Home / ಕವನ / ಕವಿತೆ / ಭಾರತ ಭವಿಷ್ಯವನು ಬರೆವನಾರು?

ಭಾರತ ಭವಿಷ್ಯವನು ಬರೆವನಾರು?

ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು
ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು
ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು
ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ

ಭಾರತ ಭವಿಷ್ಯವನು ಬರೆವನವನು
ನೆಲತಾಯ ನಲ್ಗುವರ-ಬಡ ರೈತನು.

ಮತ್ತದೋ ನೋಡಲ್ಲಿ! ಯಂತ್ರಶಾಲೆಗಳಲ್ಲಿ-
ಯಂತ್ರಗಳ ನಡುವೆ ತಾನೊಂದು ಯಂತ್ರವೆ ಆಗಿ
ಹೆರರ ಸೌಖ್ಯಕೆ ತನ್ನ ಬಾಳ ಸವಿಯನೆ ನೀಗಿ
ಮೌನವೇ ಮಸಿಯಾಗೆ ಗೈಮೆ ಲೇಖನಿಯಾಗೆ

ಭಾರತ ಭವಿಷ್ಯವನು ಬರೆವನವನು
ಕರ್ಮಯೋಗಕೆ ಕಲಶವಿಡುವ ಕಾರ್ಮಿಕನು

ಇತ್ತ ನಿರುಕಿಸು! ಶಸ್ತ್ರಸನ್ನದ್ಧನಾಗಿಯುಂ
ತಾನಹಿಂಸಾ ಸತ್ಯ ತತ್ತ್ವಕ್ಕೆ ತಲೆಬಾಗಿ
ಹೆರರ ನೆಲಕಾಶಿಸದೆ ತಾಯ್ ನೆಲಕೆ ಮುಡಿಪಾಗಿ
ತನ್ನ ಬಾಳನ್ನಿರಿಸಿ, ಇಳೆ ಮೆಚ್ಚುವದಟಿನಿಂ

ಭಾರತ ಭವಿಷ್ಯವನು ಬರೆವನವನು
ಧರ್ಮಯುದ್ಧಕ್ಕಳುಕದಿಹ ವೀರಭಟನು.

ಮೇಣದೋ! ವಿಜ್ಞಾನಶಾಲೆಯಲಿ ಭೇದಿಸುತ
ಪ್ರಕೃತಿಯ ರಹಸ್ಯವನು, ಸತ್ಯವನು ಶೋಧಿಸುತ,
ನಾಡ ಮಣ್ಣನು ಚಿನ್ನ ಮಾಳ್ಪ ಕಲೆ ಸಾಧಿಸುತ
ವಿಜ್ಞಾನಸಿದ್ಧಿಯನು ಯುದ್ಧಕೆ ನಿರೋಧಿಸುತ

ಭಾರತ ಭವಿಷ್ಯವನು ಬರೆವನವನು
ಸತ್ಯ-ಪರಮೇಶ್ವರನ ಭಕ್ತ, ವಿಜ್ಞಾನಿ.

ಮೇಣಿದೋ! ಜನರೊಡನೆ ನಲವಿನಿಂ ಬೆರೆಯುತ್ತ
ಅನ್ಯಾಯವಸಮತೆ ಅಧರ್ಮಗಳ ಜರೆಯುತ್ತ
ಕಾವ್ಯ ಕಹಳೆಯನೂದಿ ಜನರನೆಚ್ಚರಿಸುತ್ತ
ಸತ್ಯ ಸೌಂದರ್ಯಗಳ ಮಂತ್ರವುಚ್ಚರಿಸುತ್ತ

ಭಾರತ ಭವಿಷ್ಯವನು ಬರೆವನವನು
ಭಾರತಿಯ ವರಪುತ್ರ ಕವಿವರ್‍ಯನು.

ಅದೊ! ವಿಶಾಲಪ್ರಪಂಚಕೆ ಭಾರತದ ಕೀರ್ತಿ
ಹರಡಿ, ಮೇಣ್ ಗಳಿಸುತ್ತ ಹೊರದೇಶಗಳ ಅರ್ತಿ.
ದೇಶ ದೇಶಕೆ ನಂಟುನೇಹಗಳ ಬಲಿಸುತ್ತ
ಯುದ್ಧವನು ನಿಲಿಸಿ ಶಾಂತಿ ಧ್ವಜವ ನಿಲಿಸುತ್ತ

ಭಾರತ ಭವಿಷ್ಯವನು ಬರೆವರವರು
ಸ್ವಾತಂತ್ರ್‍ಯ ಪಡೆದ ಭಾರತದ ನಾಯಕರು.

ಆಹ! ನೋಡು! ಕೊಂಡಾಡು ಭಕ್ತಿಯಿಂ ಪೊಡಮಡು
ಸತ್ಯ ಧರ್ಮ ಅಹಿಂಸೆಗಳಿಗಾಗಿ ಜೀವವನು
ಮುಡಿಪಿರಿಸಿ, ಬುದ್ಧದೇವನ ಧರ್ಮ ಚಕ್ರವನು
ಅಂತು ಚರಕವಗೈದು ನಡೆನುಡಿಯ ನೂಲಿನಿಂ

ಭಾರತ ಭವಿಷ್ಯವನು ಬರೆದು ಬರೆಯುತಲಿಹನು
ಜನತಾ ಜನಾರ್ದನನ ಭಕ್ತ ಗಾಂಧಿ ಮಹಾತ್ಮ
ಕ್ರಿಸ್ತ ಬುದ್ಧರ ಪಂತಿಯೊಳು ನಿಲುವ ಪೂತಾತ್ಮ
ಪ್ರತ್ಯಕ್ಷದೈವ ಪಾಮರರ ಪರಮಾತ್ಮ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...