Home / ಲೇಖನ / ಪತ್ರ / ಪೂರ‍್ಣಿಮ – ೧೧

ಪೂರ‍್ಣಿಮ – ೧೧

ಪ್ರಿಯೆ

ಈಸೂರಿನಿಂದ ಬರೆದ ಪತ್ರ ನಿನಗೆ ತಲುಪಿರಬಹುದು. ಅವಸರದಲ್ಲಿ ಬರೆದೆ. ಇದೀಗ ವಿವರಯುತ ಪತ್ರವನ್ನು ಹಂಸಭಾವಿಯಲ್ಲಿ ಮರದಡಿಯಲ್ಲಿ ನಿಂತಿರುವ ಕಾರಿನ ಒಳಗಡೆ ದಿಂಬಿಗೆ ಆತುಕುಳಿತು ಬರೆಯುತಿರುವೆನು, ಊಟದ ಹೊತ್ತಿನ ವರೆಗೂ ಬರೆಯುವನು.ಈಗ ಮುಂಜಾನೆ ೧೦-೩೦; ಒಂದು ನೂರು ಪುಟಗಳ ಬರೆಯುವ ಸಾಹಿತ್ಯ ತುಂಬಿದೆ, ಸ್ಫೂರ್ತಿ ಬಂದಿದೆ. ಹುರುಪು ತುಂಬಿರುವುದು. ಮಲೆನಾಡಿನ ನನ್ನ ಈ ಅಲೆದಾಟದಿಂದ ನನ್ನಲ್ಲಿ ‘ಗೀತ ಗೋವಿಂದ’ ಧ್ವನಿಸಿದ್ದ ಕವಿತಾಸೂರಿಗೆ ಸಾಣೆ ಬಂದಿರುವುದು. ತಾಳು ಸಖಿ, ಪ್ರವಾಸದಿಂದ ಪ್ರಯಾಸಗೊಂಡ ಲೇಖನಿಯು ರಸ ಚಿಮ್ಮುತ್ತಿಲ್ಲ. ಪಕ್ಕದಲ್ಲಿರುವ ಕಿತ್ತಳೆ ಹಣ್ಣಿನ ರಸವನ್ನು ತುಂಬಿಕೊಂಡು ಬರೆಯುವೆನು.

ರಸ ಕುಡಿದ ಮೇಲೆ ರಸಿಕನಾಗಿ ಪತ್ರವನ್ನು ಪ್ರಾರಂಭಿಸಿರುವೆನು. ಆದರೆ ನನ್ನ ರಸದ ಇಂಚರಕ್ಕೆ ಧ್ವನಿಗೂಡಿಸುವ ವೀಣೆಯ ಬುರುಡೆಯು ತಂತಿ ಕಿತ್ತು, ತಾಳದಪ್ಪಿ ದೂರ ದೂರ ಬಹುದೂರ ಮೊಂಡುತನದಿಂದ ಕುಳಿತಿದೆ. ಹೋಗಲಿ ವೀಣೆ ಇಲ್ಲದಾಗ ವೀಣೆ ಇಲ್ಲವೆಂದು ಹಲುಬಿದರೆ ಫಲವೇನು? ಇದು ಸದಸದ್ವಿವೇಕವಲ್ಲವೆ? ಪ್ರಿಯ ಸಖಿ ನಾನು ಮಾತಿಗೆ ತಪ್ಪಿದೆನೆ? ಸಾಗರಕ್ಕೆ ಹೋದರೂ ಸಾಗರದ ಕನ್ಯೆಯನ್ನು ನೋಡುವುದಿಲ್ಲವೆಂದು ಬರೆದಿದ್ದೆನಲ್ಲವೆ? ಆದರೆ ಅಲ್ಲಿನ ಪರಿಸ್ಥಿತಿ, ನನ್ನನ್ನು ನಿರ್ಬಂಧಗೊಳಿಸಿತು. ತಪ್ಪೇನು? ನಿನ್ನ ಸ್ನೇಹಿತೆಯನ್ನು ನಿನ್ನ ಪರವಾಗಿ ನಿನ ಅರ್ಧಾಂಗನೇಕೆ ಸರ್ವಾಂಗನಾದ? ನಾನು ಮಾತನಾಡಿಸಬಹುದಲ್ಲವೆ? ಆಕೆಯ ಒಂದು ಸಲ ಸಹಜ ಬಾಯಿಬಿಟ್ಟು ನಗೆ, ಆಕೆಯ ತಂಗಿಯದೊಂದು ಎಳೆ ನಗೆ, ತಾಯಿಯ ಮಮತೆ ಪೂರಿತ ನಾಲ್ಕಾರು ಮಾತುಗಳು ಇವಿಷ್ಟು ಕೆಲವು ನಿಮಿಷಗಳಲ್ಲಿ ಮುಗಿದವು. ನಂತರ ಬೀಳ್ಕೊಡುವ ವೈಯಾರವಳಗಿನಿಂದಲೇ. ರಾತ್ರಿ ಜೋಗಿಗೆ ಹೋಗುವ ದಾರಿಯಲ್ಲಿರುವ ಸಿರಿವಂತಿಕೆ ಎಂಬೂರಿನಲ್ಲಿ ಉಳಿದುಕೊಂಡೆವು. ಸಿರಿವಂತಿಕೆ ನಿಜವಾಗಿ ಸಿರಿಯ ಹಿರಿಯೂರು. ನಾವಿಳಿದಿದ್ದ ಮನೆಯಲ್ಲಿ ತುಂಬ ಸಿರಿಯ ಹಿರಿಯ ಸೊಸೆತನ.

