Home / ಕವನ / ಕವಿತೆ / ಮಧ್ಯಂತರ ೨: ಕೆಪ್ಲರ್

ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ
ದೇಹವನು ಮಾತ್ರ ಕರೆಯುವುದು ಭೂಮಿ
ಆಹ್! ಯೊಹಾನಸ್ ಕೆಪ್ಲರ್
ಆಕಾಶವನಳೆದವನು ಭೂಮಿಯ
ನೆರಳನಳೆಯುತ್ತಿರುವೆಯ !

ಆ ವಾಕ್ಯಗಳನೆಂತು ಮರೆಯುವುದು
ಆ ಅರ್ಥಗಳನೆಂತು ಬರೆಯುವುದು
ಒಂದು ಹೆಜ್ಜೆಯಲೆ
ಕಲ್ಪಗಳ ದಾಟಿದವನೆ
ಕವಿಯೆ, ವಿಜ್ಞಾನಿಯೆ, ತತ್ವಜ್ಞಾನಿಯೆ
ಎಲ್ಲವನು ಕಂಡವನು ನೀನು
ಕಾಣುವ ಬಗೆ ಹೇಳು

ರೆಕ್ಕೆಗಳುಂಟೆ ಕಲ್ಪನೆಗೆ
ಹಕ್ಕಿಯಾಗಿ ನೆಗೆಯುವುದೆ
ನೋಡನೋಡುತ್ತ ಕೇವಲ
ಚುಕ್ಕೆಯಾಗುವುದೆ
ಸಾಗುವುದೆ ಅದು
ಯಾವ ಅಗೋಚರ ಖಂಡಗಳತ್ತ
ಯಾವ ಅನೂಹ್ಯ ಗೋಲಗಳತ್ತ
ಯಾವ ನಕ್ಷತ್ರಗಳು ಹೊಳೆಯುವತ್ತ
ಯಾವ ಗ್ರಹಗತಿಗೆ ಸಿಕ್ಕಿ
ತಾನೆ ಗ್ರಹವಾಗುವುದೆ
ತಿರುಗುತ್ತ ತನ್ನ ಅಕ್ಷದ ಸುತ್ತ
ಇನ್ನು ಯಾರು ಕೊಡದ ಬೆಳಕ ನೀಡುತ್ತ
ಸುತ್ತಲಾರೆ ದೇಶಗಳ
ದಾಟಲಾರೆ ನನ್ನ ಕಾಲದ ಮಿತಿಗಳ
ಕಾಲು ಕುಸಿಯುವುದು ಮನಸು ಸೋಲುವುದು
ಇನ್ನೆಷ್ಟು ದೂರ?
ಎಲ್ಲ ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು

ಸೂರ್ಯನ ಬಳಿ ಹಾರಿದವನ
ಗತಿಯೇನಾಯಿತು ?-ಎಂದು ಕೇಳಿದರವರು
ರೆಕ್ಕೆಗಳು ಕರಗಿ
ಬಿದ್ದನು ನೆಲಕ್ಕೆ-ಎಂದು ಹೇಳಿದರು
ಬಿದ್ದು ಹೊರಳಾಡಿದನು
ಬೆಂಕಿಯಲಿ ನರಳಿದನು- ಎಂದು ಬಣ್ಣಿಸಿದರು
ಬಿದ್ದವನ ಸಮಾಧಿಯನು
ಬಿಡಲಿಲ್ಲ ಜನರು
ಹಸಿರು ಹುಲ್ಲನು ಕೆದಕಿದರು
ಕಲ್ಲು ಗಾರೆಗಳನು ಕೆಡೆವಿದರು
ಹಿಂದೆ ವಾಕ್ಯಗಳು ಇದ್ದಲ್ಲಿ
ಈಗ ಏನಿಲ್ಲ-ಆಚೀಚೆ
ಚದುರಿ ಬಿದ್ದಿವೆ ಕಲ್ಲುಗಳು
ಅಕ್ಷರಗಳ ಹೆಕ್ಕಿ ಜೋಡಿಸುತ್ತಲೆ ಇರುವೆ
ಅವು ಮೂಡಿಸುವ ವಾಕ್ಯಗಳೇನು
ಅರ್ಥಗಳೇನು
ಹೇಳುವುದು ಹೇಗೆ
ಎಲ್ಲ ಅಕ್ಷರಗಳೂ ಸಿಗುವ ವರೆಗೆ-
ಎಲ್ಲವನು ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...