Home / ಕವನ / ಕವಿತೆ / ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು?
ನಗುವುದೊಂದು ಬಿಟ್ಟು!
ಬಣ್ಣಬಣ್ಣದ ಫ್ರಾಕುತೊಟ್ಟು
ಪಿಳಿ ಪಿಳಿ ಕಣ್ಣು ಬಿಟ್ಟು
ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು!
ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ…
ಎಲ್ಲ ತನ್ನವರೆಂದು ಹಿಗ್ಗುವುದು ಗೊತ್ತು!
ಈ ಮಗುವಿಗೇನು ಗೊತ್ತು?
ಎಲ್ಲರ ಕಂಡು, ನಗಬಾರದೆಂದೇನು ಗೊತ್ತು?

-೧-
ಈ ಜಾತಿ, ಮತ, ಭೇದ, ಭಾವ,
ಈ ಬಡವ, ಬಲ್ಲಿದ, ಮೇಲು-ಕೀಳು,
ಇದು ಮಠ, ಇಗರ್ಜಿ, ಮಸೀದಿ… ಬೇರೆ ಬೇರೆಂದೇನು ಗೊತ್ತು?
ನಿತ್ಯ ಪೂಜೆ; ಪ್ರಾರ್ಥನೆ ಮಾಡಿ, ಕವಾಲಿ ಹಾಡಿ,
ಬುದ್ಧ, ಬಸವ, ಯೇಸು, ಅಲ್ಲಾ-ಎಲ್ಲಾ… ಒಂದೆಂಬುದು ಗೊತ್ತು!
ಏನು ಕೇಳಿದರೂ… ಗಿಳಿಪಾಠ ಒಪ್ಪಿಸುವುದು ಗೊತ್ತು!
ಈ ಮಗುವಿಗೇನು ಗೊತ್ತು?
ನಾವು ಕಲಿಸಿದ್ದು ಕಲಿವುದು…
ಹೇಳಿದ್ದು ಮಾಡುವುದು…
ಎಲ್ಲರ ಬಳಿ ಹೋಗಬಾರದೆಂದೇನು ಗೊತ್ತು?
ಬೆಕ್ಕು, ನಾಯಿ, ಕುರಿನ… ಮುದ್ದಿಸುವುದೊಂದೇ ಗೊತ್ತು?
ಈ ಊರು, ಕೇರಿ… ಬೇರೆ ಬೇರೆ! ಒಳಿತು, ಕೆಡುಕೆಂದೇನು ಗೊತ್ತು?

-೨-
ಮಗು ಕೇಳಿದ್ದಕ್ಕೆಲ್ಲ ಉತ್ತರಿಸಿ…
ಮುಗ್ಧ ನಗು ನಕ್ಕು ಸರಿತಪ್ಪುಗಳ ವಿಂಗಡಿಸಿ,
ನ್ಯಾಯದ ತಕ್ಕಡಿ ಎತ್ತಿ ಹಿಡಿದು
ಗಿಣೀಗೆ ಸಾಕಿದಂಗೆ ಜೋಪಾನ ಮಾಡುವಷ್ಟು…
ಪುರುಸೊತ್ತೀಗ ದೊಡ್ಡವರಿಗೆಲ್ಲಿದೆ?

ಮಗುವಿನ ಮುಂದೆ: ದೊಡ್ಡವರ ನಗು ಬಂಗಾರವಾಗಿ…
ಸುಳ್ಳು, ವಂಚನೆ, ದಡ್ಡತನಗಳೇ ಸಿಂಗಾರವಾಗಿ…
ಸಿನಿಮಾ, ನಾಟಕ, ಧಾರವಾಹಿಗಳೇ ಆದರ್ಶವಾಗಿ…
ಈ ನಮ್ಮ ಸಂಸ್ಕೃತಿ, ನಾಗರಿಕತೆನ ಗಾಳಿಗೆ ತೂರಿರುವುದು ಗೊತ್ತು!

-೩-
ಈ ಮಗುವಿಗೇನು ಗೊತ್ತೆಂದು?
ಗತ್ತಿಲಿ ತಿರುಗುವುದು ಬಿಟ್ಟುಬಿಡಿ!
ದೊಡ್ಡವರಿಗಿಲ್ಲ ದೊಡ್ಡ ಮನಸ್ಸು…
ಕನಸುಗಳ ಚಿವುಟಿ, ತಲೆ ಮೇಲೆ ಹೊರೆಹೊರಿಸಿ…
ಲಕ್ಷಣರೇಖೆ ಎಳೆದು, ಪ್ರಚಾರಕ್ಕೆ ಹಪಹಪಿಸುವುದೇ…
ದೊಡ್ಡವರ ಸಾಧನೆಯೇನು??
ದೊಡ್ಡವರ ಇಂಥ ಕಲಿಕೆ, ಮಗುವಿಗದು ಸೊನ್ನೆ!
ಅದರ ಪಾಡಿಗೆ ಅದನು ಬಿಟ್ಟುಬಿಡಿ
ಅದು ಎದ್ದು, ಬಿದ್ದು, ಜಗವ ಗೆಲ್ಲುವ ಆತ್ಮವಿಶ್ವಾಸ!

-೪-
ಹಕ್ಕಿಯಂಗೆ ಹಾರಿ, ಮೀನಿನಂಗೆ ಈಜಿ
ನವಿಲಿನಂಗೆ ಕುಣಿಕುಣಿದು, ಕುಪ್ಪಳಿಸಲಿಬಿಡಿ!
ಏನಾಗಬೇಕೋ ಅದಾಗುವುದು! ಚಿಂತೆಬಿಡಿ!
ಈ ಪುಟ್ಟ ಮಗುವಿಗೇನು ಗೊತ್ತೆನಬೇಡಿ?
ಈ ಮಗು; ಈ ಜಗದ; ಸುಂದರ ಕಣ್ಣು!
‘ಮೂರು ವರ್ಷಕೆ, ನೂರು ವರ್ಷದ ಬುದ್ಧಿ’ ಅದಕೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...