Home / ಕವನ / ಕವಿತೆ / ಕಾಸರಗೋಡು

ಕಾಸರಗೋಡು

ಎಷ್ಟೋ ನಾಡುಗಳಿವೆ ಎಷ್ಟೋ ಕಾಡುಗಳಿವೆ
ಕಾಸರಗೋಡು ಒಂದೇ
ಅದು ನಾ ಹುಟ್ಟಿ ಬೆಳೆದ ನಾಡು

ಕಾಶ್ಮೀರವಲ್ಲ ಕುಲು ಮನಾಲಿಯಲ್ಲ
ನೀಲಗಿರಿ ಊಟಿಯಲ್ಲ
ಆದರೂ ಅದಕಿರುವುದು
ಅದರದೇ ಆದ ಚಂದ

ಪಡುಗಡಲ ತಡಿಯ
ಒಂದು ತುಣುಕು
ಸುಂದರ ಚಂದ್ರಗಿರಿ ನದಿಪಕ್ಕ
ಚಂದ್ರಖಂಡದಂತದರ ಸೊಬಗು

ಭೋರ್‍ಗರೆವ ಸಮುದ್ರ ಪಡುವಲಲಿ
ಆಕಾಶಚುಂಬಿ ಸಹ್ಯಾದ್ರಿ ಬೆಟ್ಟ ಮೂಡಲಲಿ
ಮಧ್ಯೆ ಹಾಸಿ ಮಲಗಿದೆ ನಮ್ಮ
ಪ್ರೀತಿಯ ಕಾಸರಗೋಡು

ಕನ್ನಡ ತುಳು ಮಲೆಯಾಳ
ಕೊಂಕಣಿ ಮರಾಠಿ ಉರ್‍ದು
ಹಲವು ಹಕ್ಕಿಗಳ ಕಲರವದಂತೆ
ಅದೆ ಒಂದು ಕೇಳ್ವ ಸೊಗಸು

ದೇವಾಲಯ ಇಗರ್‍ಜಿ ಮಸೀದಿ
ಅಲ್ಲಲ್ಲಿ ಜಾತ್ರೆ ತೇರು ಬೆಡಿ ಸಂತೆ ಭೂತಕೋಲ
ಚೆಂಡೆ ಮದ್ದಳೆ ಯಕ್ಷಗಾನ ಬಯಲಾಟ
ಲೋಕದೊಳಗೆ ಇದೊಂದು ಲೋಕ

ಮಾವು ಇಮ್ಮಾವು ಹಲಸು
ತೇಗ ಬೀಟೆ ಶ್ರೀಗಂಧ
ಗೇರು ಬೀಜ ಕಾಳು ಮೆಣಸು
ಹುಲಿ ಹಂದಿ ಕಾಡು ಗೆಣಸು

ಕಂಗು ತಂಗು ಬಾಳೆ ಹಸಿರು
ಭತ್ತ ಕಬ್ಬು ಗದ್ದೆ ಬಯಲು
ಬೆಟ್ಟ ಕಣಿವೆ ಹಳ್ಳಕೊಳ್ಳಗಳ
ನೋಟ ಸಾಲುಸಾಲು

ಅದು ನೋಡು ಬೆರ್‍ಚಪ್ಪ
ಇದು ನೋಡು ಬೈಪಣೆ
ಇದು ತೊಂಡೆ ಚಪ್ಪರ ಬೆಂಡೆ ಬದನೆ ಸಾಲು
ಅಲಸಂಡೆ ಕುಂಬಳ ಸಿಹಿಗುಂಬಳ
ಸೊರಕಾಯಿ ಸೌತೆ
ಅಲ್ಲಲ್ಲಿ ಸಿಹಿನೀರ ಒರತೆ
ಇನ್ನೇನು ಯಾವುದಕೆ ಕೊರತೆ