ನಿನ್ನ ಸ್ನೇಹಿತೆ ಮಲೆನಾಡಿನವಳು ತಾನಂದು ಮರೆತು ಹೇಳುತ್ತಿದ್ದ ಮಾತು ಸ್ವಲ್ಪ ಮಟ್ಟಿಗೆ ನಿಜವೆಂದು ಅನ್ನಿಸುತ್ತಿದೆ. ಮಲೆನಾಡಿನ ಎಲೆ ಎಲೆಗಳಲ್ಲಿ, ಗಿಡ ಗಿಡಗಳಲ್ಲಿ ಸೃಷ್ಟಿ ಸೌಂದರ್ಯದ ತನಿರಸವು ತುಂಬಿರುವುದು. ನಿಸರ್ಗದೇವತೆಯ ತವರೂರು ಈ ಮಲೆನಾಡು. ಮಾತನಾಡದೆ, ಮೌನದಿಂದ ವನದೇವತೆಯು ನಮ್ಮ ಮನವನ್ನು ಸೂರೆಗೊಳ್ಳುವಳು. ಭವ್ಯವಾದ ಕಾರಿನಲ್ಲಿ ಕುಳಿತಿರುವುದೇ ಒಂದು ಸೊಗಸು. ಅದರ ವೇಗವು ಸೊಗಸಿಗೆ ಹುರುಪುಕೊಡುವದು. ಮಲೆನಾಡ ಗೌಡರ ಆದರ ಅತಿಥ್ಯವೆಂದರೆ ಬಣ್ಣಿಸಬರದಷ್ಟು ಭವ್. ಮತ್ತೆ ಮತ್ತೆ ಆಶಿಸುವಷ್ಟು ರುಚಿ. ಇವೆಲ್ಲಕ್ಕಿಂತಲೂ ಮನವನಪ್ಪಿದ ಮನ ನೋಡದ ದೃಶ್ಯಗಳು. ಒಂದಲ್ಲ ಎರಡಲ್ಲ ನೂರಾರು, ಭಾವನಾಜೀವಿಯಾದ ನನಗೆ ಅವರ ಬದುಕಿನ ಒಂದೊಂದು ಬಗೆಯೂ ಮೈಮರೆಸುತ್ತಿತ್ತು. ನಡು ಕಾಡಿನಲ್ಲಿದ್ದರೂ ವನವಿಹಾರಕ್ಕೆಂದು ಬಂದ ಭೋಗ ಜೀವಿಗಳಂತೆ ಜೀವನದ ಹೆಜ್ಜೆ ಹೆಜ್ಜೆಯಲ್ಲೂ ರಮಿಸುತ್ತಿರುವರು, ವಿಹರಿಸುತ್ತಿರುವರು, ವಿನೋದಿಸುತ್ತಿರುವರು; ತೃಪ್ತಿ ಜೀವಿಗಳವರು, ಮೈ ತುಂಬ ದುಡಿದರೆ ಕೈತುಂಬ ಉಣ್ಣುವರು. ಅಡಿಕೆ, ಬಾಳೆ, ತೆಂಗುಗಳ ತೋಟ ಇವರ ದುಡಿಮೆಯ ಕಣವೂ ಹೌದು, ಜೀವನದ ಉದ್ಯಾನವನವೂ ನಿಜ. ಸೂರ್ಯನೂ ಕೂಡ ಇವರ ಸುಖವನ್ನು ಇಣಿಕಿ ನೋಡುತ್ತಿರುವನು. ಈ ಉದ್ಯಾನವನದಲ್ಲಿ, ಮೇಲಿ೦ದ ಸಂದು ಸಂದುಗಳಲ್ಲಿ ತಲೆ ಹಾಕಿ ನೋಡುತ್ತಿರುವ ಸೂರ್ಯನ ಪರಿವೆ ಇಲ್ಲದೆ ಈ ಮಲೆನಾಡಿನವರು ಈ ಸಿಂಗರಿಸಿದ ವನದಲ್ಲಿ ತಾವು ನೀರೆರೆದು ಬೆಳೆದ ಎಲೆಯ ಚಿಗುರು, ಅಡಿಕೆಯಚೂರು, ಇವುಗಳನ್ನು ಜಿಗಿಯುತ್ತಾ ಬಳ್ಳಿಗಳಂತೆ ಬಳಕುತ್ತಿರುವ ತಮ್ಮ ಜೀವನದ ಸಂಗಾತಿಯರೊಂದಿಗೆ ತಗ್ಗು ದಿನ್ನೆಗಳನ್ನು ಇಳಿದೇರುತ್ತ ಬಾಳುತ್ತಿರುವುದನ್ನು ನೋಡಿದ ಬಲವಂತ ವಿರಹಿಯಾದ ನನಗೆ, ಮುಂದಿನ ಹುಟ್ಟು, ಮಲೆನಾಡಿನಲ್ಲಾಗಲಿ ಎಂದೆನ್ನಿಸಿತು.

