Home / ಕವನ / ಕವಿತೆ / ಬೆಳಕನೆರಚು!

ಬೆಳಕನೆರಚು!

ಬೆಳಕನೆರಚು, ಚಳಕನೆರಳು,
ಯುಗ-ಯುಗಾಂತ ತೊಳಗಲಿ!
ಇಳೆಯ ಕವಿದ ಕಳ್ತಲೆಯನು
ಕಳೆದೊಗೆ ದೀಪಾವಳಿ!


ಬರಿಯ ಒಂದೆ ಇರುಳು ಬಂದೆ
ಮುಗಿಯಿತೇನು ಕಾರ್‍ಯ?
ವರುಷದಿ ನೂರಾರು ತಮಸಿ-
ನಿರುಳಿವೆ ಅನಿವಾರ್ಯ!
ಅಂದಂದಿನ ಕತ್ತಲಿಂದೆ
ಮಂದಿಯ ಮನವಿಡಿದು ಮುಂದೆ
ಕರೆದೊಯ್ಯುವರಾರ್ ಅನಂದೆ-
ಮರೆದು ಸರಿಯೆ ನೀನು ?
ಮಿರುಗಿ ಮಾಯವಾಗುತಿರುವ
ಮಿಂಚಿಗೆ ಬೆಲೆಯೇನು?


ನಿನಗಾಗಿಯೆ ಹೊಲ-ನೆಲಗಳು
ಬೆಳೆಯೊಳೇರಿ ನಿಂತಿವೆ;
ನಿನಗಾಗಿಯೆ ಹೊಳೆ-ಕೊಳಗಳು
ತಿಳಿಯ ನೀರನಾಂತಿವೆ.
ಬಿಳಿಯ ಹೊನ್ನ ಸೇವಂತಿಗೆ
ಹೊಳೆದು ನಿನ್ನ ಮೈಕಾಂತಿಗೆ
ಸವಿಗಾರರ ಬಗೆಯ ಸೆಳೆವ
ತವಕದಿ ಬಾಯ್‌ದೆರೆದಿವೆ-
ಬುವಿಯ ಜೀವಕುಲವೆ ದೇವ-
ದಿನವ ನಿನ್ನ ಕರೆದಿವೆ!


ಬರುವುದು ದೀವಳಿಗೆಯೆಂದು
ತಿರೆಯೇ ಕುಣಿ-ಕುಣಿಯಿತು!
ತರುವುದು ಹಿರಿಬೆಳಕನೆಂದು
ಜನವು ದಿನವು ನೆನೆಯಿತು!
ಸಂತೆಗೆ ಹಸರಿಗನು ಬಂದು
ಸಂತೆ ಹರಡಿ ದಿನವದೊಂದು
ಕಂತೆ ಹೇರಿ ಮತ್ತೆ ದಾರಿ
ಹಿಡಿದೆಲ್ಲಿಗೊ ನಡೆವನು;
ಅಂತೆ ನಿನ್ನ ಆಗಮವಿರೆ
ಹಿರಿಮೆ ನಿನ್ನದೇನು?


ಕುರುಡಗೆರಡು ನಿಮಿಷ ಕಣ್ಣ
ನೋಟಗಳನೆ ನೀಡಿ,
ಧರೆಯ ಚನ್ನ ಸೊಬಗಿನನ್ನ-
ವೂಡುವಂತೆ ಮಾಡಿ,
ಮರಳಿ ಕಣ್ಣ ಕಳೆದೊಡವಗೆ
ಇರುವುದೇನು ಬರಿ ತಗುಬಗೆ!
ವರುಷಕೊಂದು ಬಾರಿ ಬಂದು
ಬೆಳಕಕರೆವೆ ನೀನು….
ಉಳಿದ ಇರುಳ ತಮಸಿನುರುಳ
ಕಳೆಯೆ ದಾರಿಯೇನು?
* * *
ಬೆಳಕನೆರಚು, ಬೆಳಕನೆರಚು,
ಯುಗ-ಯುಗವನು ಬೆಳಗಿಸು,
ಇಳೆಯ ಕವಿವ ಕಳ್ತಲೆಗಳ
ಕಳೆದೇಗಲು ತೊಳಗಿಸು !
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...