Home / ಕವನ / ಕವಿತೆ / ಏಕಾಗಬಾರದು?

ಏಕಾಗಬಾರದು?

ಮೇರುಗಿರಿಯೊಂದು ದಿನ ಗರ್ವದಿಂ ತಲೆಯೆತ್ತಿ
ಕೆಂಗದಿರ ಹೊಂಗದಿರ ಜಿಹ್ವೆಯಲಿ ನುಡಿಯಿತ್ತು
“ಈರೇಳು ಲೋಕಗಳಿಗಾಧಾರವಾಗಿಹೆನು,
ಎಲ್ಲಮಂ ಧರಿಸಿಹೆನು ; ಸೂರ್ಯತಾರೆಗಳೆನ್ನ
ಬಳಿವಿಡಿದು ಸಂಚರಿಸಿ ನಾನಿಟ್ಟ ಶಾಸನವ
ಎಳ್ಳನಿತು ಲಂಘಿಸವು”. ಈ ಕೆಚ್ಚುನುಡಿಗೇಳಿ
ಸಾಗರದ ವಾರಿರಾಶಿಯಲೊಂದು ಹನಿಯೆದ್ದು
“ಎಲೆ ಮೇರುಪರ್ವತವೆ! ಹದಿನಾಲ್ಕು ಲೋಕಗಳ
ಆಧಾರಗೀಧಾರವೆಂಬ ನುಡಿಯಂತಿರಲಿ
ಮುನಿದೆನಾದರೆ ಕೊಚ್ಚಿ ಮುಳುಗಿಸುವೆ ಹೆಸರುಸಿರು
ನಿನಗಿಲ್ಲವೆಂಬಂತೆ, ತಿಳಿಯದೇಂ ಪೌರುಷವು ?”
ಎಂದು ತನ್ನಯ ಬಲುಮೆ ಮಹಿಮೆಗಳನಾಡಿತ್ತು.
ಸೈಕತದ ರಾಶಿಯಲ್ಲಿ ಒಂದು ಕಣ ತಾನೆದ್ದು
“ಲೇಸಾಯ್ತು ನಿನ್ನ ನುಡಿ! ಮುಸಿಯದೆಯೆ ವಿಸ್ತಾರ
ಸಾಗರದ ಹನಿಗಿನಿಯುಮೆನುಮುಂ ಇರದಂತೆ
ಕುಡಿಯುವೆನು, ಪೈಜೆಯಿದೆ ಹೂಡುನೀಂ ಪಂಥವನು”
ಎಂದಾಗ ಸಾಮರ್ಥ್ಯದುನ್ನತಿಯನಾಡಿತ್ತು.
ಪಂಥಗಳ ಪೌರುಷಕೆ ಮನುಜ ಕೋಟೆಯು ನಕ್ಕು
“ಈ ಹುಚ್ಚು ಬಲು ಸೊಗಸು, ಕೇಳ್ವರಿಗೆ ಬಲು ಸೊಗಸು
ಹೆಡ್ಡರಿಗೆ ಹುಚ್ಚು ಹಿಡಿದರೆ ಮಾತು ಸೊಗಸುಂಟು”
ಎಂದವರನೇಳಿಸಿತು. ಆಗ ನಿರ್ದೇಹದಲಿ
ಏಕಾಗಬಾರದೆಂದೊಂದು ದನಿ ನಭದಲ್ಲಿ
ನುಣ್ಣನೆಯ ಸಣ್ಣ ದನಿ ಗೀತಮಂ ಹಾಡಿತ್ತು.

“ಏಕಾಗಬಾರದದು
ಆಗಲೇ ಆಗುವುದು
ಹನಿಯ ನುಡಿ ಕಣದ ನುಡಿ
ದಿಟದ ನುಡಿಯೆನಗೊಪ್ಪು
ನಕ್ಕ ಮಾನವರೆಲ್ಲ
ಅತ್ತು ಹೋಗುವರೀಗ
ಕಣದಲ್ಲಿ ಹನಿಯಲ್ಲಿ
ಇರುವೊಂದು ಪರಮಾಣು
ಕೊಚ್ಚಿ ಬಿಸುಡುವುದೀಗ
ಕುಡಿದು ತೇಗುವುದೀಗ
ಆ ಕಾಲ ಬಂದಿಹುದು
ಈಗಲೇ ಬಂದಿಹುದು.
ಕಣದಂತೆ ಹನಿಯಂತೆ
ತಿಳಿದು ಸಾಧಿಪ ಜನರು
ಎನ್ನೊಳಗೆ ತಪ್ಪದೆಯೆ
ಸಮರಸವ ಹೊಂದುವರು
ಲೋಕಗಳ ಸೃಷ್ಟಿಸರು
ಲೋಕಗಳನಾಳುವರು
ಲೋಕಗಳ ನುಂಗುವರು
ಏಕಾಗಬಾರದದು
ಆಗಲೇ ಆಗುವುದು.”
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...