Home / ಕವನ / ಅನುವಾದ / ಚೋಳಕನ್ನೆಯರು

ಚೋಳಕನ್ನೆಯರು

ಏಳು ಮಗಳುದಿರು ಚೋಳರಾಯನಿಗೆ,
ಒಬ್ಬ ತಾಯ ಸಿರಿಮಕ್ಕಳು;
ಸಾಲದೊಂದು ದಿನ ಹೇಳಿ ಮುಗಿಸುವರೆ
ಹಬ್ಬಿಹೆಣೆದವರ ಹಿತುವನು.
ಏಳು ನೈದಿಲೆಗಳಕ್ಕತಂಗಿಯರು,
ಮಾಲೆಯೊಂದರಲ್ಲಿ ಹೊಂದಿಕೆ,
ಅವರ ತಂದೆಯೋ, ಧೀರ ಕಾಳಗದೊ
ಇವರ ಚಿಂತೆಯನೆ ಕೊಳ್ಳನೆಣಿಕೆಯಲಿ-
ಅವನಿಗಿಷ್ಟು ರುಚಿ ರಣದಲಿ!
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಮೆರೆವ ಮೂಡಲಲಿ, ಮೊರೆದು ತೀಡುತಲಿ,
ಗಾಳಿ ತರುಬುವುದು ಕಡಲನು;
ತೆರೆಗಳೇಳುವುವು, ಹೊರಳಿ ಬೀಳುವುವು
ಚೋಳಮಂಡಲವ ತೊಳೆವುವು.
ಹಡಗ ನಡಸುತಲಿ, ಕಡಲ ಹಾಯುತಲಿ,
ತಡಿಯ ಸೇರುವರು, ಕಳ್ಳರು,
ಬೂದಿಮರಳಿನಲಿ ದುಮುಕಿ ನಿಲ್ಲುವರು;
ಕಾದಿ ಕವಿಯಲದೊ ಪಡೆಯ ನಾಯಕನ
ಊದಿ ಮೊಳಗುವನು ಕೊಂಬನು.
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ನೋಟಸಿಂಗರದ ತೋಟಿದೊತ್ತಿನಲಿ
ಮುಸುಕುಕೊಂಬೆಗಳ ನೆರಳಲಿ.
ಮೇಳದೊರಗಿರುವರೇಳು ಕನ್ನೆಯರು
ಮಿಸುನಿಜಿಂಕೆಗಳ ತೆರದಲಿ.
ಆಳ ಬೊಬ್ಬೆಯನು ಕೇಳಿ ಬೆಚ್ಚುತಲಿ,
ಬೀಳುತೇಳುತಲಿ ಹರಿವರು;
ಜಾರಿ ಮುಗ್ಗುವರು, ನೆಗೆದು ನುಗ್ಗುವರು-
ಧೀರ ಜನಕನೇ, ಸೂರೆಗೆಲ್ಲಿರುವೆ?
ಸೂರೆ ಇಲ್ಲಿ ಸಿರಿಮಕ್ಕಳು!
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಎಡಕೆ ಬಲಕೆ ಸರಿದೇಳು ಕನ್ನೆಯರು
ಹಳ್ಳತಿಟ್ಟಿನಲಿ ಹರಿವರು;
ನುಡಿಸಿ ಸೊಕ್ಕಿನಲಿ, ಬಿಡದೆ ಬೆನ್ನಿನಲಿ.
ಕಳ್ಳಚೆನ್ನಿಗರು ಬರುವರು.
ಜರೆದು ಹೇಳುವರು – “ಮರೆತು ಮಕ್ಕಳನ್ನು
ಮರುಳು ತಂದೆ ಅವನಲೆವನು.
ಬರಿದು ಸಾಕು ಮನೆ, ಮರಳಿ ಬಂದವಗೆ-
ನಮಗೆ ಕುರುಳಸುಳಿ ಬಾಚಿ ತಿದ್ದಿಕೊಳಿ,
ನಮಗೆ, ಚೆಲುವೆಯರ ಒಲಿಯಿರಿ.”
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಕೆಲವರತ್ತಕಡೆ, ಕೆಲವರಿತ್ತ ಕಡೆ,
ಚೆಲ್ಲಿ ಗಾಳಿಮುಗಿಲಂದದಿ,
“ಬನ್ನಿ ಎಲ್ಲರೂ- ಇನ್ನು ಸಾಯುವುದೆ,
ಎಲ್ಲ ಸಾಯುವುದೆ” ಎಂದರು.
ಅಲ್ಲೆ ಒಂದು ಕೆರೆ ; ಬಂಡೆ ಕಡಿದು ಕರೆ,
ಅಲ್ಲಿ ಆಳಿನಡಿ ಸುಳಿಯದು.
ಹರಿದು, ಆಶೆತೊರೆದೊಂದೆ ಹಾರಿನಲಿ
ನೆರೆಯುಳುವರು ಹಾರಿ ಮುಳುಗಿದರು,
ಮರಳಿ ಕಣ್ಣಿನಲಿ ಬೀಳರು.
ತಾಳು ಕಂಬನಿಯ, ತುಂಬು ಕಂಬನಿಯ,
ಚೋಳಕನ್ನೆಯರ ಭಂಗಕೆ.

ಕೆರೆಯ ನೀರುರುಳಿ ಹರಿವ ಕಾಲುಹೊಳೆ
ಕೊರಕಲಲ್ಲಿ ಸುಳಿದಾಡುತ,
ಗರುಕೆಕಲ್ಲ ಬಳಿ, ಹೊರಳಿ ನರಳುವುದು,
ಮೆರೆವ ಕನ್ನೆಯರ ನೆನೆಯುತ.
ಏಳು ದಿಬ್ಬಗಳು, ಹಸುರುಹೊದಿಕೆಯಲಿ,
ಆಳದಿಂದ ನೆಗೆದೆದ್ದವು.
ನೊಂದು ಮರುಕದಲಿ ನಾಗಕನ್ನೆಯರು
ತಂದು ಕನ್ನೆಯರನಲ್ಲಿ ಹೂಳಿಹರು.
ಎಂದು ಹೇಳುವರು ತೊರೆಯರು.
ತಾಳು ಕಂಬನಿಯ, ತುಂಬು ಕಂಬನಿಯ,
ಜೋಳಕನ್ನೆಯರ ಭಂಗಕೆ.
*****
WORDSWORTH : The Seven Sisters

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...