೧
ಪೃಥ್ವಿಯ ಒಡಲೊಳಗಿರುತಿಹುದೇನು?
ತಳಮಳ ಕಾಯ್ದಿಹ ಲಾವಾರಸವು!
ಭೂಮಿಯು ಗದಗದ ನಡುಗುತಿದೆ!
ಸಾಗರ ಕೊನೆ ಮೊದಲಾಗುತಿದೆ!
ಗಿಡವದು ಬುಡಮೇಲಾಗುತಿದೆ!
ಪಶುಗಳ ಪ್ರಾಣವು ಪೋಗುತಿದೆ!
ಮಾನವಕೋಟಿಯು ಮುಳುಗುತಿದೆ!
ಕಟ್ಟಡ ಕಟ್ಟಡ ಉರುಳುತಿದೆ!
ಪಟ್ಟಣ ಪಟ್ಟಣ ಪೋಗುತಿದೆ!
ಅಂಬರ ನೋಟವ ನೋಡುತಿದೆ!
ಏನಿದು ಭೀಕರ!
ದೃಶ್ಯ ಭಯಂಕರ!!
ಉಳಿಸುವರಾರು? ಬೆಳಿಸುವರಾರು?
ದೇವನ ಮನವನು ಗೆಲ್ಲುವರಾರು?
೨
ಹಿಂದೂದೇಶದೊಳಡಗಿಹುದೇನು?
ತಾಪದ ಪಾಪದ ಪರಮನ್ಯಾಯ!
ನುಡಿಗೆ ನಾಡಿದು ನಡುಗುತಿದೆ!
ರಾಜ್ಯದ ಬಿಗಿತನ ಬಿಚ್ಚುತಿದೆ!
ಸ್ವಾತಂತ್ರ್ಯವು ಸಲೆ ಸಾಗುತಿದೆ!
ರಾಟಿಯ ಕೋಟಿಯು ಮುಳುಗುತಿದೆ!
ಬಡವರ ಒಡಲುರಿ ಹೆಚ್ಚುತಿದೆ!
ವಿಧವೆಯ ಶಾಪವು ತಟ್ಟುತಿದೆ!
ಜೀವನ ಕಟ್ಟಡವುರುಳುತಿದೆ!
ಭಾರತ ಕಣ್ಣಿಲಿ ಕಾಣುತಿದೆ!
ಎಲ್ಲಿಯನ್ಯಾಯ!
ಪರಮನ್ಯಾಯ!!
ಹೇಳುವರಾರು? ಕೇಳುವರಾರು?
ಸಮಾಜಗೋರಿಯ ಕಟ್ಟುವರಾರು?
*****