ನೋಡುನೋಡು ಪನ್ನೀರು
ನೋಡು ಮಲ್ಲಿಗೆ ಸೇವಂತಿಗೆ
ನೋಡು ಎರವಂತಿಗೆ ನಿತ್ಯಪುಷ್ಪ
ನೋಡು ಕೇದಿಗೆ ರತ್ನಕಂಟಿಕೆ ಇದು ತುಲಸಿ
ನೋಡಿದೋ ತುಂಬಿ ಜೇನ್ನೊಣ ಜೇನು
ತೊಡವೆ ಮಂಜೆಟ್ಟಿ ಕೋಲುಜೇನು ಹೆಜ್ಜೇನು
ಇದೊ ಕಾಗೆ ಕೋಗಿಲೆ ಗಿಳಿ ಗುಬ್ಬಿ ಬಜಕರೆ ಹಕ್ಕಿ
ಇದಿಗೊ ಮನೆಬಾಗಿಲಿಗೆ ಸಿಹಿನೀರ ತರುವ ಅಬ್ಬಿ

ಕುಂಬಳೆ ಮಂಜೇಶ್ವರ ಮಂಗಲ್ಪಾಡಿ
ಕಾರಡ್ಕ ಬದಿಯಡ್ಕ ಬೋವಿಕಾನ
ಪೆರ್‍ಲ ಮುಳ್ಳರ್‍ಯ ಸುಳ್ಯ ಮಧೂರು
ಸೂರಂಬೈಲು
ಏನೆಂಥ ಹೆಸರುಗಳ ಊರು

ಓ ಆತ ಪಕೀರ ಈತ ಕೊರಗ ತುಕ್ರ ತನಿಯ
ಅವ ಮಾಲಿಂಗು ಈಕೆ ಕೊರಪಾಳು
ಇನ್ನಿವಳು ಬೆಳಚ್ಚಿ
ನನ್ನನೆತ್ತಿದವರು ಸೊಂಟದಲಿ ಹೆಗಲಲ್ಲಿ
ನೆತ್ತಿಯಲಿ
ನನ್ನನಾಡಿಸಿದವರು ಪ್ರೀತಿ ನೀಡಿದವರು
ಮಾತು ಕಲಿಸಿದವರು
ಈಗೆಲ್ಲಿ ಅವರು ಓ ಈಗೆಲ್ಲಿ ಅವರು

ಪಂಪನಿಗೆ ಬನವಾಸಿ ನಾನೊ ಅನಿವಾಸಿ
ಪಂಪನಂತೆಯೆ ನಾನು ವ್ಯಸನಿ
ಆರಂಕುಶಮಿಟ್ಟೊಡಂ
ನೆನೆವುದೆನ್ನ ಮನ ನನ್ನ ಹುಟ್ಟೂರ

ತೆಂಕಣಗಾಳಿಯಲಂಪು
ನಮ್ಮವರ ಮಾತಿನಿಂಪು
ನೆನಪುಗಳು ಕರೆಯುವುವು
ಮೇಘಗಳಂತೆ ಮಳೆಯಂತೆ
ದಿನದಿನವು ವರ್‍ಷಧಾರೆ

ಹರ್‍ಷವನಲಾರೆ ದುಃಖವನಲಾರೆ
ಹೆಸರಿಲ್ಲದೊಂದು ಭಾವ
ನನ್ನ ಮನಃ ಪಟಲದಲಿ ತುಂಬಿದೆ ಸದಾ
ನನ್ನೆಚ್ಚರದಂತೆ ನನ್ನ ಮನಃ ಸಾಕ್ಷಿಯಂತೆ

ಅದು ಮಿಡಿವ ತನಕ
ನನಗೆ ಭಯವಿಲ್ಲ
ಬೇಸರವಿಲ್ಲ
ಸ್ವರ್‍ಗವೋ ನರಕವೋ
ಆವೂರೊ ಈವೂರೊ
ಅದು ಮಿಡಿವ ತನಕ
ನಾನತೀತ ಎಂದೆಂದಿಗೂ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...