Home / ಕವನ / ಕವಿತೆ / ಮಧ್ಯಂತರ ೨: ಕೆಪ್ಲರ್

ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ
ದೇಹವನು ಮಾತ್ರ ಕರೆಯುವುದು ಭೂಮಿ
ಆಹ್! ಯೊಹಾನಸ್ ಕೆಪ್ಲರ್
ಆಕಾಶವನಳೆದವನು ಭೂಮಿಯ
ನೆರಳನಳೆಯುತ್ತಿರುವೆಯ !

ಆ ವಾಕ್ಯಗಳನೆಂತು ಮರೆಯುವುದು
ಆ ಅರ್ಥಗಳನೆಂತು ಬರೆಯುವುದು
ಒಂದು ಹೆಜ್ಜೆಯಲೆ
ಕಲ್ಪಗಳ ದಾಟಿದವನೆ
ಕವಿಯೆ, ವಿಜ್ಞಾನಿಯೆ, ತತ್ವಜ್ಞಾನಿಯೆ
ಎಲ್ಲವನು ಕಂಡವನು ನೀನು
ಕಾಣುವ ಬಗೆ ಹೇಳು

ರೆಕ್ಕೆಗಳುಂಟೆ ಕಲ್ಪನೆಗೆ
ಹಕ್ಕಿಯಾಗಿ ನೆಗೆಯುವುದೆ
ನೋಡನೋಡುತ್ತ ಕೇವಲ
ಚುಕ್ಕೆಯಾಗುವುದೆ
ಸಾಗುವುದೆ ಅದು
ಯಾವ ಅಗೋಚರ ಖಂಡಗಳತ್ತ
ಯಾವ ಅನೂಹ್ಯ ಗೋಲಗಳತ್ತ
ಯಾವ ನಕ್ಷತ್ರಗಳು ಹೊಳೆಯುವತ್ತ
ಯಾವ ಗ್ರಹಗತಿಗೆ ಸಿಕ್ಕಿ
ತಾನೆ ಗ್ರಹವಾಗುವುದೆ
ತಿರುಗುತ್ತ ತನ್ನ ಅಕ್ಷದ ಸುತ್ತ
ಇನ್ನು ಯಾರು ಕೊಡದ ಬೆಳಕ ನೀಡುತ್ತ
ಸುತ್ತಲಾರೆ ದೇಶಗಳ
ದಾಟಲಾರೆ ನನ್ನ ಕಾಲದ ಮಿತಿಗಳ
ಕಾಲು ಕುಸಿಯುವುದು ಮನಸು ಸೋಲುವುದು
ಇನ್ನೆಷ್ಟು ದೂರ?
ಎಲ್ಲ ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು

ಸೂರ್ಯನ ಬಳಿ ಹಾರಿದವನ
ಗತಿಯೇನಾಯಿತು ?-ಎಂದು ಕೇಳಿದರವರು
ರೆಕ್ಕೆಗಳು ಕರಗಿ
ಬಿದ್ದನು ನೆಲಕ್ಕೆ-ಎಂದು ಹೇಳಿದರು
ಬಿದ್ದು ಹೊರಳಾಡಿದನು
ಬೆಂಕಿಯಲಿ ನರಳಿದನು- ಎಂದು ಬಣ್ಣಿಸಿದರು
ಬಿದ್ದವನ ಸಮಾಧಿಯನು
ಬಿಡಲಿಲ್ಲ ಜನರು
ಹಸಿರು ಹುಲ್ಲನು ಕೆದಕಿದರು
ಕಲ್ಲು ಗಾರೆಗಳನು ಕೆಡೆವಿದರು
ಹಿಂದೆ ವಾಕ್ಯಗಳು ಇದ್ದಲ್ಲಿ
ಈಗ ಏನಿಲ್ಲ-ಆಚೀಚೆ
ಚದುರಿ ಬಿದ್ದಿವೆ ಕಲ್ಲುಗಳು
ಅಕ್ಷರಗಳ ಹೆಕ್ಕಿ ಜೋಡಿಸುತ್ತಲೆ ಇರುವೆ
ಅವು ಮೂಡಿಸುವ ವಾಕ್ಯಗಳೇನು
ಅರ್ಥಗಳೇನು
ಹೇಳುವುದು ಹೇಗೆ
ಎಲ್ಲ ಅಕ್ಷರಗಳೂ ಸಿಗುವ ವರೆಗೆ-
ಎಲ್ಲವನು ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...