Home / ಕವನ / ಕವಿತೆ / ಡೊಂಬರ ಚೆನ್ನೆ

ಡೊಂಬರ ಚೆನ್ನೆ

(ಗೋವಿನ ಕಥೆಯ ಮಟ್ಟು)

ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, |
ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧||

ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; |
ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು. ||೨||

ಗುಲ್ಲು ಮಾಡರು; ಸೊಲ್ಲನಾಡರು; ಎಳ್ಳು ಬಿದ್ದರೆ ಬೊಬ್ಬೆಯು, |
ಅಲ್ಲಿ ಜನಗಳ ನುಗ್ಗುನುಗ್ಗಿಗೆ ಇಲ್ಲ ಸಾಸಿವೆ ಹಾಕಲು, ||೩||

ಅತ್ತಲಿದ್ದರು ಸೆಟ್ಟಿಮುದ್ಯರು, ಗುತ್ತಿನಡ್ಯಂತಾಯರು, |
ಇತ್ತ ಪೊಕ್ಕುಳ ಆರಸುಮಕ್ಕಳ ಒತ್ತಿನಲಿ ಕಳದೆಡದಲಿ. ||೪||

ಗುರು, ಸುಮಂಗಳ, ಬುಧ ಗ್ರಹಂಗಳ ನಡುವೆ ತಿಂಗಳ ಚೆಲುವಿನಾ |
ಅರಸು ಅಂಗಳದಲಿ ಜನಂಗಳ ನಡುವೆ ಸಂಗಳಿಸಿದ್ದನು. ||೫||

ಆಗ ಬಡಿಯಿತು ಡೋಲು ಬಡಬಡ, ಬಾಗಿ ಅರಸಿಗೆ ತಲೆಯನು, |
ಬೇಗ ತಿರ್ರನೆ ತಿರುಗಿ, ಸರ್ರನೆ ಲಾಗ ಹಾಕಿದ ಡೊಂಬನು. ||೬||

ನೀರಿನೊಂದಿಗೆ ಆರು ಬಿಂದಿಗೆ ಹೇರಿ ನೆತ್ತಿಯ ಮೇಲಕೆ, |
ಹಾರಿ ಧಿಕ್ಕಿಟ, ಕುಣಿದನಕ್ಕಟ ನೀರು ಹೊರಗಡೆ ಚೆಲ್ಲದೆ! ||೭||

ತೆಗೆದು ಡೊಂಬನು ಹುರಿಯ ಸುಂಬನು ಬಿಗಿದು ಬಟ್ಟಲನೇರಿಸಿ, |
ಬೊಗರಿಯಂತೆಯೆ ತಿಗರಿಯಂತೆಯೆ ನೆಗೆದು ಕುಣಿದನು ಧಿಮಿಧಿಮಿ, ||೮||

ಮಾವಿನಾಟದ ಹಾವಿನಾಟದ ಸೋವುಸೋಜಿಗ ತಿಳಿಯದು; |
ಯಾವ ತಂತ್ರವೋ? ಮೋಡಿಮಂತ್ರವೋ? ನಾವು ಅರಿಯೆವು ಎಂದರು. ||೯||

ಬಿದಿರು ಒಂದನು ಹೊತ್ತು ತಂದನು ಮುದುಕ ಡೊಂಬನು ಹೆಗಲಲಿ. |
ಅದನು ಬಲದಲಿ ಹೂಡಿ ನೆಲದಲಿ, ಚದುರೆ ಮಗಳನು ಕರೆದನು. ||೧೦||

ಹೆಣ್ಣು ಬಂದಳು ಹಣ್ಣು ಬಿಡದಾ ಸಣ್ಣ ಬಳ್ಳಿಯ ಬೆಡಗಿನಾ, |
ಮಣ್ಣೊಳಾಡುವ ಬೆಣ್ಣೆಯಂತಿಹ, ಕಣ್ಣುಕಟ್ಟಿನ ಸೊಬಗಿನಾ, ||೧೧||

ಮಣಿದು, ಹಗ್ಗಕೆ ಹಾರಿ ಸಿಡಿದಳು ಕುಣಿವ ಮರಿಸಿಡಿಲಂತೆಯೇ, |
ಹೆಣೆದು ಮೈಯನು, ಹಾವಿನಂತೆಯೆ ಗಣೆಗೆ ಸರಿದಳು ಸರ್ರನೆ. ||೧೨||

ಬಳಿಕ ಬೆನ್ನನು ಕೋದು, ಕೈಕಾಲ್ಗಳನ್ನು ತೇಲಿಸಿ, ಹೊಳೆದಳು- |
ಮೆಳೆಯ ಬಿಲ್ಲಿನ ಹಾಗೆ, ಸ್ಥಾಣುವಿನೆಳೆಯ ಚಂದ್ರನ ಚಂದದಿ. ||೧೩||

ಕೊರಳು ಮಾಲಿತು, ಹೆರಳು ಜೋಲಿತು, ಕುರುಳು ತೇಲಿತು ತರಳೆಯಾ.|
ಉರುಳುತಲೆ ಕಾಲ್‌ಬೆರಳ ಕೊನೆಯಲಿ ಮರಳಿ ಹೊಲಿದಳು ಜಡೆಯನು, ||೧೪||

