Home / ಲೇಖನ / ಇತರೆ / ಆಧುನಿಕ ಅಜವಿಲಾಪ

ಆಧುನಿಕ ಅಜವಿಲಾಪ

ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ ಬೋಧಾಮೃತದ ಶೆಲಿ ಬೀಳ್ತಿದ್ದಲ್ಲ. ಅಂತ “ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ. ಎಲ್ಲರಿಗೂ ಇಂದಿಲ್ಲ ನಾಳೆ ಸಾವಿದ್ದದ್ದೇ. ಇಂದು ನಿಮ್ಮ ಹೆಂಡತಿ ತೀರ ಕೊಂಡ್ಲು. ನಾಳೇ ನೀವು ಹೋಗುವವರು ವಿನಾಕಾರಣ ದುಃಖ ಮಾಡಿ ಉಪಯೋಗವೇನು?”

ವಾವಾ ಹೀಗೆ ಸಮಾಧಾನ ಹೇಳಲಿಕ್ಕೆ ನಮಗೂ ಬರತಿತ್ತು. ನಿಮ್ಮ ಮ್ಯಾಲೆ ಈ ಪ್ರಸಂಗ ಬಂದಿದ್ರ ಆ ಬೋಧದಿಂದ ನಿಮ್ಮ ಸಮಾಧಾನ ಆಗತಿತ್ತೇನು? ಇದೇ ನನ್ನ ಪ್ರಶ್ನೆ.

ಲಗ್ನ ಆದಮ್ಯಾಲೆ ಎಂಟು ಹತ್ತು ವರ್ಷಗಳಲ್ಲಿಯೇ ಆಕಿ ತೀರಿಕೂಂಡಿದ್ದರೆ ಇಷ್ಟು ಕೆಟ್ಟು ಅನಿಸ್ತಿದ್ದಿಲ್ಲ. ಈಗ ಲಗ್ನ ಆಗಿ ನಲವತ್ತು ವರ್‍ಷಾಯ್ತು. ಒಂದು ರೀತಿಯಿಂದ ಆಕಿ ಚಟ ಬಿದ್ಹಾಂಗೇ ಆಗಿತ್ತು. ಮೊನ್ನೆ ಮೊನ್ನೆ ಹತ್ತಿದ ನಾಸೀ ಪುಡೀ ಚೀಟಿ ಬಿಟ್ಬೇನಂದರ ಬಿಡವಲ್ತು. ಇದು ನಲವತ್ತು ವರ್ಷದ ಚಟ, ಬಿಡಬೇಕು ಹ್ಯಾಂಗ, ನನಗಂತೂ ಬೆಳಿಗ್ಗೆದ್ದ ಕೂಡಲೆ ಮಾರೀಮ್ಯಾಲ ಕೈಯಾಡಿಸಬೇಕು ಮತ್ತು ಆ ಕೈಗೆ ಮೂಗುಹತ್ತಬಾರದು ಹೀಗೆ ಸ್ಥಿತಿ ಯಾಗೇದ. ಇನ್ನು ಅವಳ ಜಾಗಾ ತುಂಬೂ ಬಗೀ ಹ್ಯಾಂಗ, ಏನೀ ಇರ್‍ಲಿ ಈಗ ಸಿಟ್ಟಿಗೆದ್ದರ ಬೈಬೇಕು ಯಾರ್‍ನ ಇದರದು ಸಹಿತ ಪಂಚೇತಿ ಬಂದದ.

