Home / ಕವನ / ಕವಿತೆ / ಆರದ ನೋವು

ಆರದ ನೋವು

ಎಲ್ಲಿರುವೆ ? ಎತ್ತ ಹೋದೆಯೋ ಕಂದಾ !
ಒಂದು ಸಾರಿ ದನಿಗೂಡಿಸಯ್ಯ
ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ.

ನೋಡಿದ್ದೆ ಒಂದು ಕ್ಷಣದ ಹಿಂದೆ
ಇಲ್ಲಿಯೇ ಇದ್ದೆ
ಓಣಿಯ ಹುಡುಗರ ಸಂಗಡ
ಚಿನ್ನಾಟವಾಡುತ್ತಾ
ಕಣ್ಮನ ತುಂಬಿದ್ದೆ.

ಎಳೆವೆಯ ಸೆಳೆವಿನಲಿ
ಇಲ್ಲಿಯೇ.. ಎಲ್ಲೋ ಹೋಗಿರುವೆ
ಮರಳಿ ಬರುವೆಯೆಂಬ ನಿರೀಕ್ಷೆ ಸುಳ್ಳಾಗಿ
ತಿರುಗಿ ತಿರುಗಿ ಬಿದ್ದು ಹೋಗುತಿವೆ ಕಾಲು
ಹುಡುಕಿ ಹುಡುಕಿ ಬೆಳ್ಳಗಾಗುತಿವೆ ಕಣ್ಣು
ಸೋತು ಆತಂಕದಲಿ ತಿದಿಯಾಗುತಿದೆ ಎದೆ
ಗಾಳಿಗೆ ಸಿಲುಕಿದ ಸೊಡರಾಗುತಿದೆ ಮನ
ಜೀವಕ್ಕೆ ಏನೂ ಬೇಡದಾಗಿದೆ.

ಯಾರಲ್ಲಿ ಒರಲಲಯ್ಯಾ !
ಇಲ್ಲಿ ಯಾರ್‍ಯಾರದು ಅವರವರಿಗೆ ದೊಡ್ಡದು ಕಣಯ್ಯಾ !
ಹೆಚ್ಚಿನವರು ಮರುಕದ ನುಡಿಯೊಂದನೆಸೆದಾರು !
ಕಳೆದುಕೊಂಡಿದ್ದ ತುಂಬಿಸಿಕೊಡರಯ್ಯಾ ಯಾರೂ ?
ಬಾರಯ್ಯಾ ಮಗುವೇ.. ಬಂದು ನಿಲ್ಲೆನ್ನ ಎದುರು
ಒಂದು ಬಾರಿ ಬದುಕಿಸಯ್ಯ ನನ್ನ,

ತಾಯಿ ನಾಯಿಗೆ ಒರೆಯುವರಾರಯ್ಯಾ…
ಬಿಸಿಲಲಿ ಬವಳಿ ಗಾಡಿಯಡಿಯಲಿ ಮರೆತು ಮಲಗಿದ
ಮುದ್ದು ಮರಿಯನು ಎಬ್ಬಿಸಿ ಓಡಿಸದೆ
ಗತ್ತಿನಲಿ ಛಕ್ಕನೆ ಚಲಿಸಿ

ಪಟ್ಟನೆ ತಲೆಯನು ಸಿಡಿಸಿ
ಸಾಯಿಸಿ ಶಪಿಸಿ
ಕಸವ ಮಾಡಿ ಗುಡಿಸಿ, ಬೀಸಿ ಎಸೆದು ನಡೆದ
ಬರ್ಬರ ಸಂಗತಿಯ.

ಆರದು ! ಆರದು !!
ಹಗಲು ರಾತ್ರಿ,
ಮರಳಿ ಬಾರದ ಕಂದನಿಗಾಗಿ
ಓಣಿ ಓಣಿಯನು ಓಲುಗುಡಿಸುವ
ಹುಯಿಲಿಡುವ, ಕರೆಯುವ
ವಾತ್ಸಲ್ಯದೆದೆಯ ನೋವು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...