ಚೆಲುವಿಗಿಲ್ಲವು ಬಡವ-ಬಲ್ಲಿದ-
ರೆಂಬ ಭೇದದ ಭಾವವು!-
ನುಡಿಯಿದನು ಪರಿಕಿಸಲು ಈ ದಿನ
ಕಂಡ ಮಗುವೇ ಸಾಕ್ಷ್ಯವು!
ನಡೆದರೂ ಸಹ ತೇಲುವಂತಿಹ
ನನೆಗೆ ಮಿಂಚನು ಪೂಸುತ
ಮುಗ್ಧತೆಯೊಳದನದ್ದಿ ತೆಗೆದೊಲು
ಹಸುಳೆಯಿದೆ ನಗೆ ಸೂಸುತ!
“ಹೂವಿದಕೆ ಮತ್ತಾವ ದುಂಬಿಗ-
ಳೆರಗಿ ನಾವುಗಳಿದ್ದರು
ಚಂಚಲತೆಯೊಳೆ ಚಲಿಸಿ ಚುಂಬಿಪ
ನಮ್ಮ ಹಕ್ಕನು ಕದ್ದರು?”-
ಎನುತ ಕುರುಳಿನ ಮಾಲೆಯಿದೊ ಹಣೆ-
ಯಿಂದ ಕಣ್ಣಿಗೆ ಇಣುಕಿದೆ!
ಕುರುಳ ಕೊನೆಯೊಂದೊಂದರಲ್ಲಿಯು
ಚೆಲುವ ದೇವಿಯ ಮಿಣುಕಿದೆ!
ಇರದು; ಕಣ್ಣಿನ ಮಿಂಚಿಗೂ ನಗೆ-
ಮಿಂಚಿಗೂ ನಡೆಯುತ್ತಿಹ
ಸ್ಪರ್ಧೆಯೀಕ್ಷಿಸೆ ಹಣೆಯ ಮಣೆಯೊಳು
ಕುಳಿತು ಮೆರೆಯುತ್ತಿವೆಯಹ!
ಬಿಳಿಯ ಹಲ್ಲಿನ ಮೊಳಕೆಯೊಂದಿದೆ
ತುಟಿಯ ಕೆಂಪನು ಸಾರಲು
ಎರಡು ಕೆಂಪುಗುಲಾಬಿ ದಳಗಳ
ನಡುವೆ ಮಲ್ಲಿಗೆ ಮೊಗ್ಗೊಲು!
ಬಡತನದ ಬಸಿರಲ್ಲಿ ಜನಿಸಿದ
ಹೊನ್ನ ಪುತ್ಥಳಿಯಿದು ದಿಟ!
ತಾಯಿಯಾದರೊ ಹೊನ್ನ ಶೂಲವಿ-
ದೆನ್ನುತಲಿ ಹಿಡಿವಳು ಹಟ!
ಚೆಲುವಿಗಿಲ್ಲವು ಬಡವ-ಬಲ್ಲಿದ-
ರೆಂಬ ಭೇದದ ಭಾವವು!
ಜಗದಿ ಬಗೆಬಗೆ ಹೂಗಳಿದ್ದರು
ಚಿಟ್ಟೆಗೆಲ್ಲವು ಭೋಗ್ಯವು!
*****


















