Home / ಕವನ / ಕವಿತೆ / ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ತುರ್‍ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ

ಭೂಪಾಳಿ-ಝಂಪೆ

ನೋಡು ನೋಡೆಲೊ ದೇವ!
ಗತಿವಿಹೀನರ ಕಾವ,
ನೋಡು ನಿನ್ನಯ ರಾಜ್ಯದೊಳರಾಜಕತೆಯ!
ನೋಡು ಪಡುವಣ ದಿಕ್ಕ,
ನೋಡು ಇತಲಿಯ ಸೊಕ್ಕ,
ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧||

ಬಡ ತ್ರಿಪಲಿಯನ್ನಿತಲಿ
ಪಿಡಿದಿರುವುದೆನ್ನುತಲಿ
ಮೊರೆಯಿಡುವ ಕ್ರಂದನಕೆ ಕಿವಿಯ ಮುಚ್ಚಿಹೆಯಾ?
ತೋಳಿನಬ್ಬರವನ್ನು
ಜಗಕೆ ತೋರುವೆನೆನ್ನು
ತಿತಲಿ ಬೊಬ್ಬಿರಿವುದನು ತಾತ ಮೆಚ್ಚುವೆಯಾ? || ೨ ||

ನೆಲವ ನುಂಗುವ ಹಸಿವೆ
ತಡೆಯದರಚುತ ಕಸಿವೆ
ನೆನುತಿತಲಿ ತುಡುಕಿಹುದು ತ್ರಿಪಲಿಯನು ದೊರೆಯೆ!
ಹೆಬ್ಬುಲಿಯ ಕಂಗೆದುರು
ಸಿಕ್ಕಿದೆಳೆವುಲ್ಲೆಗರು
ವಂದದಿಂ ತಲ್ಲಣಿಪ ತ್ರಿಪಲಿಯನು ಪೊರೆಯೈ! || ೩ ||

ಮೊನ್ನೆವರಮೀ ಇತಲಿ
ಪರವಶತೆಯಿಂದಲಿಲಿ
ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯೆ,
ಇಂದು ಗರ್‍ಜಿಸುತಿಹುದೆ?
ಕಷ್ಟವಿನ್ನೊಂದಿಹುದೆ?
ಮಾನವರೊ? ದಾನವರೊ? ನಾನವರನರಿಯೆ! || ೪ ||

ಯಾವ ಇತಲಿಯ ವೀರ
ಮಾಝೀನಿ (Mazzini) ರಣಧೀರ
ಪರತಂತ್ರದಿಂದಲುದ್ಧರಿಸಿದನಿತಲಿಯಂ,
ಸಕಲರಿಗೆ ಸ್ವಾತಂತ್ರ್ಯ
ವೆಂದವನ ಗುರುಮಂತ್ರ
ವಿದನಿತಲಿ ಮರೆತಿಹುದೆ ಸೊಕ್ಕಡಂ ತಲೆಯಂ! || ೫ ||

ಪೂರ್‍ವದಿ ವಿಲಾಯಿತಿಯ
ಹೃದಯವಾವಳ ಗತಿಯ
ಭಾರದಿಂ ಜಗ್ಗಿದುದೊ ಆ ತುರುಕರವನೀ
ಅಬಲೆಯಾಗಿಹಳೀಗ,
ಇತಲಿಯವಳನು ಬೇಗ
ಸುಲಿಯುತಿದೆ- ಕದಕದಿಸು ತುರುಕರೆದೆ ಧಮನಿ! || ೬ ||

ಆಧುನಿಕ ರಾಜ್ಯಕಲೆ
ಯನ್ನರಿಯದವರ ಸಲೆ
ಬೆಂಬಲಿಸಿ ನೀನಿಂದು ನಡೆಸವರ ಪಡೆಯಾ!
ಅನುಕರಿಸಗತಿಕರನು,
ತೊರೆಯದಿರಪಥಿಕರನು,
ಸುಕ್ಕಿಸದಿರರ್‍ಧ ಚಂದ್ರ ಧ್ವಜವನೊಡೆಯಾ! || ೭ ||

ನವನಾಗರಿಕಳಲ್ಲ
ದೀ ತುರುಕಿಯಿರಸಲ್ಲ
ದೆಂದವಳ ರುಜೆಗೆ ನಾಗರವಿಷಮನೀಯೆ,
ಯಮವೈದ್ಯ ರೂಪಿಂದ
ನಟಸುವಿತಲಿಯ ಚಂದ-
ತ್ರಿಪಲಿಯನ್ನಪಹರಿಸಲಿದುವಲ್ತೆ ಮಾಯೆ? || ೮ ||

ಮುಸಲಮಾನರ ಧರ್‍ಮ
ಪಾಳೆಸಗುವೊಳ ಮರ್‍ಮ
ದಿಂದಿತಲಿ ಬಂದಿಹುದೆ ಕೊಳುಗುಳಕೆ ಮುಂದು?
ಪೈಗಂಬರನು (ಮಹಮ್ಮದ್) ನೀನೆ,
ಮರಿಯಾತ್ಮಜನು (ಯೇಸು) ನೀನೆ
ಎಂಬ ಸತ್ಯವನೀ ಜಗತ್ತರಿವುದೆಂದು? || ೯ ||

ಶತ್ರುವನು ಕೂರೆಂದು
ಯೇಸು ರೂಪದೊಳಂದು
ನೀನೊರೆದುದಕನರ್‍ಥವಾದಪುದೆ ಇಂದು?
ಅನಘರನು ಕಡಿಯೆಂದು,
ಗೆಳೆಯರನು ಬಡಿಯೆಂದು
ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು? || ೧೦ ||

ಧರ್‍ಮಕೆಡೆ ಬರಿದಾಯ್ತೆ?
ನೀತಿ ತೇಲುವುದಾಯ್ತೆ?
ನಿನ್ನ ತಿರೆಯೊಳಧರ್‍ಮಕಾದಪುದೆ ಗೆಲುಹು?
ಧರ್‍ಮವುಳ್ಳೆಡೆ ನೀನು
ಎಂಬರದು ಸಟೆಯೇನು?
ಧರ್‍ಮವನು ಕಾದು ಬಲಹೀನರನು ಸಲಹು! || ೧೧ ||

ಈ ಸಮರವನು ಮುಗಿಸು,
ಸೊಕ್ಕಿದವರನು ತಗಿಸು,
ಸ್ನೇಹಮಳೆಗರೆದು ಶಾಂತಿಯ ಬೆಳೆಯಿಸಿನಿಯಾ!
ನಿರಪರಾಧಿಯ ರಕ್ತ
ದಿಂದ ನೆಲ ಜಲ ಸಿಕ್ತ
ವಾಗದೊಲು ಕಾಪಾಡು ದೇವಕೀತನಯಾ! || ೧೨ ||
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...