ಆರುಜನರಿವರರಿಗಳೆನ್ನಯ ಬೆನ್ನು ಹತ್ತಿರೆ ನಾನು ಬಯಸುವೆ |
ಪಾರುಗಾಣುತಲವರ ಹಸ್ತದಿ ದೂರ ಪೋಗ್ವುದಕೇ ||
ಮೂರಮಣ ನಾನೆಂತು ದಾಟುವೆ ಘೋರವಾದೀ ಭವದ ಸಾಗರ |
ತೋರು ದಾರಿಯ ನನಗೆ ನಿನ್ನಯ ಬೆಳಕು ತೋರುತಲಿ || ೧ ||
ಹಣ್ಣುಮಾಡಿಹರಿವರು ನನ್ನನು ಕಂಡಕಂಡಡೆ ಪೀಡಿಸುತ್ತಲಿ।
ಪೆಣ್ಣುಯೆನ್ನುವ ಕರುಣೆಯಿಲ್ಲದೆ ಪೊಡೆವರೆನ್ನನ್ನೂ ||
ಕಣ್ಣುಕಾಣದ ಕುರುಡಿಯಾಗಿಹೆ ಮಣ್ಣುಬೀಳಲಿ ಇವರ ಬಾಯೊಳು |
ಸಣ್ಣಗಾಗಿಯೆ ಅರೆಯುತಿರ್ಪರು ಸತತ ನನ್ನನ್ನು || ೨ ||
ಅಂಬಿಗಪ್ಪನೆ ಬೇಡಿಕೊಳ್ವೆನು ಪಾರುಮಾಡೆಲೊ ಯಿವರ ಕೈಯ್ಯಿಂ |
ನಂಬಿಬಂದಿಹಳನ್ನು ಕಾಯ್ದುದು ಧರ್ಮನಿನಗಲ್ಲೇ ||
ತುಂಬಿದ ಸಾಗರದ ತೀರದಿ ನಿಂತುಕೊಂಡಿಹೆ ಗತಿಯ ಕಾಣದೆ |
ಅಂಬರೀಷಗೆ ಮುಕುತಿಯಿತ್ತಿಹ ಹರಿಯೆ ಕಾಯನ್ನ || ೩ ||
ಹುಟ್ಟಿನಿಂದಲಿ ನೀರ ಕಡಿಯಲೊ ಸುಟ್ಟುಮೋರೆಯರಿನರ ತಪ್ಪಿಸೋ।
ಶ್ರೇಷ್ಠನಾವಿಕ ನೆನಿಸಿಕೊಂಬೆಯೊ ನೀನು ಜಗದೊಳಗೇ ||
ವುಟ್ಟ ಸೀರೆಯ ಪರಿವೆಯಿಲ್ಲದೆ ಕಷ್ಟಬಡುತಲಿ ಓಡಿ ಬಂದಿಹೆ |
ಕಷ್ಟನಳಿಯುತೆ ಶ್ರೇಷ್ಠಪದವಿಗೆ ಮುಟ್ಟಿಸೆನ್ನನ್ನೂ || ೪ ||
ಮೀನನಾಗುತೆ ಹೀನದೆಸೆಯೊಳು ಗ್ಲಾನಿಗೊಳ್ಳುತೆಬಿದ್ದಕಾಲಕೆ |
ಮಾನವರ ರಕ್ಷಣೆಯ ಮಾಡಲು ಮತ್ಸ್ಯ ನೀನಾದಿ ||
ದೀನರಕ್ಷಕ ಭೂರಮೆಯನೀಂ ಪೆತ್ತು ಬೆನ್ನೊಳು ಪಾರುಮಾಡಿದಿ |
ಕೂರ್ಮ ರೂಪದಿ ಹರಿಯೆ ನಾರಾಯಣನೆ ಭಗವಂತಾ || ೫ ||
