Home / ಕವನ / ಕವಿತೆ / ಶಾಂವಕ್ಕಿ ಕುಟ್ಟಂದ್ರ

ಶಾಂವಕ್ಕಿ ಕುಟ್ಟಂದ್ರ

ಶಾಂವಽಕ್ಕಿ ಕುಟ್ಟಂದ್ರ ಶರಽಗ್ಹಾಸಿ ಮಲಗ್ಯಾಳ|
ಎಬಸಣ್ಣ ನಿನ್ನ ಮಡದೀನ| ಸೂವಯ್ಯಾ ||೧||

ಮಡದೀನ ಎಬಸಿದರ ಅರಸನಿದ್ದಿ ನಾದಾನ|
ಎರಡೊಬ್ಬಿ ಮಾಡಿ ಥಳಸವ್ವಾ| ಸೂವಯ್ಯಾ ||೨||

ಎರಡೊಽಬ್ಬಿ ಮಾಡಿದರ ಕರಡಕ್ಕಿನಾದಾವ|
ಕರಡಕ್ಕಿ ಜ್ವಾಳ ನುರಿಯಽವ| ಸೂವಯ್ಯಾ ||೩||

ಕುಟ್ಟಿದರ ಕುಟ್ಟವ್ವಾ ಕಿಟಕೀಟ ಹಚಬ್ಯಾಡಾ|
ಬಂದ್ಹಾದಿ ಹಿಡಿದು ನಡಿ ತಂಗೀ| ಸೂವಯ್ಯಾ ||೪||

ಎತ್ತಾರೆ ತಾರಣ್ಣಾ ಮುಟ್ಟಾರೆ ಬಿಗಿಯಣ್ಣಾ|
ಹೊಂತೂಟ್ಲೆ ನನ್ನ ಖಳವಣ್ಣ| ಸೂವಯ್ಯಾ ||೫||

ಎತ್ತಽ ನಮ್ಮಲ್ಲಿಲ್ಲ ಮುಟ್ಟಽ ನಮ್ಮಲ್ಲಿಲ್ಲ|
ಬಂದಽ ದಾರಿ ಹಿಡಿದು ನಡಿ ತಂಗಿಽ| ಸೂವಯ್ಯಾ ||೬||

ತಂಗಿ ಹ್ವಾದ ಮರದೀನ ರಂಬೀಗಿ ಬ್ಯಾನಿ ಬಂದು|
ಮನಿಯಾನ ಮಕ್ಕಳಿಗಿ ಉರಿ ಛೆಳಿಯಽ| ಸೂವಯ್ಯಾ ||೭||

ಮನಿಯಾನ ಮಕ್ಕಳಿಗಿ ಉರಿ ಛೆಳೀ ಬಂದರ|
ದೇವಽರ ಕೇಳಾಕ ನಡದಾನಾಽ| ಸೂವಯ್ಯಾ ||೮||

ಕೇಳೂಸಿ ನೋಡಿದರ ದೇವರಿಲ್ಲ ದೀಡೆರಿಲ್ಲ|
ಮನಿಯಾನ ಹೆಣಮಗಳು ಉಸರಂದ| ಸೂವಯ್ಯಾ ||೯||

ಎತ್ತಾರೆ ತಗೊಂಡಾನಽ ಮುಟ್ಟಾರೆ ಬಿಗದಾನ|
ತಂಗ್ಹ್ವಾದ ದಾರಿ ಹಿಡಿದಾಽನ| ಸೂವಯ್ಯಾ ||೧೦||

ಎಂದಿಲ್ಲದಣ್ಣಯ್ಯಾ ಇಂದ್ಯಾಕ ಬಂದಾನ|
ಕುಂಡಽರ ಕೊಡರೆ ಮಣಿ ಚವಕಿ| ಸೂವಯ್ಯಾ ||೧೧||

ಕುಂಡಽರ ಬಂದಿಲ್ಲ ನಿಂದಽರ ಬಂದಿಲ್ಲ|
ಬರಬೇಕ ತಂಗಿ ಮದುವೀಗಿ| ಸೂವಯ್ಯಾ ||೧೨||

