Home / ಕವನ / ಕವಿತೆ / ‘ಶಾರ್ ಕಣಿವೆ’ಯಲ್ಲಿ

‘ಶಾರ್ ಕಣಿವೆ’ಯಲ್ಲಿ

ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ
ಧೂಳು ತುಂಬಿದ ಭಯಾನಕ ಪೊದೆಗಳು
ಕಣಿವೆ ಎದೆಗೆ ತಬ್ಬಿದ್ದ
ಮುಳ್ಳು ಗೋರಂಟಿಗಳ
ಹಳದಿ ಹೂವುಗಳ ತುಂಬ
ಜೇಡರ ಬಲೆಗಳು
ಹಾರಾಡುತ್ತಿವೆ ಹುಳು ಹುಪ್ಪಡಿಗಳು
ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ
ಕಂದಕದಾಳಕ್ಕೆ ಬೈನಾಕ್ಯುಲರ್ ಸ್ಪರ್ಶಿಸದೆ
ಪಕ್ಷಿಗಳ ಕೀಟಗಳ
ಒಂದಕ್ಕೊಂದರ ಬೇಟೆಯಾಟ
ಕಪ್ಪು ಪತಂಗಗಳ, ರಣಹದ್ದುಗಳ
ಕಿಚ್ ಕಿಚ್ ಶಬ್ದ
ಹರಿದಾಡುವ ಪೆಟ್ರೋ ವಾಹನಗಳಲ್ಲಿ
ಹೆಪ್ಪುಗಟ್ಟಿವೆ ಪುರಾತನ
ಅರೇಬಿಯ ವ್ಯಾಪಾರಿ ಮಾರ್ಗಗಳು
ಆದರೂ ಕಾಣುತ್ತೇನೆ ಅಲ್ಲಲ್ಲಿ
ಕಾಲ್ನಡಿಗೆಯಿಂದಲೇ
ಹಾದಿಕೊಂದ ಜನರನ್ನು
ಸೊಂಟಕ್ಕೆ ಬಿಗಿದ ಖಡ್ಗಗಳನ್ನು
ತಲೆಗೆ ಸುತ್ತಿದ ‘ಘೋತ್ರಾ’ ಗಳನ್ನು
ನನ್ನದು ನಿನ್ನದು ಎಂದು
ಕಾದಾಡಿದ ಜನರನ್ನು
ಕೊಳ್ಳೆ ಹೊಡೆದ ಕೊಲೆಗಡುಕರನ್ನು
ಕೊಳ್ಳಕ್ಕೆ ಹರಿದ ನೆತ್ತರನ್ನು
ಮರುಭೂಮಿಯಲ್ಲಿ ಹೂತು ಹೋದ
ಎಲುಬುಗಳನ್ನು, ಅವುಗಳೆದೆಯ ಮೇಲೆ
ಬೆಳೆದ ಪೊದೆಗಳನ್ನು.
ಇಂದು ಒಂಟೆಗಳು
ಸ್ವತಂತ್ರತೆಯ ಖುಷಿಯಲ್ಲಿ
ಧ್ವನಿ ಕಳೆದುಕೊಂಡಿವೆ.
ಬುರ್ಕಾದ ಕಾಲು ತೊಡೆತಕ್ಕೆ ಬಿದ್ದೇಳುವ
ಕುರಿ ಕಾಯುವ ತುಂಟು ಹುಡುಗಿಯರು
ಕೆಂಡ ಸಂಪಿಗೆಯಂತೆ
ತುಂಬು ಗುಲಾಬಿಗಳಂತೆ
ಅರಳುತ್ತಿದ್ದಾರೆ, ಅಷ್ಟೇ
ಕನಸು ಕಾಣದ ಕೋಮಲೆಯರು
ಸುಡುತ್ತಲೂ ಇದ್ದಾರೆ.
ಈಗ ಎಲ್ಲವೂ ನಿಶ್ಶಬ್ದ
ಶತ ಶತಮಾನಗಳ
ಪರಿಪೂರ್ಣತೆಗೆ ಕೃತಜ್ಞತೆಗಳು ಎಂದು
ಸೂರ್ಯ ತೆಪ್ಪಗಾಗುತ್ತಿದ್ದಾನೆ.
ಹೊಸ ಶತಮಾನದ ಉಬ್ಬರಕ್ಕೆ
ಸ್ವಾಗತದ ಹೆಜ್ಜೆಗಳು
ಪುಟಿ ಪುಟಿದು ಓಡಾಡುತ್ತಿವೆ.

(ಅರೇಬಿಯದ ದಕ್ಷಿಣ ಭಾಗದಲ್ಲಿ ಆಳವಾದ ‘ಶಾರ್ ಕಣಿವೆ’ ಮಾರ್ಗಗಳಲ್ಲಿ ಪ್ರವಾಸ ಕೈಗೊಂಡಾಗ ನೋಡಿದ ದೃಶ್ಯ)
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...