ಗೆಳೆಯ ಡೊಂಬತಿಯಾಟದಾ ಪರಿ, ಗಾಳಿ ಕೈಗಿರಿಗಿಟಗಿರಿ, |
ಸುಳಿಯ ನೀರಿನ ತಲೆಯ ಹೂಗರಿ, ಸೆಳೆಯ ಮಿಂಚಿನ ತೋಳ್‌ ಸರಿ ||೧೫||

ಆರರೆ! ಡೊಂಬರ ಹೆಣ್ಣು ಮರಿ ಗರಗರನೆ ಎತ್ತರ ಭರದಲಿ |
ತಿರುಗುವಾ ತೆರ ಹುಡಿಯು ಅರಸಿನ ಎರಚಿತೆರಚಿತು ಕಣ್ಣಿಗೆ. ||೧೬||

ಇದ್ದು ನೋಡಿದ, ಎದ್ದು ನೋಡಿದ, ಕದ್ದು ನೋಡಿದ ಹುಡುಗಿಯಾ; |
ಮುದ್ದು ಗಿಳಿಯಲಿ ಅರಸಿನಾ ಮನ ಹದ್ದು ಹಾರಿತು ಬೇಗನೆ. ||೧೭||

ಬಿಗಿದು ಬಿಚ್ಚುವ ಬಿಚ್ಚಿ ಬಿಗಿಯುವ ಮುಗಿಲಕೂದಲ ಬಲೆಯಲಿ |
ಇಗೊ! ಇಗೋ! ಸಿಲುಕಿದುದು ಅರಸನ ಮಿಗದ ಕಣ್ಗಳ ಜೋಡಿಯು. ||೧೮||

‘ಏಕೆ ಡೊಂಬನೆ! ನಿಲ್ಲಿಸಾಟವ! ಈಕೆಯಲಿ ಮನ ಸೋತುದು, |
ಸಾಕು! ಬಂಗರು ನಾನೆ! ಕೈಸ್ರ್ ಹಾಕುವೀಕೆಯ ಕೊರಳಲಿ” ||೧೯||

ಎಂದು ನಂದಾವರದ ಬಂಗರು ನೊಂದು ನಂದದ ತಾಪದಿ |
ಮುಂದೆ ನಿಂದಾ ಡೊಂಬನೊಂದಿಗೆ ‘ಸಂದಿಸಿವಳನು’ ಎಂದನು. ||೨೦||

ನುಡಿದ ಮಾತಿನ ಮಾನಭಂಗದ ಹೊಡೆತ ನುಂಗಿದ, ಸಿಡುಕಿನಾ |
ಕಿಡಿಯ ಕಣ್ಣೀರಿಂದ ನಂದಿಸಿ, ‘ಒಡೆಯ! ಬನ್ನಹ ಲಾಲಿಸು!’ ||೨೧||

“ಮಗಳ ಹೆಸರಿನ ಮೈಗೆ ಸೂಳೆಯ ಬೆಡಗ ಸೀರೆಯ ಉಡೆಸೆನು. |
ನಗರೆ? ಹೆಸರಿನ ತಲೆಗೆ ಪಾದರಿ ಮುಗುಳು ಹೂವನು ಮುಡಿಸೆನು.” ||೨೨ ||

ಉಲಿಯೆ ಡೊಂಬನು, ಕೆಲರ ಪಿಸಿಪಿಸಿ, ಕೆಲರ ಗುಜುಗುಜು ಕೆಲವರಾ |
ಗಲಭೆ ಕಳಕಳ ಆಟದಾ ಕಳದಲಿ ವಿಶಾಲಕೆ ತುಂಬಿತು. ||೨೩||

ಒಡನೆ ಡೊಂಬನು ಡೋಲು ಬಡಿದನು, ಬಡಿದು ಗುಡುಗುಡು ಗುಡುಗಿದಾ |
ಗುಡುಗಿ ಓಡಿದ, ಓಡಿ ತೋರಿದ ಗಿಡುಗನನು ಗಳೆ ಗುಬ್ಬಿಗೆ. ||೨೪||

ಹೀಗೆ ತೋರಿಸಿ, ಮಾಯವಾದನು ಲಾಗದಲ್ಲಿ ಕಳದಾಚೆಗೆ. |
ಹೋಗಿ ಹೋದನು ಸನ್ನೆ ಮಾಡುತ ಕೈಗಳಿ೦ದಾ ಹುಡುಗಿಗೆ. ||೨೫||

ಕಣ್ಣು ಕತ್ತಲೆಗೊಳಿಪ ಗಣೆಯಿಂ ಹೆಣ್ಣು ದುಮುಕಿತು ಹಳಿಯಲಿ- |
ಬಣ್ಣ ಕಿಡಿಯಲಿ ಬಿದ್ದು ಬಾನಿಂ, ತಣ್ಣಗಾಗುವ ಬಿರುಸಿನೋಲ್. ||೨೬||