ಅಡಗೀ ವಿಚಾರ ಮಾಡಿದ್ರ ನೋಡ್ರಿ ಖಾರ, ಹುಳಿ, ಉಪ್ಪು ಪದಾರ್ಥ ಹ್ಯಾಂಗಾದ್ಹಂಗ ನುಂಗಬೇಕು ಸುಮ್ಮನೆ. ಸ್ವಲ್ಪ ಇಳೀಸ್ವರದಲ್ಲಿ ತಪ್ಪು ತಗೀಲಿಕ್ಕೆ ಹೋದರ ಅಡಿಗಿಯವಳು ಸಿಟ್ಟಿಗೆದ್ದು ದುಮು ದುಮು ಉರಿಯಹತ್ತುವಳು. ಮತ್ತ ಅಡಿಗೀಯವಳ್ನ ತಗದು ಯಾವನಾದರೂ ಗಂಡಾಳು ಅಡಿಗೆಯವನ್ನ ಇಡಬೇಕಾದ್ರ ಅಡಿಗೀ ಮನೀ ಒಳಗ ಕಾಲಿಡಬೇಕಾದ್ರ ಮನಸ್ಸು ಹಿಂಜರಿತದ. ಒಲೀ ಹತ್ರ ಸುಟ್ಟ ಬೀಡಿಯರೇ ಕಾಣಸ್ತದ. ಅಥವಾ ಮುಂದು ಬಗ್ಗಿ ಉರಿಯುವ ಒಲಿಯೊಳಗ ತಂಬಾಕದ ಜೀಕಳಿ ಹೊಡೆಯುವ ಬಲ್ಲವಾಚಾರ್‍ಯರೇ ಕಾಣಸ್ತಾರ. ಅವಗ ಸಿಟ್ಟು ಮಾಡ್ತೀನಽ ನನಗಿಂತ ಮೊದಲೇ ಅವನು ನೋಟೀಸ ಕೊಟ್ಟು ಸ್ವತಂತ್ರ ಆಗತಾನ. ಆದರ ಇವಳ ವಿಷಯದಲ್ಲಿ ನೋಟೀಸಿನ ಅಂಜಿಕೆ ಯಾವಾಗಲೂ ಇದ್ದಿದ್ದಿಲ್ಲ ಎಷ್ಟೇ ಸಿಟ್ಟು ಮಾಡಿ ಕಾಲು ಅಪ್ಪಳಿಸುತ್ತಾ ನಾವು ಹೊರಬಿದ್ರೂ ನನ್ನ ಬದಲಿ ಮನೆಯಲ್ಲಿಯ ಹುಡುಗರ್‍ನ ಮಾತ್ರ ನಾಲ್ಕು ಪೆಟ್ಟು ಬಡಕೋತಿದ್ಲು. ಮತ್ತೆ ನಾನು ಸಾಯಂಕಾಲ ತಿರುಗಿ ಬರುವ ಕಾಲಕ್ಕೆ ನನಗೆ ಸೇರುವ ಖಾರಸಜ್ಗಿ ಮಾಡಿಟ್ಟಿರತಿದ್ಲು. ಹೇಳಿದರ ಈಗ ಸಹ ಯಾರಾದರೂ ಖಾರ ಸಜ್ಜಿಗಿ ಮಾಡ್ಯಾರು ಆದರೆ ಹೊಟ್ಟೀಯೊಳಗಿನ ಎಲ್ಲಾ ಸಿಟ್ಟ ನುಂಗಿ ನಗೆಮಾರಿಯಿಂದ ಸಜ್ಜಿಗೀ ತಿನ್ನಲಿಕ್ಕೆ ಕರೆಯುವರ್‍ಯಾರು?

ಖರೇ ಹೇಳ್ತಿನಿ ನಗಬ್ಯಾಡ್ರಿ ಕದಾಚಿತ್‌ ನಿನುಗೆ ಖೊಟ್ಟಿ ಅನಿಸೀತು? ಆದರ ನಿಜವಾಗಿ ಇಕೀಯಿಂದ ನನ್ನ ತಾಯಿಯದು ಸಹ ವಿಸ್ಮರಣೆಯಾಗಿತ್ತು. ನಾನು ಮನೆಯೊಳಗೆ ಇದ್ದೇನೆಂದರೆ ಕೇವಲ ಕಾಲೇಜದೂಳಗಿನ ಒಬ್ಬ ಚೈನೀಬಾಜೀ ವಿದ್ಯಾರ್ಥಿಯಂತೆಯೇ ಇದ್ದೆ. ಸಂತಿ ಇಲ್ಲ ಪ್ಯಾಟಿ ಇಲ್ಲ. ಏನ್‌ ತರೂದಿಲ್ಲ ಬರೂದಿಲ್ಲ. ಎಲ್ಲಾ ವ್ಯವಸ್ಥೆ ಆಯಾ ವ್ಯಾಳ್ಯಾಕ್ಕ ಬರೋ ಬರಿ ಆಗತ್ತಿತ್ತು. ನನಗೇನೂ ನೋಡಬೇಕಾಗ್ತಿದ್ದಿಲ್ಲ. ಈಗ ಪರಿಸ್ಥಿತಿ ಅದರ ಉಪರಾಟಿಯಾಗೇದ. ಬೆಳಿಗ್ಗೆದ್ದು ನೀರು ಕಾಸಲಿಕೆ ಹಂಡೇದ ಒಲಿಗೆ ಉರಿ ಹಚ್ಚುವದರಿಂದ ಹಾಲಿಗೆ ಹೆಪ್ಪು ಹಾಕ್ಯಾರೋ ಇಲ್ಲೋ ಈ ವರಗೆ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು. ಅಥವಾ ಆಗ್ಯಾವೋ ಇಲ್ಲೊ ನೋಡಬೇಕು. ಇದಕ್ಕೂ ಹೆಚ್ಚು ತ್ರಾಸಿನ ಸಂಸಾರ ಹುಡುಕಿದರ ಸಿಗಲಿಕ್ಕಿಲ್ಲ.