ಹಂದಿರೂಪದಿ ಚಂದದಿಂದಲಿ ಮಂದಿ ಸಹಿತವೆ ಭೂರಮೆಯನೀ |
ಹಿಂದಕೆತ್ತಿದೆ ಕೋರೆಯಿಂದಲಿ ಜಗವನುದ್ಧರಿಸೆ ||
ಅಂದು ನಿನ್ನೀ ಸಾಹಸವ ಮೆಚ್ಚುತೆ ಚಂದ ಪೂಗಳವೃಷ್ಟಿಗೈದರ |
ತಂದೆ ಹರಿಯೆ ಭಾಪುಯೆನ್ನುತೆ ಸಂದದಿವಿಜಗಣಾ || ೬ ||
ದುಟ್ಟ ರಕ್ಕಸನನ್ನು ಶೀಳಲು ಶ್ರೇಷ್ಠನರಹರಿ ರೂಪಿನಿಂದಲಿ |
ನೆಟ್ಟನೆ ಹೊರಬಿದ್ದು ಬಂದಿಯೊ ಶೀಳಿಕ೦ಬವನೂ ||
ಅಟ್ಟಿ ರಕ್ಕಸನನ್ನು ಯಮಸದ ಕಾಗಕಾಯ್ದಿಯೊನಿನ್ನ ಭಕ್ತನ |
ಶೇಷ್ಠ ಪ್ರಹ್ಲಾದನನು ನಿನ್ನಮ ಮೊರೆಯ ಹೊಕ್ಕವನ || ೭ ||
ಕುಳ್ಳ ವಾಮನನಾಗಿ ಬರುತಲಿ ಬಿಕ್ಷೆ ಬೇಡುತೆ ಮೂರುಪಾದವ |
ಮಳ್ಳು ಮಾತಿಲಿ ದಾನ ಬೇಡುತೆ ಬಲಿಯ ವಂಚಿಸಿದೀ ||
ಸುಳ್ಳು ಬೀಳದ ಭಕ್ತ ಬಲಿಯೊಳು ಮೆಚ್ಚಿಕಾಯ್ದಿಯೊ ಗದೆಯ ಪಿಡಿಯುತೆ |
ವೊಲ್ಲೆನೆನ್ನದಲವನ ಬಾಗಿಲು ಪಾತಾಳದಲಿ ನೀನೂ || ೮ ||
ಕಾರ್ತವೀರ್ಯನು ತಂದೆ ಜಮದಗ್ನಿಯನು ಪೀಡಿಸೆ ಸಹಿಸಲಾರದೆ |
ಆರ್ತರಕ್ಷಕ ಬಂದೆ ಧಾವಿಸಿ ಕೊಡಲಿ ಪಿಡಿಯುತ್ತೆ ||
ಧೂರ್ತ ಕ್ಷತ್ರಿಯರನ್ನು ನೀಂ ಸಂಹರಿಸಿ ಜಗದಾಭಾರವಿಳಿಸಿದಿ |
ಮೂರ್ತ ರೂಪದಿ ಪ್ರಕಟವಾಗುವಿ ಕಾಲಕಾಲಕ್ಕೆ || ೯ ||
ಜಗದಿ ಸುಖಶಾಂತಿಗಳ ರಾಜ್ಯವ ನೆಲಿಸಲೋಸುವ ರಾಯನಾಮದಿ |
ಅಗಹರನೆ ಜನಿಸಿದ ಮಗನ ರೂಪದಿ ರಾಯದಶರಥಗೇ ||
ದುರುಳ ರಾವಣ ನಿನ್ನ ರಾಣಿಯ ಸೀತೆಯನು ಕದ್ದೊಯ್ಯಲಾಗಲೆ |
ಮರಣರಕ್ಕಸಗೆಸಗಿ ಪೊಳೆದೆಯೊ ಸೀತೆಸಹಿತಾಗಿ || ೧೦ ||
