Home / ಕವನ / ಕವಿತೆ / ಚಂದ್ರಗ್ರಹಣ

ಚಂದ್ರಗ್ರಹಣ

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.)


‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ,
ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ,
ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು,
ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು,
ಅಳತೆಯಿಲ್ಲದ ಪಳುಕು-
ಸೆಳೆಯಂತಿರುವ ತನ್ನ
ಹೊಳೆವ ಕೈ ಕೆಳಗಿಳುಹಿ,
ಹೊನ್ನ ಹುಡಿಯನ್ನು ಹಸನೆಣ್ಣೆಯಲ್ಲಿ ಹೊರೆದು,
ಬಣ್ಣ ಬರೆದನು ಇಳೆಗೆ ಕಲೆಯ ನೆಲೆಯರಿದು.


ಬೆಳಕಿನೊಂದಿಗೆ ರವಿಯು ಬಿರುಬಿಸಿಲ ಪಸರಿಸಿರೆ
ಝಳತಾಗಿ ಜೀವ ಕುಲ ತಳಮಳಿಸುತಿರಲು, ಪೆರೆ
ಬೆಳಕಿನೊಡವೆರಸಿ ತನ್ನೊಡಲಿನಮೃತವ ಸುರಿಸಿ,
ಎಳನಗೆಯ ಮಲ್ಲಿಗೆಯ ಅರಳುಗಳ ಮಳೆಗರಿಸಿ
ನೆಲಕೆ ತಂಪನು ನೀಡಿ,
ಜೀವಿಗಳ ಮೈ ತೀಡಿ,
ಸುಖ-ಶಾಂತಿಗಳನೂಡಿ,
ಜಗವನೆಲ್ಲವ ನಗಿಸಿ ಸೊಗಸನೊಂದಿರುವ-
ನಗುನಗುತ ಬಾನ ತೊರೆಯೊಳು ತೇಲುತಿರುವ.


ಏನಿದೇನಿದು ಚಿತ್ರ? ಬಾನೊಳಾಡುವ ಪೆರೆಯು
ಹೀನಕಳೆಯವನಾಗುತಿಹನೇಕೆ? ಅಚ್ಚರಿಯು!
ನೋಡು ನೋಡುವುದರೊಳೆ ಎನಿತು ಇದು ಮಾರ್‍ಪಾಡು?
ಮೋಡ ನಸುವೂ ಇಲ್ಲ, ಆದರೆಯು ಈ ಪಾಡು!
ಚೆಲುವು ಜಾರುತ್ತಲಿದೆ,
ಹೊಳಪು ಹಾರುತ್ತಲಿದೆ,
ಕೊಳೆಯು ಹೇರುತ್ತಲಿದೆ-
ಬಾಡಿರುವ ಹೊನ್ನರಳ ತೆರ ತೋರುತಿಹನು-
ನೋಡುಗರ ಕಣ್- ಮನದ ತಣಿವ ಕಳೆದಿಹನು.


ಅರಿವು ಮಿರುಗುವ ಎದೆಯು ಮುನಿಯ ಮನವಲ್ಲಾಡೆ,
ಮರೆವು ಅವನನು ಮುಸುಕುವಂತೆ-ಪೆರೆಮೊಗ ಬಾಡೆ,
ಎದ್ದು ಹೊರಟಿದೆ ನೆಲದೊಳಿದ್ದ ಹೊಂಬಣ್ಣವದು;
ಇದ್ದಲಿನ ಹುಡಿಯೆರಚಿದಂತೆ ಕತ್ತಲೆ ಕವಿದು
ಎತ್ತಲೂ ಹರಡಿಹುದು,
ಗೊತ್ತಾಗದೇನೊಂದು,
ಹೊತ್ತು ಎಂತಹದಿಂದು?
ಹೀಗೇತಕಾಗಿದೆಯೊ! ಹಾಂ! ತಿಳಿದೆ, ಅಹುದು!
ಈಗ ಚಂದ್ರನಿಗೆ ಗ್ರಹಣದ ಸಮಯವಿಹುದು!


ಗ್ರಹಣಸಮಯವು ಇಹುದು; ಕುಹಕಿ ಯಹ ಗರವೊಂದು
ಗುಹೆಯಂತೆ ಬಾಯ್ದೆರೆದು ನೊಣೆಯಲಿಕ ನಿಂದಿಹುದು.
ಎಂತಲೇ ತಿಂಗಳಿನ ಕಾಂತಿ ಕುಂದುತಲಿಹುದು-
ಇಂತಹನ ಹಿಂಸಿಸುವುದೆಂಥ ಗರವಿರಬಹುದು?
ಚೆಲುವಿಕೆಗೆ ನೆಲೆಯಿವನೆ,
ಒಲವಿನಾ ಸೆಲೆಯಿವನೆ,
ಕಳೆಯ ಹಿರಿಹೊಳೆಯಿವನೆ!
ಅಯ್ಯೋ, ಏನನ್ಯಾಯ! ಈತಗೂ ಹಗೆಯೆ?
ಅಯ್ಯ! ಜಗದೊಡೆಯ! ನಿನಗೆಲ್ಲವಿದು ನಗೆಯೆ?


