Home / ಕವನ / ಕವಿತೆ / ಮಧ್ಯಂತರ ೨: ಕೆಪ್ಲರ್

ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ
ದೇಹವನು ಮಾತ್ರ ಕರೆಯುವುದು ಭೂಮಿ
ಆಹ್! ಯೊಹಾನಸ್ ಕೆಪ್ಲರ್
ಆಕಾಶವನಳೆದವನು ಭೂಮಿಯ
ನೆರಳನಳೆಯುತ್ತಿರುವೆಯ !

ಆ ವಾಕ್ಯಗಳನೆಂತು ಮರೆಯುವುದು
ಆ ಅರ್ಥಗಳನೆಂತು ಬರೆಯುವುದು
ಒಂದು ಹೆಜ್ಜೆಯಲೆ
ಕಲ್ಪಗಳ ದಾಟಿದವನೆ
ಕವಿಯೆ, ವಿಜ್ಞಾನಿಯೆ, ತತ್ವಜ್ಞಾನಿಯೆ
ಎಲ್ಲವನು ಕಂಡವನು ನೀನು
ಕಾಣುವ ಬಗೆ ಹೇಳು

ರೆಕ್ಕೆಗಳುಂಟೆ ಕಲ್ಪನೆಗೆ
ಹಕ್ಕಿಯಾಗಿ ನೆಗೆಯುವುದೆ
ನೋಡನೋಡುತ್ತ ಕೇವಲ
ಚುಕ್ಕೆಯಾಗುವುದೆ
ಸಾಗುವುದೆ ಅದು
ಯಾವ ಅಗೋಚರ ಖಂಡಗಳತ್ತ
ಯಾವ ಅನೂಹ್ಯ ಗೋಲಗಳತ್ತ
ಯಾವ ನಕ್ಷತ್ರಗಳು ಹೊಳೆಯುವತ್ತ
ಯಾವ ಗ್ರಹಗತಿಗೆ ಸಿಕ್ಕಿ
ತಾನೆ ಗ್ರಹವಾಗುವುದೆ
ತಿರುಗುತ್ತ ತನ್ನ ಅಕ್ಷದ ಸುತ್ತ
ಇನ್ನು ಯಾರು ಕೊಡದ ಬೆಳಕ ನೀಡುತ್ತ
ಸುತ್ತಲಾರೆ ದೇಶಗಳ
ದಾಟಲಾರೆ ನನ್ನ ಕಾಲದ ಮಿತಿಗಳ
ಕಾಲು ಕುಸಿಯುವುದು ಮನಸು ಸೋಲುವುದು
ಇನ್ನೆಷ್ಟು ದೂರ?
ಎಲ್ಲ ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು

ಸೂರ್ಯನ ಬಳಿ ಹಾರಿದವನ
ಗತಿಯೇನಾಯಿತು ?-ಎಂದು ಕೇಳಿದರವರು
ರೆಕ್ಕೆಗಳು ಕರಗಿ
ಬಿದ್ದನು ನೆಲಕ್ಕೆ-ಎಂದು ಹೇಳಿದರು
ಬಿದ್ದು ಹೊರಳಾಡಿದನು
ಬೆಂಕಿಯಲಿ ನರಳಿದನು- ಎಂದು ಬಣ್ಣಿಸಿದರು
ಬಿದ್ದವನ ಸಮಾಧಿಯನು
ಬಿಡಲಿಲ್ಲ ಜನರು
ಹಸಿರು ಹುಲ್ಲನು ಕೆದಕಿದರು
ಕಲ್ಲು ಗಾರೆಗಳನು ಕೆಡೆವಿದರು
ಹಿಂದೆ ವಾಕ್ಯಗಳು ಇದ್ದಲ್ಲಿ
ಈಗ ಏನಿಲ್ಲ-ಆಚೀಚೆ
ಚದುರಿ ಬಿದ್ದಿವೆ ಕಲ್ಲುಗಳು
ಅಕ್ಷರಗಳ ಹೆಕ್ಕಿ ಜೋಡಿಸುತ್ತಲೆ ಇರುವೆ
ಅವು ಮೂಡಿಸುವ ವಾಕ್ಯಗಳೇನು
ಅರ್ಥಗಳೇನು
ಹೇಳುವುದು ಹೇಗೆ
ಎಲ್ಲ ಅಕ್ಷರಗಳೂ ಸಿಗುವ ವರೆಗೆ-
ಎಲ್ಲವನು ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...