ವನಸುಮದಂತೆ ಅರಳಿ ಬಾಡುವ ಈ ಮಲೆನಾಡಿಗರಿಗೆ ಬಾಳು ಶೂನ್ಯವೆಂದನ್ನುತ್ತಿದ್ದ ನಾನು ನನ್ನ ತಪ್ಪನ್ನು ತಿದ್ದಿಕೊಂಡೆನು. ಒಣಬಾಳು ಇವರದಲ್ಲ ನಮ್ಮದೆಂದು ಅರಿತುಕೊಂಡೆನು. ಪಟ್ಟಣಿಗರ ಜೀವನ, ನಾಗರಿಕತೆ, ಇವೆಷ್ಟು ಕೃತ್ರಿಮಸೂಕ್ಷ್ಮವಾದವು. ಸತ್ಯದ ಮಾತಿರಲಿ, ಹುರುಳಿಲ್ಲದ ತಿರುಳಿಲ್ಲದೆ ಬಿಸಲಿಗೆ ಬಾಡುವ, ಛಳಿಗೆ ಮುದುಡುವ ನಮ್ಮ ನಾಗರಿಕತೆಯಲ್ಲಿದೆಯೇ ರಸ? ಮಳಲಗದ್ದೆ ಎಂಬೊಂದೂರು. ಅಲ್ಲಿನ ಗೌಡರ ಮನೆಯಲ್ಲಿ ಶುಭ ಶೋಭನ. ಈ ಶೋಭನಕ್ಕೆ ನಾವು ಹೋದಾಗ ಅವರಿಗಾದ ಆನಂದವನ್ನು ಬಣ್ಣಿಸಲು ಬರದು. ಸಡಗರದ ಗುಡುಗಾಟ ಅಡವಿಯಲ್ಲೆಲ್ಲಾ ಪ್ರತಿಧ್ವನಿಸುತ್ತಿತ್ತು. ದಪ್ಪಾದಷ್ಟೇ ಮೃದು ಹೃದಯವಿರುವ ಗೌಡತಿ ನಮಗೆ ಬಡಿಸಹತ್ತಿದಾಗ, ಅಧಿಕಾರವಾಣಿಯಿಂದ ನಮ್ಮನ್ನು ಗದ್ದರಿಸುತ್ತ ತಿಂಡಿ ತಿನಸುಗಳನ್ನು ಎಲೆಗೆ ನೂಕುತ್ತಿರುವಾಗ, ಅಮ್ಮನ ನೆನಪು ನನಗಾಗಿ ಹನಿಗಣ್ಣಾಯಿತು. ನಾನು ಒಬ್ಬ ಅಮ್ಮನ ಕುವರನಲ್ಲ ನನ್ನ ಅಮ್ಮಂದಿರು ನಾಡಿನ ತುಂಬಿರುವಾಗ ನನಗೇಕೆ ಈ ನೋವು ಎಂದು ಸಂತೈಸಿ ಕೊಂಡೆನು.

