Home / ಕವನ / ಕವಿತೆ / ಗಂಟೆ ಹತ್ತಾಯಿತು

ಗಂಟೆ ಹತ್ತಾಯಿತು

ಗಡಿಯಾರದಲಿ ಗಂಟೆ ಹತ್ತಾಯಿತು!
ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ
ಕೈಯ ಕುಲುಕಿಸಿ ಕಾಲ ಗೆಲುವಾಯಿತು;
ಕುಳಿತಿರುವ ಕೋಣೆಯಲಿ ಕಂದೀಲ ದೀಪವದು
ಕುರುಡು ಕುರುಡಾಗೆನಿತೊ ಉರಿಯುತ್ತಿದೆ.
ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ
ನೋಡಬೇಕೆಂಬಾಸೆ ಬೆಳೆಯುತ್ತಿದೆ.
ಆದರೂ ಮೈತುಂಬ ಆಲಸ್ಯ ಇಳಿದಿಹುದು
ಕೈಯ ಚಾಚಲು ಮನಸು ಬರದಾಗಿದೆ;
ಪೆನ್ನಿನಲಿ ಮಸಿಯಿದ್ದರೂನೂ ಒಂದಕ್ಷರವು
ಪೂರ್ಣ ಮೂಡದೆ ಬರೆಹ ಮುನ್ನಡೆದಿದೆ.
ಈ ಹಾಳು ಕಂದೀಲು ನಿಬ್ಬು ಕೆಟ್ಟಿಹ ಪೆನ್ನು
ದಿನದಿನದ ಬಾಳಿನಲಿ ಒಂದಾಗಿವೆ;
ಬಂದ ಬಾಳನ್ನೆನಿತೊ ನೂಕಬೇಕೆನುವಂತೆ
ಭುಜಕೆ ಭುಜವನ್ನಿತ್ತು ನಿಂದಾಗಿವೆ.
ಅಡುಗೆ ಮನೆಯಲಿ ಅವಳು ಹೂಂ….ಅವಳೆ ನನ್ನವಳು
ಹೊಸ ಹೆಂಡತಿ!
ಗುಣುಗಣಿಸಿ ಹಾಡುವಳು ಜಾನಪದ ಕವಯಿತ್ರಿ
ಗೌರಿ-ಗರತಿ.
ಮೆಲ್ಲ ಮೆಲ್ಲನೆ ಅವಳು ಬಂದರೀಗೇನು ಗತಿ
ಈ ಬರಹ ಇಷ್ಟಕ್ಕೆ ನಿಲ್ಲಬಹುದು;
ಗಡಿಯಾರ ಟಕಟಕಿಸಿದಂತೆ ಮನ ಟುಕುಟುಕಿಸಿ
ಬಂದರೂ ಅವಳೇನು ಮಾಡಬಹುದು?
ಎಂಬ ನಿರ್ಧಾರದಲಿ ಪೆನ್ನು ಮುಂದೋಡಿತ್ತು.
ಯಾರ ಪರವೆಯು ಅದಕೆ ಇಲ್ಲದಾಯ್ತು.
ಆದರೇನೊಂದು ಚಣ ಕಳೆದುದಾಯಿತೊ ಏನೊ
ಬಾಗಿಲಲಿ ಕೈಬಳೆಯ ಮಧುರ ನಾದ!
ರೋಮ ರೋಮಗಳೆಲ್ಲ ಕಿವಿಯಾಗಿ ಕಣ್ಣಾಗಿ
ಅವಳ ಬರುವಿಕೆಯನ್ನು ಪ್ರತಿರೂಪಿಸಿ;
ರೈಲು ನಿಲ್ದಾಣದಲ್ಲಿ ಗಾಡಿ ಬರುತಿರುವಾಗ
ಸೂಚನೆಯ ಗಂಟೆಯೊಲು ಢಣ್… ಢಣಣಿಸಿ!
ಹೊರಳಿ ನೋಡಿತು ಮನಸು……..
ಮಲಗಿರುವ ನನ್ನವಳಿಗೇನೊ ಕನಸು
ಹುಣ್ಣಿಮೆಯ ಚಂದ್ರನಿಗು ಇಲ್ಲವೇ ಸೌಂದರ್ಯ
ಹಣೆಯ ಕುಂಕುಮ ಚಂದ್ರನಂತೆ ನೋಡು:
ಹೊಳೆವ ಗಾರುಡಿಗಣ್ಣು ಮುದ್ದಾದ ಮುಂಗುರುಳು
ಮನನ ಮೋಹಿಸುತ್ತಿರುವ ಎದೆಗಳೆರಡು.
ಮಗ್ಗುಲಲಿ ನೀಳಜಡೆ-ಮೈಸೋಂಕಿ ಮೈಮರೆತು
ತಳಕು ಹಾಕಿರುವೆರಡು ಕರಿನಾಗರ;
ನಿರ್ಧಾರ ಕರಕರಗಿ ಹರಿಯತೊಡಗಿತು ಚಿತ್ತ
ಮಧುವನದ ನಾಡಿನಲ್ಲಿ ಸ್ನೇಹಪೂರ.
ಕಣ್ಣ ಮಿಟಕಿಸಿ ಕುರುಡು ದೀಪವಾರಿತು ಪಾಪ
ಪೆನ್ನು ಉರುಳಿತು ಹೊರಳಿ ಮೂರು ಸುತ್ತು
ಕಾಗದದ ಮೇಲೆಲ್ಲ ಚಿತ್ತಪಟ್ಟು
ಡೊಂಬರಾಟದ ಗತ್ತು ಅದಕೆ ಗೊತ್ತು!
ಬಾಯ್-ತುಂಬ ಆಕಳಿಸಿ ಕೊನೆಯ ಪ್ರಾರ್ಥನೆ ಸಲ್ಲಿಸಿ
ದೇಹ ಹಾಸಿಗೆ ಹುಡುಕಿ ಹೊರಳಾಡಿತು;
ಬಂದಿರುವ ಆಲಸ್ಯ ಗಾಢ ಸಮ್ಮಿಲನದಲಿ
ಕತ್ತಲೆಯ ಮಸಿಯಲ್ಲಿ ಮರೆಯಾಯಿತು.
*****
Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...