Home / ಕವನ / ಅನುವಾದ / ಕಲ್ಕತ್ತಾ

ಕಲ್ಕತ್ತಾ

ಮೂಲ: ತಾರಾಪದ ರಾಯ್

ಹೇಳು ಕಲ್ಕತ್ತಾ,
ನನ್ನ ಬಳಿಯಿದ್ದ ಹಸಿರಂಗಿ, ಪಾಸ್‌ ಪೋರ್ಟುಗಳ
ನೆನಪಿದೆಯೆ ನಿನಗೆ?
ಪೂರ್ವ ಪಾಕಿಸ್ತಾನದಿಂದ ಓಡುತ್ತ ಬಂದ ರೈಲಿಂದ ಇಳಿದು
ಸಿಯಾಲ್ದಾ ನಿಲ್ದಾಣದ ಹೆಬ್ಬಾಗಿಲನ್ನು ದಾಟಿ ಬಂದೆ ಸುರಿಮಳೆಯಲ್ಲಿ.
ನನ್ನ ಜೀವನದಲ್ಲೆ ಮೊದಲ ಸಲ ಕಂಡೆ
ಷೂ ಪಾಲಿಷ್ ಮಾಡುವ ಹುಡುಗನನ್ನು;
ನೋಡಿ ರೋಮಾಂಚಗೊಂಡೆ,
ನನ್ನ ಕನಸಿನ ನಗರ ಕಂಡುಕೊಂಡೆ.
ಮೊದಲ ಬಾರಿಗೆ ಒಂದು ಟ್ರಾಮ್‌ಕಾರು ಕಂಡದ್ದು ನಿನ್ನಲ್ಲೆ,
ಮೊದಲ ದರ್ಜೆಯ ಸೀಟು ಕೂಡ ಇತ್ತು ಅದಕ್ಕೆ.
ಮೊದಲ ದರ್ಜೆಯೆ ನೀನೂ ಕಲ್ಕತ್ತಾ.
ಒಂದೊಂದು ಮನೆಯನ್ನೂ ಮುಗಿಲು ಕವಿದಿತ್ತು
ಒಂದೊಂದು ಮನೆಗೂ ನಿಗೂಢ ಕಿಟಕಿ ಇತ್ತು
ಆಟವಾಡುತ್ತಿತ್ತು ಅವುಗಳ ಮುಖದ ಮೇಲೆ
ಮಬ್ಬುಗತ್ತಲೆ ಬೆಳಕು.

ಹಸಿರು ಷರಟನ್ನು
ಹರಿದ ಬೂಟನ್ನು
ತೊಟ್ಟು ತಿರುಗಿದೆ ಇಡೀ ಕಲ್ಕತ್ತೆಯನ್ನು.
ತಿರುಕರನ್ನು ಮತ್ತು ಹುಚ್ಚರನ್ನು
ಹುಚ್ಚಾಗಿ ಕುಡಿದು ಅಮಲೇರಿದವರನ್ನು
ದಿಕ್ಕಿಂದ ದಿಕ್ಕಿಗೆ ಕಾಮನಬಿಲ್ಲಿನ ಹಾಗೆ
ಬಾಗಿ ಸಾಗಿದ್ದ ಮೆರವಣಿಗೆ ಸಾಲನ್ನು
ಜನ ಮುಸುರುತ್ತಿದ್ದ ಚಾ ಅಂಗಡಿಗಳನ್ನು
ದಾರಿ ಮೂಲೆಗಳಲ್ಲಿ ಹರಟೆಕೊಚ್ಚುತ್ತಿದ್ದ
ಸೋಮಾರಿ ಗುಂಪನ್ನು.

ಮಧ್ಯಾಹ್ನಕ್ಕೆ ಮುಂಚೆ ಗಾಳಿ ಬಡಿತಕ್ಕೆ ಕಳಚಿ
ಚೆಲ್ಲಾಪಿಲ್ಲಿ ಬಿದ್ದ ತರಗೆಲೆಗಳನ್ನು
ಬಯಲ ಬಿಸಿಲಲ್ಲಿ ಚಾಚಿ ಬೆಳೆದಿದ್ದರೂ
ಯಾರನ್ನೂ ಎಲ್ಲಿಗೂ ಒಯ್ದು ಮುಟ್ಟಿಸದ
ಆನೆದಂತದ ಹಾಗೆ ಬಾಗಿ ಸಾಗಿದ್ದ ಟ್ರಾಮ್ ಕಾರು ಹಳಿಯನ್ನು-
ಕಂಡೆ ನಿನ್ನನ್ನು.

ಏಕೋ ಒಮ್ಮೊಮ್ಮೆ ಅನ್ನಿಸುವುದು ನಾ ನಿನ್ನ
ತೆಕ್ಕೆಯೊಳಗಿಲ್ಲವೆಂದು.
ನನ್ನ ಆ ನಗರ ಎಲ್ಲಿ ಹೋಯಿತು ಈಗ?
ಹಿಂದೊಮ್ಮೆ ಎರಡು ಲೈಟ್‌ ಕಂಬಗಳ ನಡುವೆ
ಪೆನಾಲ್ಟಿ ಕಿಕ್ ಸಿಕ್ಕ ಫುಟ್‌ಬಾಲ್ ಆಟಗಾರ
ಚಂದ್ರನನ್ನ ನಡು ಅತರಿಕ್ಷಕ್ಕೆ ಒದ್ದದ್ದು,
ಗ್ಯಾಲರಿಗಳನ್ನೇರಿ ಕುಳಿತ ಜನ ಒಟ್ಟಾಗಿ
‘ಗೋಲ್’ ಎಂದು ಕಿರುಚಿದ್ದು ಎಲ್ಲ ನೆನಪೀಗ.

ಕಳೆದ ಇಪ್ಪತ್ತು ವರುಷ ನಮ್ಮ ನಡುವೆ ಏಕೋ
ಹೊಂದಿ ಬರಲಿಲ್ಲ. ನನ್ನ
ಮುರಿದ ಕನಸುಗಳು ಹರಿದೆಸೆದ ಕವನಗಳು
ಚಿಂದಿ ಆಯುವ ಜನರ ಚೀಲದಲ್ಲಿದ್ದಾವೆ.
ಇಪ್ಪತ್ತು ವರುಷವಿಡೀ ಅವನ್ನು ಆಯ್ದಿದ್ದಾರೆ.
ತೂಕಕ್ಕೆ ಹಾಕಿ, ಬೆಲೆಕಟ್ಟಿ ಕನಸುಗಳನ್ನು
ಗೇಲಿ ಮಾಡಿದ್ದಾರೆ.
ಒಂದೇ ರಹಸ್ಯ ಕಿಟಕಿ ನನಗಾಗಿ ಎಂದೂ
ಇಲ್ಲಿ ತೆರೆದದ್ದಿಲ್ಲ.
ನನ್ನ ಛಾವಣಿ ಬಿಟ್ಟು ಮೇಲೇರಿ ಮುಗಿಲುಗಳ ಕಡೆಗೆ ಸಾಗಿದ್ದಿಲ್ಲ.
ಅಂದಮೇಲೆ ನನ್ನ ಷರಟಿನ ಬಣ್ಣವನ್ನು
ಬೂಟಿನ ಅಳತೆಯನ್ನು
ಬದಲಿಸಲು ನನಗೆ ಕಾರಣವೆ ಕಂಡಿಲ್ಲ.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...