Home / ಕವನ / ಕವಿತೆ / ಉದ್ಧಾರ

ಉದ್ಧಾರ

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು?
ಯಾವ ಓದಿನಿಂದಿವನು ವಾದಾತೀತನಾದಾನು?
ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು?
ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು?
ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು?
ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತು?
ಯಾವ ದುಡಿತದಿಂದ ಇವನ ದುಗುಡ ದೂರಾದೀತು?
ಯಾವ ಏಕಾಂತದಲ್ಲಿ ಇವನ ಮಂಗ ಸಂಗ ಕಳೆದೀತು?
ಯಾವ ಎಳೆಯಿಂದ ಇವನ ಹಗ್ಗ ಬಿಗಿಯಾದೀತು?
ಯಾವ ಕಳೆಯಿಂದ ಇವನ ಮರ ಅಮರವಾದೀತು?
ಯಾವ ಬೆಳೆಯಿಂದ ಇವನ ಮನೆ ತುಂಬೀತು?
ಯಾವ ಕರ್ಮದಿಂದ ಇವನ ಧರ್ಮ ರೂಪು ತೋರೀತು?
ಯಾವ ಮರ್ಮದಿಂದ ಇವನ ಮಾನ ಉಳಿದೀತು?
ಯಾವ ಗುರುವಿನಿಂದ ಇವನ ಗೌರವ ಮೆರೆದೀತು?
ಯಾವ ಕೈಯಿಂದ ಇವನ ಕಾಲು ನಡೆದಾವು?
ಯಾವ ಬೆಂಕಿಯಲ್ಲಿ ಇವನ ಕಾವು ಕುದಿದು ಪಕ್ವವಾದೀತು?
ಯಾವ ಬೇವಿಂದ ಇವನ ಬದುಕು ಸಮರಸವಾದೀತು?
ಯಾವ ವಿಷದಿಂದ ಇವನ ವಿಷಯ ತೀರೀತು?
ಯಾವ ಚಿಕ್ಕೆಯಿಂದ ಇವನ ಚೊಕ್ಕತನ ಮಿನುಗೀತು?
ಯಾವ ಬಿಕ್ಕೆಯಿಂದ ಇವನ ಜೋಳಿಗೆ ತುಂಬೀತು?
ಯಾವ ಹಂಗಿನಿಂದ ಇವನ ಹಗರಣ ಹಗುರಾದೀತು?
ಯಾವ ಪರೀಕ್ಷೆಯಲ್ಲಿ ಇವನ ಪರುಷ ದೊರೆತೀತು?
ಯಾವ ಹೊತ್ತಿಗೆಯಲ್ಲಿ ಇವನ ಗೊತ್ತುಗುರಿ ಸಿಕ್ಕೀತು?
ಯಾವ ಹೂವಿಂದ ಇವನ ಹೃದಯವರಳೀತು?
ಯಾವ ಭಾವದಿಂದ ಇವನ ಬೇರು ಬಲಿತೀತು?
ಯಾವ ಸೂಜಿಯಿಂದ ಇವನ ಗುಳ್ಳೆ ಒಡೆದೀತು?
ಯಾವ ಸಂದಿನಿಂದ ಇವನ ಬಂಧಿತ ಸತ್ವ ಚಿಮ್ಮೀತು?
ಯಾವ ಅನ್ನ ನೀರಿನಿಂದ ಇವನ ಒಡಲುರಿಯಾರೀತು?
ಯಾವ ಚುಚ್ಚಿನಿಂದ ಇವನ ರೊಚ್ಚು ಉರಿದೆದ್ದೀತು?
ಯಾವ ಶಸ್ತ್ರದಿಂದ ಇವನ ಸಂಶಯ ಛಿನ್ನವಾದೀತು?
ಯಾವ ಶಾಸ್ತ್ರದಿಂದ ಇವನ ಸ್ತರವು ವಿಸ್ತಾರವಾದೀತು?

ಇವನೊಳಗು ಮೊಳೆತು ಮೊಳಗದೆ
ತಿಳಿದು ತೊಳಗದೆ
ಗುಟ್ಟು ಗಟ್ಟಿಗೊಳ್ಳದೆ
ಇವನ ಯಾರುದ್ಧರಿಸಬೇಕು?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...