ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆನು,
ದೀನಗಿಂತ ದೇವ ಬಡವ-
ನೆಂದು ಬಗೆವೆನು.
ನಿಜವು, ವಿಷ್ಣು ವಿಶ್ವದರಸು, ವಿಶ್ವಧಾಮನು,
ಒಂದೆ ಹೆಜ್ಜೆಯಿಟ್ಟು ಬುವಿಯ ನಾಕವಳೆದನು,
ಎಷ್ಟು ಚಿಕ್ಕದೆನ್ನ ಹೃದಯ; ಏನು ಹೊಲಸದು!
ಇಲ್ಲು ನೆಲೆಯ ಬೇಡುವವನ ದೈನ್ಯವೆಂಥದು!
ಬೆಳ್ಳಿ ಬೆಟ್ಟದೊಡೆಯ, ಶಿವನು, ಚಂದ್ರಮೌಳಿಯು,
ಪ್ರೇಮಮೂರ್ತಿ, ಗಿರಿಜೆ, ಅವನ ಪ್ರಣಯಕಾರ್ತೆಯು;
ಆದರವನ ಬೀಡು ಮಸಣ, ಲೇಪ ಬೂದಿಯು;
ಚರ್ಮ ಉಡಿಗೆ, ಹಾವು ತೊಡಿಗೆ, ಬದುಕು ಬಿಕ್ಕೆಯು.
ದೀನಗೊಂದು ವಿಶ್ವ ಸಾಲದಾಸೆತಣಿಸಲು
ದೇವಗೆದೆಯ ಗುಡಿಲೆ ಸಾಕು ನಲಿದು ನೆಲಸಲು.
ಹರಿಗೆ ಎದೆಯೊಳೊಂದು ಗುಡಿಯ ಕಟ್ಟುತಿರುವೆನು,
ದೀನಗಿಂತ ದೇವ ಬಡವನೆಂದು ಬಗೆವೆನು.
*****








