Home / ಕವನ / ಕವಿತೆ / ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಹಾಡು – ೧

ಹೇಳಿರಣ್ಣ ಹೇಳಿರೊ
ಬುದ್ಧಿವಂತ ಜನಗಳೆ
ಕೇಳಿರಣ್ಣ ಕೇಳಿರೊ
ಮನಸುಳ್ಳ ಜನಗಳೆ ||

ಹೇಳಿರಣ್ಣ ಹೇಳಿರೊ
ಹೆಣ್ಣೆಚ್ಚೊ ಗಂಡಚ್ಚೊ ||

ಹೆಣ್ಣೆಚ್ಚು ಎಂಬುವರು
ಕಾರಣವ ತಿಳಿಯಿರೊ
ಗಂಡೆಚ್ಚು ಎಂಬುವರು
ಕಾರಣವ ಹೇಳಿರೊ ||

ಮಗುವಾಗಿ ಹುಟ್ಟಿದ್ದು
ಹೆಣ್ಣೇಗೆ ಆಯಿತು ?
ಮಗುವಾಗಿ ಹುಟ್ಟಿದ್ದು
ಗಂಡ್ಹೇಗೆ ಆಯಿತು? ||

ಹೆಣ್ಣೋಗಿ ಗಂಡ್ಹೋಗಿ
ಮಗುವಾಗೋದ್ಯಾವಾಗ
ಮನುಷ್ಯನ ಮನಸೋಗಿ
ಮಗು ಮನಸ್ಯಾವಾಗ ||

ಹಾಡು – ೨

ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||

ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ನಿಮಿಗೆ ಜನ್ಮ ಕೊಟ್ಟವಳು | ಹೆಣ್ಣಲ್ಲವೆ
ಹೆತ್ತು ಹೊತ್ತು ಸಾಕಿದವಳು | ಹೆಣ್ಣಲ್ಲವೆ
ಎದೆ ಹಾಲು ನಿಡಿದವಳು | ಹೆಣ್ಣಲ್ಲವೆ
ಕೈತುತ್ತು ತಿನಿಸಿದವಳು | ಹೆಣ್ಣಲ್ಲವೆ
ತಾಯಾಗಿ ಮರುಗಿದವಳು | ಹೆಣ್ಣಲ್ಲವೆ
ಅಕ್ಕ ತಂಗಿಯಾದವಳು | ಹೆಣ್ಣಲ್ಲವೆ
ಅತ್ತೆ ಸೊಸೆಯಾದವಳು | ಹೆಣ್ಣಲ್ಲವೆ
ಜೀವನ ಸಂಗಾತಿಯಾದವಳು | ಹೆಣ್ಣಲ್ಲವೆ
ಅತ್ತು ಮರುಗುದಿವಳು | ಹೆಣ್ಣಲ್ಲವೆ
ಮಮತೆಯ ಮಡಿಲಾದವಳು | ಹೆಣ್ಣಲ್ಲವೆ
ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||
ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ಹಾಡು – ೩

ಮಕ್ಕಳು ನಮ್ಮ ಮಕ್ಕಳಣ್ಣ
ಗಂಡು ಹೆಣ್ಣು ಅಂತೆಲ್ಲ
ಭಿನ್ನ ಭೇದ ತರವಲ್ಲಣ್ಣ ||

ಗಂಡಾಗಿ ಹೆಚ್ಚೇನು
ಹೆಣ್ಣಾಗಿ ಕೀಳೇನು
ನಮ್ಮ ಮನದ ವಿಕಾರವು
ಆಗುವುದೆಂದು ನಾಶವು ||

ಹೆಣ್ಣೆಂದು ಅಬಲೆಯಳು
ಎಂಬುದೇ ಅಜ್ಞಾನ
ಏನೆಲ್ಲ ಸಾಧಿಸಲುಳು
ಬೇಕು ಸಮಾನತೆಯು ||

ಹಾಡು – ೪

ಹೆಣ್ಣೆಂಬುದು ಕೇಳಣ್ಣ
ಗಂಡು ಮಾಡಿದ ರಾಜಕೀಯ ||

ವಿದ್ಯೆ ಕೊಡಲಿಲ್ಲ
ಬುದ್ಧಿ ಹೇಳಿಲಿಲ್ಲ
ಅವಳ ಬುದ್ಧಿಗೆ ಮೊದಲು
ಬೆಲೆಯ ಕೊಡಲಿಲ್ಲ ||

ಮಾತಿಗೆ ಮುನ್ನ ಬಾಯಿ ಮುಚ್ಚಿಸಿ
ತಲೆ ತುಂಬಾ ಚಿಂತೆ ಹೆಚ್ಚಿಸಿ
ಬಲವಿದ್ದೂ ಹೀನಳ ಮಾಡಿ
ಸುತ್ತಲು ತೊಡಿಸಿ ಬೇಡಿ ||

ಮೊದಲ ಸ್ಥಾನಕೆ ಬರದಂತೆ
ಸದಾ ಮಾಡುತ ಕುತಂತ್ರ
ಜಗದಲೆಲ್ಲ ಎರಡನೆ ದರ್ಜೆಗೆ
ಬಾಳುವಂತಾಯಿತೆ ಹೆಣ್ಣಿಗೆ ||

ಹಾಡು – ೫

ಭಿನ್ನ ಭೇದವ ಮಾಡಬ್ಯಾಡಿರಿ
ಗಂಡೆಚ್ಚೊ ಹೆಣ್ಣೆಚ್ಚೊ ಅನ್ನಬ್ಯಾಡಿರಿ ||

ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು
ಬಿಟ್ಟಿರದ ಬಂಧಾನ ನಡಕಂಡು
ಬಂದೈತೆ ಅನಂತ ರಗಳೆ ಯಾಕಂತ
ಚನ್ನಾಗಿ ತಿಳಿ ನೀನು ಮತಿವಂತ ||

ರೂಪಕೆ ಸೋಲಬ್ಯಾಡ
ಗುಣವಾ ಮರಿಬ್ಯಾಡ
ಹೆಣ್ಣು ನಿನ್ನ ಸುಖದಾ
ಕಣ್ಣಾ ಗೊಂಬೇನು ||

ದುಡ್ಡೀನ ಕಾಲಕೆ ದೊಡ್ಡವನಾಗಿ
ಬಡ್ಡಿಯ ಕಾಲಕೆ ಗಿಡ್ಡವನಾಗಿ
ಹೆಣ್ಣಿನ ಪ್ರೀತಿಯೆ ಚಿಗುರಾಗಿ
ಬೆಳೆಯುವೆ ಹೆಮ್ಮರವಾಗಿ ||

*****

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...