Home / ಕವನ / ಕವಿತೆ / ಗಂಟೆ ಹತ್ತಾಯಿತು

ಗಂಟೆ ಹತ್ತಾಯಿತು

ಗಡಿಯಾರದಲಿ ಗಂಟೆ ಹತ್ತಾಯಿತು!
ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ
ಕೈಯ ಕುಲುಕಿಸಿ ಕಾಲ ಗೆಲುವಾಯಿತು;
ಕುಳಿತಿರುವ ಕೋಣೆಯಲಿ ಕಂದೀಲ ದೀಪವದು
ಕುರುಡು ಕುರುಡಾಗೆನಿತೊ ಉರಿಯುತ್ತಿದೆ.
ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ
ನೋಡಬೇಕೆಂಬಾಸೆ ಬೆಳೆಯುತ್ತಿದೆ.
ಆದರೂ ಮೈತುಂಬ ಆಲಸ್ಯ ಇಳಿದಿಹುದು
ಕೈಯ ಚಾಚಲು ಮನಸು ಬರದಾಗಿದೆ;
ಪೆನ್ನಿನಲಿ ಮಸಿಯಿದ್ದರೂನೂ ಒಂದಕ್ಷರವು
ಪೂರ್ಣ ಮೂಡದೆ ಬರೆಹ ಮುನ್ನಡೆದಿದೆ.
ಈ ಹಾಳು ಕಂದೀಲು ನಿಬ್ಬು ಕೆಟ್ಟಿಹ ಪೆನ್ನು
ದಿನದಿನದ ಬಾಳಿನಲಿ ಒಂದಾಗಿವೆ;
ಬಂದ ಬಾಳನ್ನೆನಿತೊ ನೂಕಬೇಕೆನುವಂತೆ
ಭುಜಕೆ ಭುಜವನ್ನಿತ್ತು ನಿಂದಾಗಿವೆ.
ಅಡುಗೆ ಮನೆಯಲಿ ಅವಳು ಹೂಂ….ಅವಳೆ ನನ್ನವಳು
ಹೊಸ ಹೆಂಡತಿ!
ಗುಣುಗಣಿಸಿ ಹಾಡುವಳು ಜಾನಪದ ಕವಯಿತ್ರಿ
ಗೌರಿ-ಗರತಿ.
ಮೆಲ್ಲ ಮೆಲ್ಲನೆ ಅವಳು ಬಂದರೀಗೇನು ಗತಿ
ಈ ಬರಹ ಇಷ್ಟಕ್ಕೆ ನಿಲ್ಲಬಹುದು;
ಗಡಿಯಾರ ಟಕಟಕಿಸಿದಂತೆ ಮನ ಟುಕುಟುಕಿಸಿ
ಬಂದರೂ ಅವಳೇನು ಮಾಡಬಹುದು?
ಎಂಬ ನಿರ್ಧಾರದಲಿ ಪೆನ್ನು ಮುಂದೋಡಿತ್ತು.
ಯಾರ ಪರವೆಯು ಅದಕೆ ಇಲ್ಲದಾಯ್ತು.
ಆದರೇನೊಂದು ಚಣ ಕಳೆದುದಾಯಿತೊ ಏನೊ
ಬಾಗಿಲಲಿ ಕೈಬಳೆಯ ಮಧುರ ನಾದ!
ರೋಮ ರೋಮಗಳೆಲ್ಲ ಕಿವಿಯಾಗಿ ಕಣ್ಣಾಗಿ
ಅವಳ ಬರುವಿಕೆಯನ್ನು ಪ್ರತಿರೂಪಿಸಿ;
ರೈಲು ನಿಲ್ದಾಣದಲ್ಲಿ ಗಾಡಿ ಬರುತಿರುವಾಗ
ಸೂಚನೆಯ ಗಂಟೆಯೊಲು ಢಣ್… ಢಣಣಿಸಿ!
ಹೊರಳಿ ನೋಡಿತು ಮನಸು……..
ಮಲಗಿರುವ ನನ್ನವಳಿಗೇನೊ ಕನಸು
ಹುಣ್ಣಿಮೆಯ ಚಂದ್ರನಿಗು ಇಲ್ಲವೇ ಸೌಂದರ್ಯ
ಹಣೆಯ ಕುಂಕುಮ ಚಂದ್ರನಂತೆ ನೋಡು:
ಹೊಳೆವ ಗಾರುಡಿಗಣ್ಣು ಮುದ್ದಾದ ಮುಂಗುರುಳು
ಮನನ ಮೋಹಿಸುತ್ತಿರುವ ಎದೆಗಳೆರಡು.
ಮಗ್ಗುಲಲಿ ನೀಳಜಡೆ-ಮೈಸೋಂಕಿ ಮೈಮರೆತು
ತಳಕು ಹಾಕಿರುವೆರಡು ಕರಿನಾಗರ;
ನಿರ್ಧಾರ ಕರಕರಗಿ ಹರಿಯತೊಡಗಿತು ಚಿತ್ತ
ಮಧುವನದ ನಾಡಿನಲ್ಲಿ ಸ್ನೇಹಪೂರ.
ಕಣ್ಣ ಮಿಟಕಿಸಿ ಕುರುಡು ದೀಪವಾರಿತು ಪಾಪ
ಪೆನ್ನು ಉರುಳಿತು ಹೊರಳಿ ಮೂರು ಸುತ್ತು
ಕಾಗದದ ಮೇಲೆಲ್ಲ ಚಿತ್ತಪಟ್ಟು
ಡೊಂಬರಾಟದ ಗತ್ತು ಅದಕೆ ಗೊತ್ತು!
ಬಾಯ್-ತುಂಬ ಆಕಳಿಸಿ ಕೊನೆಯ ಪ್ರಾರ್ಥನೆ ಸಲ್ಲಿಸಿ
ದೇಹ ಹಾಸಿಗೆ ಹುಡುಕಿ ಹೊರಳಾಡಿತು;
ಬಂದಿರುವ ಆಲಸ್ಯ ಗಾಢ ಸಮ್ಮಿಲನದಲಿ
ಕತ್ತಲೆಯ ಮಸಿಯಲ್ಲಿ ಮರೆಯಾಯಿತು.
*****
Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...