Home / ಕವನ / ಕವಿತೆ / ಸೋದರತ್ತೆಗೆ

ಸೋದರತ್ತೆಗೆ

`ಈ ಮನೆಯ ಬಳ್ಳಿ ನನೆಕೊನೆ ಹೋಗಿ ಮುದ್ದು ಮಗು-
ಗಳ ಮಧುರನಗೆಯ ಹೂಬಿಡಲಿ ನರುಗಂಪಿಡಲಿ
ತಲೆತಲೆಯ ಹಳನಡತೆ ಬೇರೂರಿ ಪಸರಿಸಲಿ ‘
ಎಂಬ ಕನಸನು ಹೊತ್ತು ನನಸುಗೊಳಿಸಲಿಕೆಂದು
ಕಲ್ಪವಲ್ಲರಿಯಂತೆ ತುಂಬಿದುಕ್ಕಂದದಲಿ
ನೀನೆಮ್ಮ ಸಂಸಾರದಲಿ ಬೆರೆತು ಬಂದೆಯೌ.
ಕೈ ಹಿಡಿದ ನಲ್ಲೆಯನು ಹಡೆದ ತಾಯಾಗಿ ನೀ
ಬೆಳೆವೆನ್ನ ಮನೆತನಕೆ ಹಿರಿಸಾಕುತಾಯಾದೆ.
ಹತ್ತೆಂಟುವರ್ಷಗಳ ಹಿಂಬಾಳ ನೆನಸಿದರೆ
ಕಂಬನಿಯ ಮಂಜುತೆರೆಮರೆಗೊಂಡು ಬೇಯುವುದು
ಕುದಿಕುದಿವ ಈ ಎದೆಯು, ಕಂಡುದೊಂದುಂಡುವದು
ಬೇರೊಂದು ತೋರುತಿರೆ, ದುರ‍್ವಿಧಿಯ ಕಟ್ಟಣಕ-
ದಿದಿರೆಳ್ಳನಿತುಸಹಿತ ಸಾಗದಿರೆ ನಿನ್ನಾಟ.
‘ಕಾಯವ್ವ ಕುಲದೇವಿ ಎಲ್ಲವ್ವ ಈ ಮನೆಯ-
ನೆಂದು ನೀ ದಿನದಿನವು ಬೇಡಿ, ಬಾಯ್ದಿಡುತಿರಲು,
ಬೇನೆ ಕುಲದೇವತೆಯು, ಕಣ್ಣೀರೆ ನಿಟ್ಟುಸಿರೆ
ಕದಲದಾರತಿಯಾಗಿ ಸಾವ ಕೌನೆರಳಲ್ಲಿ
ಕಾಲವನು ನೂಕಿದೆವು ಹೆದರಿಕೆಯ ಜಪತಪದಿ.
ಮನೆಮಡದಿ ನಲಿದೊಲಿದು ಬಾಳಬನವನು ಸೇರಿ
ತಿರುತಿರುಗಿ ಹೆರಿಗೆಹಾವಿನ ಕಚ್ಚುನಂಜೇರಿ
ಪಾಡಳಿದು ತಾಯ್ಸೊಗಕೆ ಎರವಾಗಿ ಸೋತಿಹಳು.
ಮನೆಬಳ್ಳಿ ಬೆಳೆವುದೆಲ್ಲಿಯಮಾತು, ಬನ್ನ ಬಿರು-
ಬಿಸಿಲಿಂದ ಮುರುಟ ನೀರಸವಾಗಿ ಬದುಕಿಹುದು
ಮೊದಲಮಗುಮುಗುಳು, ತಾನರಳದಲೆ ಕೈ ಕಾಲು
ಜೋಲಾಗಿ ಪೂರ‍್ವಕರ‍್ಮದ ಪಿಂಡ ಕರಗದಿದೆ.
ಹಲಹಸುಳೆ ನನೆಯಲ್ಲಿ ಕೊನೆಗಂಡು ಕಣ್ಣೀರ
ಹರಿಸಿದವು, ಹುಟ್ಟಿ ಬೆಳೆವೊಂದು ಚೆಲುಗಂಡುಹೂ
ಅರಿದಾಗಿ ಕೈಬಿಟ್ಟು ಹೋಯ್ತು ಕಣ್ಮರೆಯಾಗಿ.
ಈ ಎಲ್ಲ ಕಹಿಯುಂಡು ಸೇವೆಯಲಿ ಜೀವವನು
ತೇದು ನೀ ಮರುಕದುರಿಯಲಿ ಬೆಂದು ಬಸವಳಿದೆ.
ಹಳೆಯ ಸಾರಾಸಾರವೆಲ್ಲದರ ಸಂಕೇತವೇ
ನೀನಾಗಿ ವ್ರತನಿಯಮಗಳ ಕಠಿಣಕಟ್ಟಳೆಗೆ
ಮೈಮಣಿಸಿ ಸಂಕಲ್ಪ ಸಾಧನದಿ ಮುಂದಾದೆ ;
ನಮ್ಮ ಕರ‍್ಮದ ಮುಂದೆ, ಇದಿರು ಬೆಟ್ಟವಕೊರೆದು
ಮುನ್ನುಗ್ಗಲೆಳಸುತಿಹ ಕಾಳ್ಪುರದ ತೆರನಾಗಿ
ನಿನ್ನಯ ಹಟಾಟೋಪ ಹರಿಗಡಿದು ಹೋಯಿತೌ,
ಆಶೆ ಅಸ್ತಮಿಸಿದೊಲು, ಸೇವೆಸವೆದಳಿದಂತೆ,
ನಿನ್ನಯಾ ಕನಸುಮನೆ ಕೆಳಗುರುಳುವುದ ಕಂಡು
ಹೊರಳಿ ನೋಡದೆ ನೀನು ಕಂಬನಿಯನುರುಳಿಸುತ
ಸಾವಿನುರಿಗುಂಡದಲಿ ಬಯಸಿದೆಲು ಸೇರಿಹೋದೆ.
ಸೋದರತ್ತೆಯೆ, ನಿನಗೆ ಸಾದರತಿಲಾಂಜಲಿಯು !
ಮರೆಯದೆಂದಿಗು ನನಗೆ ನಿನ್ನ ಸೇವೆಯ ಬಲಿಯು !
ನಿನ್ನ ಕನಸದು ಈಗ ಮರಳುವನೆಯಾದರೂ
ಮಂಗಳವು ತಿಂಗಳನ ತೆರದಿಂದ ಮರಳೀತು,
ಒಲವು ಫಲಿಸದೆ ಇರದು, ಭಕ್ತನಿಗೆ ಅಳಿವಿಲ್ಲ.
ದುಷ್ಕರ‍್ಮ ಹಣ್ಣಿದೊಲು ಸತ್ಕರ‍್ಮ ಸುಸ್ವಪ್ನ
ಹಣ್ಣಿಯೇ ತೀರುವವು, ತಾಳ್ಮೆಯಲಿ ಬಾಳುವೆಯ
ತಿರುಳಿಹುದು, ಜೀವನದಿ ನಂಬಿಕೆಯ ಬಲಪಡಿಸಿ
ತಿಳಿನೋಟದಲಿ ಹೊಳೆದು ಹೊಳೆಯಂತೆ ಹರಿಯುವೊಲು
ನಿನ್ನ ಒಲವಿನ ಹರಕೆ ನಮ್ಮ ತಲೆಮೇಲಿರಲಿ !
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...