ಪೂರ‍್ಣೀ ಮದುವೆಯ ಮನೆಗೆ, ಶಾಂತಿ ಪ್ರಸ್ತುದ ಸಮಾರಂಭಗಳಿಗೆ ನನ್ನಂತಹ ಭಾವ ಜೀವಿ ಹೋಗಬಾರದು; ಹೋದುದಾಯಿತು. ತೆರೆ ತೆರೆಯಾಗಿ ಏಳುತ್ತಿರುವ ಭಾವನೆಗಳ ಏರಿಳಿತಗಳಿಗೆ ಎದೆಯೊಡ್ಡಿಯಾಯಿತು. ಈ ನನ್ನ ನಾಲ್ಕು ದಿನಗಳ ನೂರಾರು ಮೈಲಿಯ ಸಂಚಾರದ ಪ್ರತಿನಿಮಿಷವೂ ಜೀವನದ ರಸನಿಮಿಷಗಳಾಗಿದ್ದವು. ನಾಡಿಯನ್ನು ಮಿಡಿಯುವ ಘಳಿಗೆಯಾಗಿದ್ದವು. ಒಂದೆಡೆ ಒಬ್ಬ ಗೌಡರ ಹಿತ್ತಲಲ್ಲಿ ಒಂದೇ ಗುಲಾಬಿಯ ಸಸಿಯಲ್ಲಿ ಒಂದೇ ಕೆಂಪನೆಯ, ಪೆಂಪಿನ ಸೊಂಪಿನ ಕಂಪಿನ ಗುಲಾಬಿ ಅರಳಿ ಬಿರಿಯುತ್ತಿದ್ದಿತು, ಬೀಗುತ್ತಿದ್ದಿತು. ಅದನ್ನು ನೋಡಿದಾಗ ನನ್ನ ಜೊತೆಯಲ್ಲಿದ್ದ ಒಬ್ಬ ಸ್ನೇಹಿತರಿಗೆ ಈ ಗುಲಾಬಿ ಎಷ್ಟು ಚೆನ್ನು ಎಂದೆ. ಕಿಟಕಿಯಿಂದ ಜೀವನ ಗುಲಾಬಿಯೊಂದು ಈ ಮಾತನ್ನು ಕೇಳುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಗಿಡದ ಗುಲಾಬಿ, ಸಣ್ಣ ಮಗುವಿನ ಮೂಲಕ ನನ್ನ ಕೈಗೆ ಬಂದಿತು. ನಾನು ಮೈ ಮರೆತೆ ಗುಲಾಬಿಯನ್ನು ಮೂಗಿಗಾನಿಸಿದಾಗ, ಇದು ಸಾಗರದಲ್ಲಲ್ಲ! ಸೋಲೂರಿನಲ್ಲಿ. ಬಾಳೆಯ ವನದಲ್ಲಿ ಬೆಳೆದಿರುವ ಬಾಲೆಯರನೇಕರು ಬಾಳಿನ ಪಾಲುಗಾರನಿಗಾಗಿ ದಾರಿ ಕಾಯುತ್ತಿರುವರು. ಎಳೆ ಮನದಲ್ಲಿ ಬಾಳೆಯ ಸುಳಿಯಂತೆ ಬಯಕೆಗಳು ಮೂಡುತ್ತಿರುವ ಈ ಎಳೆ ಹುಡುಗಿಯರ ಹೃದಯದ ಬಡಿತವು, ಮುಖದ ಮುಗುಳು ನಗೆಯು, ಕಣ್ಣಿನ ಸರಳತೆಯ ತಪಸ್ವಿಯನ್ನಾದರೂ ದೀನವದನನ್ನಾಗಿ, ದರಿದ್ರನನ್ನಾಗಿ, ಮಾಡಿಬಿಡುವವು. ಭಯ ಬೇಡ, ನನ್ನ ವದನ ದೀನವಾಗಿದ್ದರೆ, ಇವರ ಬಾಳಿಗೆ ರಸವೆರೆಯುವ ರಸಿಕ ಜೀವಿತೇಶನು ದೊರೆತಿಲ್ಲವೆಂಬ ಮರುಕದಿಂದ, ನಾನು ದರಿದ್ರನಾಗಿದ್ದರೆ, ಇವರನ್ನು ಬಗ್ಗಿಸಲಾರದಷ್ಟು ಸಾಹಿತ್ಯ ಶೂನ್ಯವಾದುದರಿಂದ ನನ್ನೀ ಇಳಿ ವಯಸ್ಸಿನಲ್ಲಿ ಎಳೆ ಹುಡುಗಿಯರನ್ನು ನೋಡುವ ದೃಷ್ಟಿಯಲ್ಲಿ, ಅಣ್ಣನು ತಂಗಿಯನ್ನು ತಂದೆಯು ಬೆಳೆಯುವ ಮಗಳನ್ನು ನೋಡುವ ಭಾವನೆ ಇರುವುದೆಂಬುದನ್ನು ಅರಿತು, ನೀನು ನನ್ನ ಬಣ್ಣನೆಯಿಂದ ಬಣ್ಣಗೆಡಬೇಡ.

