Home / ಕವನ / ಕವಿತೆ / ಚಂಡ ಶಾಸನ

ಚಂಡ ಶಾಸನ

ಕಸಕಿಂತ ಕಡೆಯಾಯ್ತೆ
ಹೆಣ್ಣು ಜನ್ಮವು ನಿನಗೆ
ಈ ಭಾರ ಹೊರಿಸುವುದಕೆ

ಲಂಚಕೋರನು ನೀನು
ವಂಚನೆಯ ಮಾಡಿರುವೆ
ಮೃದುತನದ ಸ್ತ್ರೀವರ್ಗಕೆ

ಗಿಡವೆಂದು ಬಗೆದೆಯೋ
ಹೆಣ್ಣು ಜನ್ಮದ ಒಡಲ
ಫಲಗಳನು ಸೃಜಿಸುವುದಕೆ

ಕವಣೆ ಕಲ್ಲೋ ನಿನ್ನ
ಮಾನಸವು ಎಲೆ ದೇವ
ಈ ಕ್ರಮವೆ ಸ್ತ್ರೀವರ್ಗಕೆ?

ಪುಷ್ಪ ಸೃಷ್ಟಿಯನೇನೊ
ಸುಲಭದಿಂ ನೀ ಗೈದೆ
ಅಲ್ಲಿ ಕನಿಕರವು ಬಂತೆ?

ಕುಸುಮಕಿಂತಲು ಮೃದುವು
ಹೆಣ್ಣು ಜನ್ಮವು ಎಂಬ
ಅರಿವೆ ನಿನಗಿಲ್ಲವಾಯ್ತೆ?

ಏನ್ನುಡಿದು ಫಲವೇನು?
ನ್ಯಾಯವಿಲ್ಲದ ಬಳಿಕ
ತೀರುವುದೆ ಈ ಪ್ರಶ್ನೆಯು

ನೀನೆ ಕಾಣದ ಮುನ್ನ
ನಾವು ಮಾಡುವುದೇನು
ಇನ್ನೆಲ್ಲಿ ವಿಶ್ರಾಂತಿಯು?

ಅದಕಾಗಿ ಬಿತ್ತಿದೆಯೊ
ನಿರ್ಗುಣದ ಸುದ್ದಿಯನು
ವನಿತೆಯರಿಗಳುಕಿ ನೀನು

ಅಲ್ಲದೊಡೆ ನೀನೆಮ್ಮ
ಸಂಧಿಯನು ಬಯಸಿದೊಡೆ
ಈ ಸೃಷ್ಟಿ ಉಳಿವುದೇನು?

ಇರಲಿರಲಿ ಈ ಭಾರ-
ಕಳುಕುವರು ನಾವಲ್ಲ
ಅರ್ಜುನನ ಒಕ್ಕಲಲ್ಲ!

ನೆರವಾಗಿ ನಿಂತಿಹೆವು
ಅನುಗಾಲ ನಿನಕೃತಿಗೆ
ಸೋಲಿಗಿಲ್ಲೆಡೆಯಿಲ್ಲವು!

ಕಾಲ ಚಕ್ರವ ಮೆಟ್ಟಿ
ಅಭಿಮಾನಗಳ ತೊರೆದು
ಲೆಕ್ಕಿಸದೆ ಸಾವು ನೋವ

ನಿನ್ನ ಬೆಳಸನು ಅಪ್ಪಿ
ತೊಟ್ಟಿಲೊಳು ಲಾಲಿಸುತ
ಜೋಗುಟ್ಟುತಿಹೆವು ನಾವು

ಬಹುಕಾಲದೆಜಮಾನ
ಬಹುದೊಡ್ಡ ಕೃಷಿಗಾರ
ತೀರದಾರಂಬಗಾರ

ನಿನ್ನ ಗೆಯ್ಮೆಗೆ ಹೆಣ್ಣು
ನೇಗಿಲಿಲ್ಲದ ಮೇಲೆ
ಉಂಟೆ ಈ ಸತ್ಯಸಾರ!

ಅಂತಿರಲಿ ನೀನೇನೊ
ಮುಕ್ತಿದಾಯಕನೆಂಬ
ಸುದ್ದಿ ಹಬ್ಬಿಹುದು ಇಲ್ಲಿ

ದೊಡ್ಡವರ ಮಾತುಗಳೆ
ಸಾಕ್ಷಿಯಾಗಿಹವೆಮಗೆ
ಗ್ರಂಥ ಶೋಧನೆಗಳಲ್ಲಿ!

ವನಿತೆಯರು ಕಾಣುತಿಹ
ಪಾರಮಾರ್ಥಿಕವೆಂಬ
ದೃಷ್ಟಾಂತ ತಾ ಮುಕ್ತಿಯೆ?

ಕಾಯಗಳ ಬಿಟ್ಟೊಡನೆ
ಸಗ್ಗ ದೊರೆಯುವುದೆಂಬ
ಕಥೆಯೊಳುಂಟೇ ಮುಕ್ತಿಯು?

ಹೆಣ್ತನದಿ ತುಂಬಿರುವ
ಮುಕ್ತಿಪಥವೇ ಸಾಕು
ಮತ್ತೊಂದ ಬಯಸಲೇಕೆ?

ಆನಂದ ಒಳಹೊರಗೆ
ತುಂಬಿರಲಿ ಎಂದಿಹಳು
ಜನಕಜೆಯು ಸ್ತ್ರೀವರ್ಗಕೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...