ಮಜ್ಜಿಗಿ ಮಾಡವರಿಲ್ಲ ಬೆಣ್ಣಿ ತೆಗೆಯುವರಿಲ್ಲ|
ಹ್ಯಾಂಗ ಬರಲೆಣ್ಣಾ ಮದವೀಗಿಽ| ಸೂವಯ್ಯಾ ||೧೩||

ಮಜ್ಜಿಗಿ ಮಾಡವರ ಕುಡತ ಬೆಣ್ಣಿ ತೆಗೆವರ ಕುಡತ|
ಬರಬೇಕ ತಂಗಿ ಮದವೀಗಿ| ಸೂವಯ್ಯಾ ||೧೪||

ಬ್ಯಾಸೀಗಿ ಬಿಸಲಣ್ಣ ಕೂಸೀನ ತಾಯಣ್ಣ|
ಹ್ಯಾಂಗ ಬರಲೆಣ್ಣ ಮದವೀಗಿಽ| ಸೂವಯ್ಯಾ ||೧೫||

ನಿನಗ ಪಲ್ಲಕಿ ಕುಡತ ಕೂಸಿಗಿ ಮೇಣೇ ಕುಡತ|
ಗಂಡಽಗ ಕುಡುತ ಮರಿಗುದರಿ| ಸೂವಯ್ಯಾ ||೧೬||

ಬಂದಽರ ಬರುವೇನೋ ಬಾಗಿಲ್ದಾಗ ನಿಂತೇನೊ|
ಬಾಲಾಗ ಧಾರಿ ಎರೆದೇನೋ| ಸೂವಯ್ಯಾ ||೧೭||

ಹತ್ತ ರೂಪಾಯಿ ಕೊಟ್ಟು ಸೀರೀಯ ತರಸೀದ|
ಉಟ್ಹೋಗ ತಂಗಿ ಜನದಾಗ| ಸೂವಯ್ಯಾ ||೧೮||

ಇಽವು ಸೀರಿ ಒಯ್ದು ಮಡದೀಗಿ ಉಡಸಣ್ಣಾ|
ಹಾಡ್ಯಾಳೊ ನಿನ್ನ ಹರಸ್ಯಾಳೋ| ಸೂವಯ್ಯಾ ||೧೯||

ಹಾಡಿಯಾಳೊ ನಿನ್ನಽ ಹರಸ್ಯಾಳೊ ನಾಲುರದಾಗ|
ಬಾ ಅಣ್ಣಽನಂದು ಕರದಾಳೋ| ಸೂವಯ್ಯಾ ||೨೦||

ಕಲ್ಲಬುರಗಿಗಿ ಹೋಗಿ ಕುಬ್ಬಽಸ ತಂದೀದ|
ತೊಟಗೋ ಬಾ ತಂಗಿ ಜನದಾಽಗಽ| ಸೂವಯ್ಯಾ ||೨೧||

ಅವು ಕುಬ್ಬಸನೊಯ್ದು ಮಡದೀಗಿ ತೊಡಿಸಣ್ಣ|
ಹಾಡ್ಯಾಳೊ ನಿನ್ನ ಹರಸ್ಯಾಳೋ| ಸೂವಯ್ಯಾ ||೨೨||

ಹಾಡಿಯಾಽಳ ನಿನ್ನ ಹರಸ್ಯಾಳ ನಾಲುರದಾಗ|
ಬಾರಣ್ಣನೆಂದು ಕರದಾಽಳಽ| ಸೂವಯ್ಯಾ ||೨೩||

ಪಂಡ್ರಾಪೂರಕ್ಹೋಗಿ ಕೂಕಮ ತಂದೀದ|
ಹಚಗೊ ಬಾ ತೆಂಗಿ ಸಬೆದಾಽಗಽ| ಸೂವಯ್ಯಾ ||೨೪||

ಅಽವು ಕೂಕುಮನೊಯ್ದು ಮಡದೀಗಿ ಹೆಚ್ಚಣ್ಣಾ|
ಹಾಡ್ಯಾಳೊ ನಿನ್ನ ಹೆರಸ್ಯಾಳೋ| ಸೂವಯ್ಯಾ ||೨೫||