ಎಲ್ಲಿ? ಹೋ! ಹೋ! ಹೋಯ್ತು! ಹೋಗಿರಿ! ಎಲ್ಲಿ? ಎಲ್ಲೆಂಬರಸನಾ |
ತಲ್ಲಣದ ಕಟ್ಟಾಜ್ಞೆಗಾಗಲೆ ಎಲ್ಲರೋಡಿದರ್‌ ಅರಸುತಾ. ||೨೭||

ಆಳು ನಾಲ್ವರು ದಡಕೆ ಹಾಯ್ದರು, ಆಳಿವಿಹ ಹೊಳೆನೀರಲಿ |
ಆಳುವೇಳುವ ಇಬ್ಬರನು ತಮ್ಮಾಳುವವನೆಡೆಗೊಯ್ದರು. ||೨೮||

ಗದ್ದಿಗೆಯ ಬಳಿ ಕೆಡವಿದರು-ನೀರ್ ಮೆದ್ದ ಉದ್ದಿನ ತೊಗಲಿನಾ, |
ಬಿದ್ದ ಮೋರೆಯ, ನಿದ್ದೆಗಣ್ಣಿನ, ಒದ್ದೆ ಕೂದಲ ಡೊಂಬನಾ. ||೨೯||

ದೇವ ಬಂಗರೆ! ಕರೆವುದೆನ್ನನು ಸಾವು; ಬಾಗಿಲು ತೆರೆದಿದೆ. |
ಜೀವ ನಿಲ್ಲದು, ಅರಿಕೆ ಮಾಡುವೆ ಕಾವುದೆನ್ನಪರಾಧವ.” ||೩೦||

“ಹಿಂದೆ ನಾಲ್‌ಕೈ ವರ್ಷಗಳ ಕೆಳಗೊಂದು ಸಲ ನಾನಿಲ್ಲಿಗೆ |
ಬಂದು, ಗೈದಾಟಕೆ ಪಾದದ ತಂದೆ ತಂಗಿ ಸುನಂದೆಯು -” ||೩೧||

ಎಂದು ನಿಲ್ಲಲು ಡೊಂಬನರೆನುಡಿ, “ಮುಂದೆ ಮುಂದೆ”ನೆ ಬಂಗರು; |
“ಮುಂದೆ ತಮ್ಮ ಸುನಂದೆ ಕಿರುಮಗಳೊಂದಿಗರಮನೆ ಬಿಟ್ಟಳು.” ||೩೨||

“ಆಂದು ರತ್ನಾವತಿಗೆ ತುಂಬದು ಒಂದು ವರ್ಷವು, ಕೂಸಿನಾ |
ಮುಂದು ಎಣಿಸದೆ ನಿಂದೆ ಗಣಿಸದೆ ಹಿಂದೆ ಬಂದಳು ಪಾಪಿಯಾ” ||೩೩||

“ಸಂದವಿಂದಿಗೆ ವರ್ಷಗಳು ಹನ್ನೊಂದು-ಸತ್ತು ಸುನಂದೆಯು. |
ಅಂದಿನಿಂದಿದು ಕೋಗಿಲೆಯ ಮರಿ ಕಾಗೆ ನಾನೆನೆ ಆಯಿತು.” ||೩೪||

“ಇವರೆ ರತ್ನಾವತಿಯು; ಮುಂಚಿನ ಇವರ ಹೆಸರದು ರನ್ನೆಯು, |
ಇವಳೆ ಕೊಳೆ ಸೋಕದ ಸುಕನ್ಯೆಯು, ಇವಳೆ ಡೊಂಬರ ಚೆನ್ನೆಯು” || ೩೫||

“ಆರಿ ದೂರಕೆ ಅಲೆದ ಕಡಲಿನ ನೀರೆ ಕಡಲನೆ ಕೂಡಿತು, |
ಬೇರೆ! ಹಾ! ಹಾ!” ಎಂದು ಡೊಂಬನು ತೀರಿಸದೆ ಕಣ್ಮುಚ್ಚಿದ, ||೩೬||

ಆಳಿದ ಡೊಂಬಗೆ ಉತ್ತರಕ್ರಿಯೆಗಳನು ಬಂಗರು ಮಾಡಿಸಿ, |
ಗೆಳೆಯ ಡೊಂಬರ ಚೆನ್ನೆಯನು ಮದವಳಿಗ ಕೈಯಲಿ ಹಿಡಿದನು ||೩೭||

ತನ್ನ ರಾಜ್ಯದ ಪಾಲು ಬಳುವಳಿಯನ್ನು ಕೊಟ್ಟನು ರನ್ನೆಗೆ, |
ಚೆನ್ನೆ ಸಂತತಿಗಾಯ್ತು ಆದರಿಂ ಹೆಸರು ಡೊಂಬಾ ಹೆಗ್ಗಡೆ. ||೩೮||
*****
(ಪದ್ಯ ಪುಸ್ತಕ)

Tagged:

One Comment

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...