ಕೇಡು- ಹಗೆ- ಪೀಡೆ-ಗರ ಕಾಡಬಹುದಾರನ್ನು?
ಖೋಡಿ-ಕೇಡಿಗ-ಕವಡಿಯಾದ ನಾಡಾಡಿಯನು!
ಜಗದಾಪ್ತನೀತ, ಇವನಿಗು ಹಗೆಗಳಿಹರೇನು?
ಜಗವನೇ ಸೊಗದೊಳಿಡೆ ಹಗಲಿರುಳು ಹವಣಿಪನು.
ಎಳೆಯರೆಲ್ಲರು ಇವನ
ಕಳೆಗಳಿಗೆ ಮನಸೋತು,
ಒಲವಿನೊಲವಾಗಿರುವ
ತಮ್ಮ ತಾಯಿಗೆ ತಮ್ಮನೆಂದು ತಿಳಿಯುವರು-
‘ನಮ್ಮ ಚಂದಮಾಮ’ ಎನುತ ಹಿಗ್ಗುವರು.


ಕೊಡುಗೂಸುಗಳು ಇವನ ಬೆಡಗು-ಗಾಡಿಗೆ ಬೆರೆತು,
ಪಡೆಯಲಿಹ ಒಡನಾಡಿ ಸೆರೆಯಂತೆ ಇರಲೆಂದು,
ಮನದೆರಕದಿಂದ ಮೈ ಮರೆದು ಲಜ್ಜೆ ಯನುಳಿದು
‘ಇನಿಯ ಚಂದ್ರಮರಾಯ!’ ಎಂದು ಒಕ್ಕಣಿಸುವರು.
ನಲ್ಲ-ನಲ್ಲೆಯರೊಂದಿ
ಚೆಲ್ಲಾಟಗಳನಾಡೆ-
ಉಲ್ಲಸದೊಳೋಲಾಡೆ-
ಎಲ್ಲರೀ ಚೆಲ್ಲಿಗನ ಕೆಳೆಯ ಬಯಸುವರು-
‘ಇಲ್ಲ ಸರಿ ಇದಕೆ’ನುವ ಸೊಗವ ಸಾರುವರು.


ಬಾಳುವೆಯ ತಿರುಳೆಂದು ತಿಳಿದ ಹಸುಮಕ್ಕಳನು
ಹೇಳಲಾಗದ ಹೃದಯದೊಲವಿಂದೆ ತಾಯದಿರು
ಬಲು ಮುದ್ದು ಮಾಡಿ ಕರೆಯುವರಾವ ಹೆಸರಿಂದೆ?
‘ಚೆಲುವ ಚೆಂದಿರ!’ ಎಂದೆ-ಬೇರೆ ಇನ್ನಾವುದಿದೆ?
ಎಲ್ಲರೊಲವಿನ ಸರಿಗೆ
ಸಲ್ಲುವಂತೆಯೆ ತೂಗೆ
ಇಲ್ಲವೀತನ ಹಾಗೆ!
ಮಾತಿನಾಚೆಯ ಬಗೆಯ ಮೌನಗೀತವ ಹಾಡಿ,
ಈತ ಜಡಗಳನು ಸಹ ನಲಿಸುವನುಸಿರ ನೀಡಿ.


‘ಸುರರ ಗರುವಿಕೆಯೇನು? ನರರ ಕಿರುಕುಳವೇನು?
ಸರಿಯೆ ಎಲ್ಲರು!’ ಎಂಬ ಸಮದರ್ಶಿ ಚಂದಿರನು-
ಸುರಿಸುತಿರುವನು ನಿರುತ ಧರೆಗೆ ಸವಿಸೊದೆಯನ್ನು ;
ಸರಿಹೋಲುವರಾರು ಈ ಯೋಗಿರಾಜನನು?
ಇವನೊಡನೆಯೂ ಹಗೆಯೆ?
ಇವನಲಿಯು ಕೀಳ್‌ಬಗೆಯೆ?
ಇವನಿಗೂ ತಗುಬಗಿಯೆ?
ರವಿಯ ರಾಜ್ಯದೊಳು ಕಾವಳದ ಹಾವಳಿಯೆ ?
ಸುವಿಮುಕ್ತ ಜೀವರಿಗು ಭವದ ಬಳಲಿಕೆಯೆ ?

೧೦
ಭಂಗಕೊಳಗಾಗಿಸಲು ತಿಂಗಳಿನ ತಪ್ಪೇನು ?
ಕೊಂಗಿಗಳು ಒಪ್ಪು-ತಪ್ಪುಗಳ ನೋಡುವರೇನು ?
ಬಹುಜನಕೆ ಬೇಕಾದ ಮಹಿಮನನು ಕಂಡೊಂದು
ಕುಹಕಿ ತಾ ಸಹಿಸದೆಯೆ ಬರಿದೆ ವೈರವ ತಳೆದು
ಖೋಡಿಗಳೆಯುತೆ ಹಳಿದು,
ಕಾಡಿ ಪೀಡಿಸುವುದಿದು
ರೂಢಿನಿಯಮವೆ ಇಹುದು.
ಹಾಲಗಡಿಗೆಯಲಿ ಹುಳಿಬೆರಸಿ ಹಿಗ್ಗುವುದು,
ಕೀಳುಜೀವದ ಹುಟ್ಟು ಗುಣವೆ ಆಗಿಹುದು.

ನೊಣೆಯಲಿಗೆ ಬಂದಿರುವ ಹಗೆಯನ್ನು ಹಣಿದು,
ಮಿನುಗದಿಹನೇ ಮುನ್ನಿನಂತೆ ಪೂರ್ಣೇಂದು?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...