Home / ಕವನ / ಕವಿತೆ / ಇರವು ಮತ್ತು ಧರ್ಮಗಳ ಹಾಡು

ಇರವು ಮತ್ತು ಧರ್ಮಗಳ ಹಾಡು

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು
ಇದರ ತೆರವರಿವರಾರವನೊಬ್ಬ ಹೊರತು
ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ
ಜೀವಲೀಲೆಯ ಮರ್ಮವೊರೆವರಾರರಿತು?
ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ
ಒಂದಾತ್ಮ ತಾನ್ನೆನ್ನುವನುಭಾವಹೊಂದಿ
ಪಂಚಭೂತಗಳೊಡನೆ ಅದು-ತಾನು ಎಂದೆನುತ
ಬೇಹರಿಸಿ ಬೇಹಾರ ತೀರೆ ತಾ ನಂದಿ;
ತನುತನುವೊಳಷ್ಟಷ್ಟು ದೇಶವನು ತಾ ತುಂಬಿ
ಕರ್ಮಗಳಿನಷ್ಟಷ್ಟು ಕಾಲವನು ತುಂಬಿ
ಮಮತೆಯೊಳಗಷ್ಟಷ್ಟು ವಿಶ್ವಾತ್ಮವನು ತುಂಬಿ
ಅಹಮೆಂದು ನೊಂದು ನಲಿದಾನಂದ ತುಂಬಿ
ಸೃಷ್ಟಿ ಮೊದಲಿಂದುವರೆಗಾಗಿಹೋದವರೆಷ್ಟು!
ಆದವರು ಹೋದವರು ಆಗುವವರವರೇ.
ಅರ್ಥಕಾಮಗಳಿಡುವ ರತಿವಿರತಿ ಛಂದಕ್ಕೆ
ಭೂತರಂಗದಿ ಜೀವ ನರ್ತಿಸುವುದರರೇ!
(೨)
ಈ ಮಹಾನಾಟ್ಯವನು ಚೋದಿಸುವ ಚಾಲಕನು
ಈ ಚಿತ್ರಗತಿಗಾನವಿನ್ಯಾಸಿ ಯಾರು?
ಇಲ್ಲಿ ಕೊಂಕಲ್ಲಿ ಋಜು ಇಲ್ಲಿ ಕಟುವಲ್ಲಿ ಮೃದು
ಅಂತು ರಸ ಕೊನೆಗಮೃತ ವಿಂತೆಸೆಪನಾರು?
ಧರ್ಮವದು ಜೀವನದ ಮರ್ಮವದು ಚೇತನರ
ಸಮುದಾಯಮಂಗಳಕೆ ಅದರಂಕೆ ರಕ್ಷೆ
ದೇಹಾಂಗದರಿವೆಲ್ಲ ಜೀವಾಣುಗಿರುವಂತೆ
ಅರಿವರಿವೊಳಿಹುದಿದರ ಹೃನ್ನಿಷ್ಠ ನಕ್ಷೆ.
ಈ ನಕ್ಷೆಯಂತಾಗೆ ಅರ್ಥಕಾಮವಿಕಾಸ
ಎಂಥ ಶುಭದುದಯವಹುದೆಲ್ಲ ಜೀವರೊಳು!
ಧರ್ಮಾರ್ಥ ಕಾಮಗಳ ಈ ಪರಸ್ಪರವಶತೆ
ದುಸ್ಸಾಧ್ಯವೀಜಗದೊಳದಕೆ ಭವದಳಲು.
ಒಂದುಸಿರು ಹಲವೊಡಲು ಒಂದರಿವು ಹಲವು ಮನ
ಒಂದೆ ಆನಂದಕ್ಕೆ ಹಲಹಲವು ಹೃದಯ
ಇಲ್ಲಳಿಯಲಲ್ಲುಳಿದು ಇಲ್ಲಿ ಮುಳುಗಲ್ಲೆದ್ದು
ಅರ್ಥಕಾಮಗಳಂಕೆಗಿಡೆ ಧರ್ಮದುದಯ.
ಹಲವರಿದ ಧಿಕ್ಕರಿಸೆ ಕೆಲವರೊಳಗುಜ್ವಲಿಸಿ
ಭೋಗಿಯೋಡಿಸೆ ನಿಷ್ಠ ಯತಿಯನಾಶ್ರಯಿಸಿ
ಹಲರತೀಂದ್ರಿಯರಾಗೆ ಕೆಲಜಿತೇಂದ್ರಿಯರಲ್ಲಿ
ತೂಕ ತಪ್ಪಿದ ಜಗವ ಸಮತೂಕ ನಿಲಿಸಿ
ಅರಿವೊಳೆಲ್ಲೋ ನಿಂತು ಶಿವವ ಸಾಧಿಸುತಿಹುದು
ಲೇಸುಕೇಡಳಿವುಳಿವ ತಕ್ಕಂತೆ ಬಳಸಿ
ಆ ಧರ್ಮಭೃದ್ವರರ ನೆನಹನರಿವೊಳು ಧರಿಸಿ
ಶಂಕೆಯೆಲ್ಲವಕಳೆವ ಶಿವಕೆ ಬಗೆ ಬೆಳಸಿ.
*****
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...