ಹಾಡಿಯಾಽಳಽ ನಿನ್ನ ಹರಸ್ಯಾಳ ನಾಲುರದಾಗ|
ಬಾರಣ್ಣನೆಂದು ಕರದಾಳಽ| ಸೂವಯ್ಯಾ ||೨೬||

ನನ್ನಲ್ಲಿ ಹುಟ್ಟೀದಿ ನನ್ನಲ್ಲಿ ಬೆಳದೀದಿ|
ಇಟ್ಟ ಮಾತೆಲ್ಲಿ ಕಲತೆವ್ವಾಽ| ಸೂವಯ್ಯಾ ||೨೭||

ಅಡವ್ಯಾಗ ಹುಟ್ಟೀದ ಆಡವ್ಯಾಗ ಬೆಳದೀದ|
ಎಲಿಗೊಂದ ಮಾತ ಕಲತೀನಽ| ಸೂವಯ್ಯಾ ||೨೮||

ಹುಟ್ಟಿದ ಮಲ್ಲಿಗಿಗೀಡ ಹುಟ್ಟಿದಂಗ ಇರುದಿಲ್ಲ|
ದಿನಕೊಂದು ಪರಿಯ ಚಿಗವೂದಽ| ಸೂವಯ್ಯಾ ||೨೯||

ದಿನಽಕೊಂದು ಪರಿಯ ಚಿಗವೂ ಮಲ್ಲಿಗಿ ಹೊವ|
ಮತ್ತೊಬ್ಬ ಜಾಣ ಮುಡಿಯೋದಽ| ಸೂವಯ್ಯಾ ||೩೦||
*****
ಶಾಂವಕ್ಕಿ ಕುಟ್ಟಂದ್ರ

ಈ ಹಾಡಿನಲ್ಲಿ ನಾದುನಿಯು (ಗಂಡನ ತಂಗಿ) ಸೊಗಸಿನ ಸಂಸಾರಕ್ಕೆ ಹೇಗೆ ಮುಳುವಾಗುವಳೆಂಬುದು ತೋರಿಸಲ್ಪಟ್ಟಿದೆ. “ನಡಿಯುವ ಹೆಣ್ಣಿಗೆ ನಾದುನಿ ಮೂಲ” ಎಂಬ ಗಾದೆಯ ಮಾತಿಗೆ ಈ ಹಾಡು ತಕ್ಕ ದೃಷ್ಟಾಂತವಾಗಿದೆ. ಅವಳು ಅಣ್ಣನ ಅಂತಃಕರಣವನ್ನು ಹಿಂಡಿ ಹಿಪ್ಪೆಮಾಡಿ ಒಗೆತನ ಹರಿಸುವುದಕ್ಕೆ ಹೇಗೆ ಆಟ ಹೊಡುತ್ತಾಳೆಂಬುದನ್ನು ನಾವು ಇಲ್ಲಿ ಸ್ಪಷ್ಟವಾಗಿ ಕಂಡುಕೊಳ್ಳುವೆವು; ಈ ಹಾಡು ಒಂದು ಕಥೆಯಂತಿದೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದಪ್ರಯೋಗಗಳು:- ಶಾಂವಕ್ಕಿ=ಶಾಂವಿ ಎಂಬ ಒಂದು ತರದ ಧಾನ್ಯ. ಥಳಿಸು=ಅಕ್ಕೀ ಕುಟ್ಟು. ಕಿಟಕಿಟ=ಕರಕರೆ. ಹೊಂತೂಟ್ಲೆ-ಹೊತ್ತಿರುವುದರೊಳಗಾಗಿ (ಹೊತ್ತುಂಟಲೆ). ಇಟ್ಟು=ಇಷ್ಟು.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...