Home / ಕವನ / ಕವಿತೆ / ಮೋಹನ ಮುರಲಿ

ಮೋಹನ ಮುರಲಿ

ಶಾರದ ಚಂದ್ರನು ಬಾನಿನ ನೀಲಿಗೆ
ಬೆಳ್ನಗು ಹೂವನು ಮುಡಿಸಿಹನು
ದಧಿ ಧವಲಾಚ್ಛ ಜ್ಯೋತ್ಸ್ನಾ ಲಹರಿಯು
ಭೂಮಿಗೆ ಬರಿಸಿತು ಪುಲಕವನು

ಮಲಯ ಸಮೀರನು ಯಮುನಾ ಜಲದೊಡ-
ನಾಡುತ ತೀಡುತ ಬರುತಿಹನು
ವೃಂದಾವನದಲಿ ಧ್ಯಾನಾವಸ್ಥಿತ
ವೃಕ್ಷಗಳೊಳಿಯನೆಬ್ಬಿಪನು

ಸಂಧ್ಯಾ ಸುಮಗಳ ಮೋಹಕ ಸೌರಭ
ಗಾಳಿಗೆ ಗರಿಗಳ ನಿಮಿರಿಸಿತು
ರಾತ್ರಿಯ ಮೌನದ ಕಡಲಲಿ ಮುರಲಿಯ
ತಾನವು ತೆರೆಗಳ ತೇಲಿಸಿತು

ವನದಲಿ ಹರ್ಷೋನ್ಮತ್ತ ಕಿಶೋರ ಮ-
ನೋಹರ ಕೃಷ್ಣನು ವಿಹರಿಪನು
ಪ್ರಕೃತಿಯ ಸೌಂದರ್ಯಾಮೃತ ಸಾಗರ
ವೀಚಿಗಳೋಳಿಯೊಳಾಳುವನು

ಅವನ ಕರಾಗ್ರದ ಚೇತನವಿಲ್ಲದ
ವೇಣುವು ಜೀವವನಾಂತಿಹುದು
ತುಟಿಗಳ ಸೊದೆಯನು ಹೀರುತ, ಮೆಲ್ಪಿನ
ನಾದಸಮುದ್ರವನಕ್ಕಿಪುದು

ಸವಿಗೊಳಲಿನ ಸರವೆಳೆಗೊಲ್ಲತಿಯರ
ಚಿತ್ತವ ಚಂಚಲವಾಗಿಸಿತು
ಹಾಸಿದ ಹಾಸಿಗೆಯನು ತನುವುಳಿಯಿತು
ಮನವಿಂಚರದಲಿ ಮುಳುಗಿತ್ತು

ಮುರಲೀ ನಾದಕೆ ತಾಳವನಿಕ್ಕುತ,
ಕಾಲ್‌ ಮುನ್ನಡೆಯಿತು ವನದೆಡೆಗೆ
ಕೊಳಲುಲಿಯವರನು ಸೆಳೆಯಿತು, ತಂದಿತು
ಲೀಲಾ ಗೋಪಾಲಕನೆಡೆಗೆ

ಬಿಡು ಜಡೆಯೆಳಲುವ ಕಾಂತಿಯ ಕಣ್ಗಳ
ಕೆಂಪಿನ ಕೆನ್ನೆಯ ಕನ್ನೆಯರು
ಮುಕುಲಸ್ತನಗಳ ನಳಿತೋಳ್‌ಬಳ್ಳಿಯ
ಕಿರುನಡುನೆರಸಿದ ಚೆನ್ನೆಯರು

ಓಡುತ ಹಾರುತ ನಲಿಯುತ ನೆಗೆಯುತ,
ತಮ್ಮನು ತಾವೇ ಮರೆಯುತ್ತ,
ಕುಣಿಯುತ, ಮಣಿಯುತ, ಬಂದರು ನಿ೦ದರು
ನಂದ ಕುಮಾರನ ಬಳಸುತ್ತ

ನೂತನ ಜಲಧರ ನೀಲ ಶರೀರನು
ಪೀತಾ೦ಬರವನ್ನುಟ್ಟವನು,
ಕುಟಿಲಾಲಕ ಚಯ ಚಿತ್ರಿತ ಫಾಲನು
ಮುಗ್ಧ ಸ್ನಿಗ್ಧಾಂಬಕಯುತನು;

ಚಂಚಲ ಕುಂಡಲ ಮಂಡಿತ ಗಂಡ-
ಸ್ಥಲ ಯುಗ ಸ೦ಶೋಭಿತ ಮುಖನು,
ನವಿಲಿನ ಗರಿಯ ಕಿರೀಟವನಾ೦ತಿಹ
ವನಮಾಲಿಯು ನಡು ನಿ೦ದಿಹನು

ಸಪ್ತ ಸ್ವರದಲಿ ವಿಧ ವಿಧ ರಾಗವ
ಸಿರಿಗೊಳಲಿನ ಮುಖ ಸೂಸಿತ್ತು
ಕಾಳಿಂದಿಯು ಹೊನಲಿಡುವುದ ಮರೆಯುತ,
ಆಲಿಸುತ೦ತೆಯೆ ನಿ೦ದತ್ತು

ಪಶು ಮೃಗ ಗಣಗಳು ತಮ್ಮೆದೆಯನು ತೆರೆ-
ದಿಂಚರವನು ಮೊಗೆದೀಂಟಿದುವು
ಮರಗಳು ಎಲೆಗಿವಿಗಳನುರೆ ನಿಮಿರಿಸಿ,
ಗೀತಾಮೃತದಲಿ ಮುಳುಗಿದುವು

ಜಡ ಪ್ರಕೃತಿಯು ಚೈತನ್ಯವನಾನುತ
ಗಾನಾನ೦ದದಿ ಬೆರೆದತ್ತು
ಗೋಪೀವೃಂದವು ಶ್ರೀ ಕೃಷ್ಣಾತ್ಮದೊ-
ಳೈಕ್ಯಾಮರತೆಯ ಗಳಿಸಿತ್ತು
*****
೧೯೪೩

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...