ಮಲೆನಾಡ ಸೌಂದರ್ಯದ ಮತ್ತಿನಲ್ಲಿ ನನ್ನ ನೆನಹಿನ ಪರದೆಯು ಅತ್ತ ಸರಿದಿಲ್ಲ. ಆದ್ದರಿಂದ ಈ ಪತ್ರದ ಸಾಹಿತ್ಯದೊಂದಿಗೆ ಹಳೆಯ ಚಿತ್ರವನ್ನು ಬೆರಸದೆ ಪತ್ರವನ್ನು ಮುಗಿಸುತ್ತಿದ್ದೇವೆ. “ನೆಲ್ಲುಂಟು ನೀರುಂಟು ಒಲ್ಲೆನುವ ನಲ್ಲೆಯರು ಅಲ್ಲುಂಟು” ಎಂದು ನೀನು ನನಗೊಮ್ಮೆ ಮಲೆನಾಡಿನ ಪರಿಚಯವನ್ನು ಮಾಡಿಕೊಡುತ್ತ ಓರ್ವ ಮಲೆನಾಡ ಹುಡುಗಿಯ ಬಿಂಕವನ್ನು ಬಣ್ಣಿಸಿದ್ದೆ. ನೀವು ಮಲೆನಾಡಿಗೆ ಹೋದೀರಿ ಎಂದು ಎಚ್ಚರಿಸಿದ್ದ ಆ ಪತ್ರ ನೆನಪಿಗೆ ಬಂದೇ ಬಿಟ್ಟಿತು. ಅದಕ್ಕೆ ಉತ್ತರದಂತಿದೆಯಲ್ಲವೆ ನನ್ನ ಮೇಲಿನ ಪತ್ರ? ಒಮ್ಮೆಯಾದರೂ ಬಾಳಿನ ಬವಣೆಯನ್ನು ಮರೆತು ಸೃಷ್ಟಿ ಸೌಂದರ್ಯದ ಚಿಂತನದಲ್ಲಿ ತನ್ಮಯಳಾಗು.

ಇತಿ ನಿನ್ನ ಜೀವ ಸಖ
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...