ಕೃಷ್ಣ ನೆಂಟಭಿಧಾನದಿಂದಲಿ ಪುಟ್ಟಿ ಜಗದೊಳು ಕೊಂದೆಕಂಸನ |
ವಿಷ್ಣುಪ್ರಿಯಭಾಗ್ವತದ ತತ್ವವ ಜಗಕೆ ಬೀರಿದಿಯೋ |
ಕೃಷ್ಣೆ ಪತಿ ಪಾಂಡವರ ರಕ್ಷಿಸೆ ಶ್ರೇಷ್ಠ ಸಾರಥಿಯಾಗಿ ಪಾರ್ಥನ |
ಶ್ರೇಷ್ಠ ಗೀತೆಯ ಮರ್ಮವನು ನೀಂ ನರಗೆ ಬೋಧಿಸಿದಿ || ೧೧||
ಅರುಹ ಲೋಸುಗ ಜಗಕೆ ನಿಃಸಾರತೆಯ ಸಂಸಾರದಲಿ ತೋರುವ |
ಪರಮ ಯೋಗಿಯ ರೂಪಿನಿಂದಲಿ ಬುದ್ಧನೀನಾದೀ ||
ಕರುಣೆಪೂರಿತ ಹಿಂಸೆಯರಿಯದ ಗಾಂಧಿಯೆಂಬಾ ಸುತನ ಕಳುಹಿದಿ |
ಪರಮ ನಿನ್ನಯ ತತ್ವಬೀರಲು ಜಗದಿ ಶಾಶ್ಚತವ || ೧೨ ||
ದುರುಳನೊರ್ವನು ಗಾಂಧಿದೇಹವ ಕೆಡಹಲಾತನ ಪ್ರಾಣವಕ್ಕಿಯು |
ಭರದೆ ಹಾರಿತು ನಭಕೆ ಪೊಳೆಯಲು ಚಂದ್ರ ಮಂಡಳದಿ ||
ಮರುಳು ಜನರಿಹ ಗಾಂಧಿ ತತ್ವವ ಮರೆತು ತಮ್ಮೊಳು ಜಗಳಗೈವರು !
ಬಿಗಿದು ನಿಂತಿದೆ ಕದನ ಸೂಚತ ಮುಗಿಲು ವಿಶ್ಯ ದೊಳೊ || ೧೩ ||
ಜಾತಿವರ್ಣಗಳೆಂಬ ನೆಪದಿಂ ಕೋತಿಯಂದದಿ ಕಲಹಗೈಯುತೆ।
ಸ್ವಾರ್ಥಪೂರಿತ ಜನರು ಜಗದೊಳು ಮೆರೆವರೆಲ್ಲೆಲ್ಲಾ ||
ಭೀತಿಯಿಂದಲಿ ಕಾಣುತಿರ್ಪರು ಬಂಧು ಜನಗಳು ತಮ್ಮತಮ್ಮೊಳು
ನೀತಿ ಬೋಧಿಸೆ ನಿನ್ನಗತ್ಯವು ಯಿಂದು ತಾನಿಹುದು || ೧೪ ||
ಕಲಿಯ ಮದವನು ಯಿಳಿಸೆ ನಿನ್ನಯ ಕಲ್ಕಿಯವತಾರಕ್ಕೆ ಸಮಯವು |
ಒದಗಿ ಬಂದಿದೆ ಬಾರೊ ಹರಿಯೆ ಭಾರವಿಳಿಯುದಕೇ ||
ಗಲಿತವಾಗಿಹ ನೀತಿಯೆಮ್ಮೊಳು ಮೆರಿಸಿ ಬಳಯುತರನ್ನು ಮಾಡುತೆ |
ಹರಿಸೋ ಮಾನವ ಕುಲವ ಹರಿಯೇ ಸನ್ಮಾರ್ಗತೋರುತಲೀ || ೧೫ ||
*****


















