Home / ಕವನ / ಕವಿತೆ / ರಾಮುಲುವೂ ಸೋಮುಲುವೂ

ರಾಮುಲುವೂ ಸೋಮುಲುವೂ

ನಿರ್ಜನವಾದ ಬಯಲು
ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ
ಒಂದಿಷ್ಟು ಇಳಿಬೆಳಕು ಮಾತ್ರ
ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ
ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ)
ರಾಮುಲುವೂ ಸೋಮುಲುವೂ
ಅನುಮಾನಿಸುತ್ತ ಅನುಮಾನಿಸುತ್ತ ಪ್ರವೇಶಿಸುವರು
ಅಂಗಿಯ ಬದಿಗೆ ಜೋತಕೈ, ಕಚ್ಚೆಯ ಕೆಳಗೆ ದೊಂಗಾಲು
ತಲೆಯಿರುವಲ್ಲಿ ಮುಂಡಾಸು-ದೂರಕ್ಕೆ ಇಷ್ಟೆ-
ಒಂದು ಕ್ಷಣ ಮುಖ ಮುಖ ನೋಡುತ್ತ ನಿಲ್ಲುವರು
ನಂತರ ಲಗುಬಗನೆ
ಚೆಂಡುಗಳನ್ನರಸುತ್ತ ಬೇರೆ ಬೇರೆ ದಿಕ್ಕುಗಳಿಗೆ ಚದುರುವರು
ಹೀಗೆ ಅರಸುತ್ತ, ಕಂಡುಹುಡುಕುತ್ತ
ಹಲವು ಕಾಲದ ಮೇಲೆ
ಪಿಚ್ಚಿನಲ್ಲಿ ಇಬ್ಬರೂ ಭೇಟಿಯಾಗುವರು
ನಂತರ ವಿಕೆಟುಗಳನ್ನು ಹೆಕ್ಕಿ ತಬ್ಬಿಕೊಂಡು
ದಾಪುಗಾಲುಗಳನ್ನು ಹಾಕುತ್ತ ನಿಷ್ಕ್ರಮಿಸುವರು


ಇಬ್ಬನಿಯಾದರೋ ನೆಲಕ್ಕೆ ತೆಳ್ಳಗಿನ ಮುಸುಕು ಹಾಕುತ್ತಿದೆ
ಆಕಾಶದಲ್ಲಿ ನಾಲ್ಕಾರು ನಕ್ಷತ್ರಗಳು ಬಿದ್ದಿವೆ
ಆಲಸಿಗಳಾದ ಕತ್ತೆಗಳು ಮಾತ್ರ ಯಾವುದನ್ನೂ ಗಮನಿಸದೆ
ನಿಶ್ಚಲವಾಗಿ ನಿಂತಿವೆ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಮತ್ತೆ ಪ್ರವೇಶಿಸುವರು
ನೆಟ್ಟದೃಷ್ಟಿಯಿಂದ ಪಿಚ್ಚಿನ ಕಡೆಗೆ ದಪದಪನೆ ಧಾವಿಸುವರು
ಅದರ ಹುರಿಹಾಸನ್ನು
ಎಡಗಡೆಯಿಂದೊಬ್ಬ, ಬಲಗಡೆಯಿಂದೊಬ್ಬ
ಎತ್ತಿ ಸುತ್ತಲು ಮನಸ್ಸು ಮಾಡುವರು
ಸುತ್ತುತ್ತ ಉರುಳುರುಳಾಗಿ ಬೆಳೆಯುತ್ತಿರುವ ಹಾಸಿನ
ಉರುಳಿಗೆ ಕೈಗಳನ್ನೂ ನೆಲಕ್ಕೆ ಕಾಲುಗಳನ್ನೂ
ಊರಿ ನೂಕಿ ಸೆಟೆದು ಮುಗ್ಗರಿಸಿ ಬೀಳುವರು
ಕೆಳಗೊಬ್ಬ, ಮೇಲೊಬ್ಬ
ಬಿದ್ದರೂ ಬಿಡದೆ, ಕೈ ಬದಲಾಯಿಸುತ್ತ, ಏದುತ್ತ
ಎತ್ತಿ ಎಳೆದು ದೂರಕ್ಕೆ ಸಾಗಿಸುವರು


ಜನವರಿಯ ಇರುಳಾದರೋ ಯಥೇಷ್ಟ ಹೆಪ್ಪುಗಟ್ಟುತ್ತಿದೆ
ಮೈದಾನು ಯಾವುದು, ಮರ ಯಾವುದು ಗೊತ್ತಾಗುವುದೆ ಕಷ್ಟ
ಅಷ್ಟರಲ್ಲಿ ರಾಮುಲುವೂ ಸೋಮುಲುವೂ
ಭಾರವಾದ ಕೂಜೆಗಳನ್ನು ಎತ್ತಿಕೊಂಡು ಬಿಡದೆ ಪ್ರವೇಶಿಸುವರು
ಕುಸಿದುಹೋಗುತ್ತಿರುವ ಕಾಲುಗಳನ್ನು ಲೆಕ್ಕಿಸದೆ
ಪಿಚ್ಚಿನ ಕಡೆಗೆ ಚುರುಕಾಗಿ ಪುಟಪುಟನೆ ಹೆಜ್ಜೆ ಹಾಕುವರು
ಬಾಯಲ್ಲಿ ಒಂದೊಂದು ಬೀಡಿ
ಜೋಡಿ ನಕ್ಷತ್ರಗಳಂತೆ ಉರಿಯುತ್ತ
ರಾಮುಲುವೂ ಸೋಮುಲುವೂ
ಧೂಳೆಬ್ಬಿಸಿ ಸುಸ್ತಾಗಿ ಮಲಗಿದ ಬಯಲ ಮೈಗೆ
ನೀರು ಸಿಂಪಡಿಸಲು ತೊಡಗುವರು
ಕ್ರಮೇಣ ದಟ್ಟವಾದ ಕತ್ತಲು ಎಲ್ಲವನ್ನೂ ಆವರಿಸುವುದು
ಸ್ವಲ್ಪ ಹೊತ್ತಿನಲ್ಲೆ ಒಂದು ಬೀಡಿ ನಂದುವುದು
ನಂತರ ಇನ್ನೊಂದು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...