ಮನೆಯೊಳಗಿನ ಆಳುಗಳು ಸುದ್ದ ಇದೇ ಹಾಡು. ಇಕೀ ಇರುವವರೆಗೆ ಭಾಂಡೀ ತಿಕ್ಕುವ ಹೆಣ್ಮಗಳಿಂದ ಅಗಸರವರೆಗೆ ಎಲ್ಲರ ಕೆಲಸಗಳು ಚನ್ನಾಗಿ ಆಗ್ತಿದ್ದವು. ಈಗ ಈ ಮಕ್ಕಳಿಗೆ ಏನಾಗೇದೋ ಯಾರಿಗೊತ್ತು? ಭಾಂಡೇ ತಿಕ್ಕಾಕಿರೆ ಬಂದ್ರ ಕೈಕೆಳಗಿನ ಆಳು ಬರುವದಿಲ್ಲ. ಇವರಿಬ್ಬರೂ ಬಂದ್ರ ಎಮ್ಮೀ ಕಾಯುವವ ಬರುವದಿಲ್ಲ, ಇವರ ಮರಜೀ ಹಿಡಿದು ಜೀವ ಓಲ್ಯಾಗೇದ. ನಮ್ಮ ಸಂಸಾರ ಮೋಟರದ ಘಾಲಿ ದರುಸ್ತ ಅದ ಎಂದು ಹೇಳಲಿಕ್ಕೆ ಬರೂದಿಲ್ಲ. ಕನಿಷ್ಟಪಕ್ಷಕ್ಕ ಒಂದು ಘಾಲಿಯಾದರೂ ಘಾಳಿ ಹೋಗಿರತದ. ಈ ಬೇಜಾರಕ್ಕ ಬೇಸತ್ತು ಒಮ್ಮೊಮ್ಮೆ ಅತ್ಯಂತ ಭಯಂಕರ ವಿಚಾರಗಳು ಮನಸಿನಲ್ಲಿ ಬರುವವು. ಎಲ್ಲ್ಯಾದರೂ ಒಂದು ಧೊಡ್ಡ ಕಡವಂಡೀ ಮ್ಯಾಲಿಂದ ಹಾರಕೊಂಡು ಜೀವ ಕೊಡಬೇಕು ಅಥವಾ ಹಿಂದು ಮುಂದೆ ನೋಡದೆ ಭರದಿಂದ ಎರಡನೇ ಲಗ್ನಾ ಮಾಡಿಕೊಂಡು ಬಿಡಬೇಕು. ಹೀಗನಸ್ತದ- ಆದರ ಈ ವಯಸ್ಸಿನಲ್ಲಿ ಲಗ್ನಾ ಮಾಡಿಕೂಂಡರ ಒಂದು ಪಂಚೇತಿ. ಬಿಟ್ಟರ ಪಂಚೇತಿ. ಈ ಪೇಚಿನಲ್ಲಿ ಬಿದ್ದಿರುವೆನು. ಈ ಹೊಸ ಕುಟುಂಬದ ಚಟ ಬೀಳುವರ ಒಳಗಾಗಿ ಹೇಮಗರ್‍ಭ ಮಾತ್ರೆ ಅಗತ್ಯ ಬಿದ್ದಿರುತ್ತದೆ ಏನು ಮಾಡ್ಲೀರಿ! ಈಗ! ನನ್ನ ಅರ್‍ಧಾಂಗಿ ತೀರಿಕೊಂಡಿಲ್ಲ ಆದರೆ ಈಗ ನನಗೆ ಅರ್‍ಧಾಂಗವಾಯುವೇ ಆಗೇದ. ಇಂಥ ಸಮಯದಲ್ಲಿ ಅಳದೇ ಏನು? ಶಂಖವಾದ್ಯ ಮಾಡಲ್ಯಾ? ನೀವೇ ಹೇಳ್ರಿ.”
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...