Home / ಕವನ / ಕವಿತೆ / ಪುಣ್ಯಶಾಲಿ

ಪುಣ್ಯಶಾಲಿ

ನೀವೆಲ್ಲ ಪುಣ್ಯಶಾಲಿಗಳಮ್ಮ
ಹಠತೊಟ್ಟು ಬೈಗಳಿಂ ಕೋಪದಿಂ
ಕೋರಿಕೆಯ ಸಾಧಿಪಿರಿ, ಸುಖಿಸುವಿರಿ
ಒಡವೆ ವಸ್ತುವ ಪಡೆದು ಮೆರೆಯುವಿರಿ.
ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ
ಬೈಗಳಂ ಮುನ್ನ ನಾ ಕಲಿತಿಲ್ಲ
ಅಸುವೊಂದು ದೇಹವೆರಡಾಗಿಹುದು
ಎಂದು ಸಂಸಾರ ನಡೆಸುವೆನಮ್ಮ.

ಎನ್ನ ಪತಿ ಮನೆಗೆ ಬರೆ ಮುಗುಳು ನಗೆ ಸೂಸುವೆನು
ಬಂದವರನುಪಚರಿಸಿ ನಲ್ನುಡಿಯ ನುಡಿಯುವೆನು
ಏಕಾಂತದಲ್ಲಿ ಮೆಲ್ಲನವರ ಬಳಿ ಸಾರುವೆನು
ತನಿವಣ್ಣು ಕೆನೆವಾಲು ತಾಂಬೂಲ ನೀಡುವೆನು.
ವಿನಯದಿಂ ಮೃದು ಮಧುರವಾಣಿಯಂ
“ಎಲೆ ನಲ್ಲ! ಮಾತೊಂದು ನಡೆಸುವೆಯ
ಕೇಳಲೋ ಬೇಡವೋ” ಎನ್ನುವೆನು.

ಒಡನವರು ನಗುನಗುತ
ಬರ ಸೆಳೆದು ಬಿಗಿದಪ್ಪಿ
“ಎಲೆ ದೇವಿ! ಎನ್ನುವರು
ಹೂಮಳೆಯ ಸುರಿಯುವರು
ಜಡೆ ಮುಡಿಯ ನೇವರಿಸಿ
ಬಳಿಯಲ್ಲಿ ಕುಳ್ಳಿರಿಸಿ
ತಂದೆತಾಯ್ಗಳ ಬಿಟ್ಟು ಬಂದಿರುವೆ
ಒಡಹುಟ್ಟಿದರ ಬಿಟ್ಟು ಬಂದಿರುವೆ
ನಾನೆ ಪರಮಾರಾಧ್ಯನೆಂದೆಂದು
ಕನಸಿನಲಿ ನೆನೆಸಿನಲಿ ತಿಳಿದಿರುವೆ
ಕುಸುಮ ಕೋಮಲ ಹೃದಯದಲಿ ಬಯಕೆ ಏನಿಹುದೊ
ಏನಿಹುದೊ ಈ ಎನ್ನ ಗೃಹಲಕ್ಷ್ಮಿ ಹೃದಯದಲಿ !
ರಾಣಿಯಲ್ಲವೆ ನೀನು
ನಾನು ನಿನ್ನಯ ತೊತ್ತು
ಸರ್ವಸ್ವ ನಿನಗಿರಲು
ಸರ್ವಾಧಿಕಾರಮಂ
ನಿನಗೆ ನಾ ಕೊಟ್ಟಿರಲು
ಎನ್ನ ಬೇಡಲದೇಕೆ ?”
ಎಂದೆನ್ನ ಆದರಿಸಿ ನುಡಿಯುವರು
ಕೊರಳ ಸರಿಗೆಯ ಕೀಲಿ ತೋರುವರು.

ಪ್ರೇಮ ಭಾಂಡಾಗಾರ ಎನಗಿರಲು
ಕನಕ ಭಾಂಡಾಗಾರ ಎನಗಿರಲು
ಎಲ್ಲವುಂ ಎನ್ನ ಕೈಯೊಳಗಿರಲು
ಒಪ್ಪದಲ್ಲಿ ಸಂಸಾರ ನಡೆಸುತಿರೆ
ಶಾಂತಿ ಸುಖ ನಗುವೆಲ್ಲ ತುಂಬುತಿರೆ
ಒಡವೆ ವಸ್ತುವನಿಟ್ಟು ಮೆರೆಯದಿರೆ
ಏನು ಕುಂದಪ್ಪುದೋ ನಾನರಿಯೆನಮ್ಮ ;
ನೀವೆಲ್ಲ ಪುಣ್ಯಶಾಲಿಗಳಮ್ಮ
ಎನಗೇನು ಆ ಪುಣ್ಯ ಬೇಡಮ್ಮ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...