ಇಂದಾದರು ಮುಂದಾದರು ಎಂದಾದರು ಇರಲಿ
ಮನೆ ಮನೆಯಲಿ ನಗೆಯರಳಲಿ ಸೌಭಾಗ್ಯವೆ ಬರಲಿ.
ಹಳೆ ಬಾಳಿನ ಕೊಳೆ ಹೋಗಲಿ ಹಸನಾಗಲಿ ಬಾಳು
ಮೈ ಮನಸೂ ಹೊಸದಾಗಲಿ ಕಹಿ ದುಃಖವ ಹೂಳು.
ಮನ ಮೂಡಲ ಭೂರಂಗದಿ ಉಷೆ ಬರುವಳೆ ಕುಣಿದು
ಕಣ್ಣ೦ಚಿನ ಸಿರಿ ಮಿಂಚಿನ ಎರಡಾರತಿ ಹಿಡಿದು.
ಮಾಯಾಂಗನೆ ಮರೆಯಾಗಲಿ ಅಮರಾಂಗನೆ ಬರಲಿ
ಸುಖ ಸ್ಪರ್ಶದಿ ಮೈ ಮರೆಯಿಸಿ ಮಧುರಸವನೆ ತರಲಿ.
ಕೈಕಂಕಣ ಮೈ ಅರಿಷಿಣ ಸಿರಿ ಕುಂಕುಮ ಹಣೆಗೆ
ಮಾಂಗಲ್ಯದ ಕರಿಮಣಿ ಸರ ಸೊಬಗೀಯಲಿ ಉಷೆಗೆ.
ಬಾನ್-ಹಂದರ ರವಿ ಚಂದಿರ ನಕ್ಷತ್ರದ ಸೇಸೆ
ಶಿವ-ಪಾರ್ವತಿ ಶ್ರೀಭಾರತಿ ಮೈದೋರುವ ಆಸೆ.
ಕರಿ ಕುರುಳಲಿ ಘಮಘಮಿಸಲಿ ಹೂಮಾಲೆಯ ಸುರುಳಿ
ಜೇನಿರುಳಿನ ಸಂಗೀತಕೆ ಸವಿಗೊರಲಿನ ಮುರಲಿ.
ಮೈಕೈಗಳ ಆಲಿಂಗನ ತುಟಿ ತುಟಿಗಳ ಕೂಟ
ಕಣ್-ಮನಗಳು ಜೋಂಪಿಸಲಿ-ಅಧರಾಮೃತದೂಟ.
ಎರಡೆದೆಗಳ ಹಿರಿಯಾಸೆಗೆ ಕವಿ ಹಾಡುವ ಪಕ್ಷಿ
ಶಿವ-ಮಂಗಲ ಸಮ್ಮಿಲನಕೆ ಈ ದಿನವೂ ಸಾಕ್ಷಿ.
*****

















