ ಮನೆಯ ಮಗಳಾ?
ಬೆಳಗೆದ್ರೆ ನೀರು ಬರಲಿಲ್ಲ
ತರಕಾರಿ ತರಲಿಲ್ಲ
ಹಾಲು ಸಿಗಲಿಲ್ಲ
ಕರೆಂಟು ಬಿಲ್ಲು ಕಟ್ಟಲಿಲ್ಲ
ನೂಽಽಽರು ರಗಳೆ
ಸಂಜೆ ಟ್ಯೂಷನ್ನಿಗೋದ ಮಕ್ಕಳು
ಮನೆ ಸೇರುವವರೆಗೂ ಜೀವವಿಲ್ಲ
ಕುಡಿದು ತೂರಾಡುವ ಗಂಡ
ನಿಗೆ ಕಾದ ಮೈ
ಕೆಂಡವಾಗಿದ್ದಷ್ಟೇ ಪುಣ್ಯ
ಉಫ್… ನನ್ ಹಣೆ ಬರಹ’

ಮುದುಡಿಕೊಂಡಿದ್ದ ಕೆಂಪು
ಲಂಗದ ಕಡೆ ಮುಖ ತಿರುವಿ
‘ನೀನೇನು
ಎಷ್ಟೊಂದು ಮೆತ್ತಗಾಗಿದ್ದೀಯಾ
ಏನ್ ಸಮಾಚಾರ, ಸುಸ್ತಾ…?’

ಲಂಗ ೩
ತೂಕಡಿಸುವ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ
ಮೂಲೋಕ ಕಾಣುವಂತೆ ಆಕಳಿಸುತ್ತಾ

‘ನನ್ ಸುಸ್ತು ಯಾರ್ ಕೇಳ್ತಾರೆ ಬಿಡಕ್ಕ
ನನಗೋ
ಗಂಟೆಗೊಬ್ಬ ಗೆಳೆಯ
ಅವ ತಂದಿದ್ದು ಉಡುವುದೊರೊಳಗೆ
ಇವ ಕೈ ಮಾಡಿ ಕರೆಯುತ್ತಾನೆ
ಬಾಗಿಲಲ್ಲಿ ಹೂ ಹಿಡಿದು ನಿಲ್ಲುತ್ತಾನೆ

ಇನ್ನೊಬ್ಬ ಕಚ್ಚೆಗೇ ಕೈ ಹಾಕುತ್ತಾನೆ…
ರಾತ್ರಿಯೆಲ್ಲಾಽಽಽ
ಜೀವವಿಲ್ಲದ ಗೊಂಬೆಯಂತೆ
ಗಾಳಿ ಇಲ್ಲದ ಚೆಂಡಿನಂತೆ
ಹಾಸಿಗೆ ತುಂಬಾ ಅವರ ಬುಡಕ್ಕೆ
ಹರಕೆ ಹೊತ್ತವಳಂತೆ ಉರುಳಾಡಿ
ಪ್ರತಿನಿತ್ಯ ಜಾಗರಣೆ
ನಂದೂ ಒಂದು ಬದುಕು
ಅಂತ ಯಾರ್ಗೇಳಾಣ…?’

*

ಉಳಿದ ಲಂಗಗಳು ಮೂಕವಾಗಿ
ಬಾಯಿ ತೆರೆದು ಕೇಳುತ್ತಿರುವಂತೇ
ಎದುರು ಲಂಗದ ಕಣ್ಣಲ್ಲಿ
ಎರಡು ಹನಿ ಉದುರುವ ಮುನ್ನ
ಅಗಸಗಿತ್ತಿ
ಸರಬರನೆ ಎಲ್ಲರನು ಎತ್ತಿ
ಕುದಿವ ಹಂಡೆಯೊಳಗೆ ಒತ್ತಿ
ಕೈ ತೊಳೆದುಕೊಂಡು
ತನ್ನ ಹರಕು ಲಂಗಕ್ಕೆ
ಒರೆಸಿಕೊಂಡಳು
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...