Home / ಕವನ / ಕವಿತೆ / ಗೌರಮ್ಮ

ಗೌರಮ್ಮ

ಓ! ತಾಯಿ, ಮಾತಾಯಿ ಮೇಲೆತ್ತು ಮುಖವನ್ನು
ದೈನ್ಯ ದೃಷ್ಟಿಯಕಂಗಳನು ಮಿಟುಕಿಸೌ! ಕವಿಯ
ಕಣ್ತೆರೆದು ನೊಡಿಲ್ಲಿ; ಆವ ಶತಮಾನಗಳ
ಲಾಭ ಹಾನಿಯ ಲೆಕ್ಕವನು ಗುಣಿಸಿ ತಣಿಯುತಿಹೆ!
ಶಿರಬಾಗಿದಾರಿಗೌ? ಅಚಲಳಾದುದಕೇನು-
ಕಾರಣಂ? ಮೊಗದೊಳೇಕೀ ಚಿಂತೆ? ಸಂಸಾರ
ನಿಸ್ಸಾರ ಮೆಂಬೆಯಾ ಮುತ್ತಜ್ಜಿ? ಅಲ್ಲದೊಡೆ-
ಮೊಮ್ಮಗನ ಮದುವೆಯಾಗಿಲ್ಲವೇ? ಮಗಳ ಮಗು
ಮಡಿಯಿತೆ? ನೆರೆಯವರು ಮುನಿದರೇ? ಸಗ್ಗವನು-
ಸೇರಿರುವ ನಲ್ಲ ನೆನಪಾದನೇ? ಮೈ ಬಟ್ಟೆ-
ಏಕಮ್ಮ ಹರಿದಿಹುದು? ನಿನ್ನ ಸುಖ ದುಃಖಗಳ-
ಕಂಡು ಮರುಗುವರಿಲ್ಲೇ? ಟೊಂಕ ಬಾಗಿದ ಮುದುಕಿ
ಎನಿತು ದಿನ ಕುಳಿತಿರುವಿ? ಮೈ ನೋಯದೇನಮ್ಮ?
ಹೂಂಹೇಳು -ಇನಿತೇಕೆ ಸಂಕೋಚ ನಾ ನಿನ್ನ
ಮಗನೆಂದು ತಿಳಿ ತಾಯಿ.

ಅಯ್ಯೋ, ಬಾಳೇ ಹಾಳು
ಮುದುಕಿ ಮುಗಿಸದ ಕತೆಯ ಹೇಳುವಳು; ಇದು ನಿಜವೆ?
ಸುಳ್ಳೆ ಮೈವೆತ್ತಂತೆ ಇವಳ ಕತೆ; ಕನ್ನಡಿಯ-
ಗಂಟಿನೊಲು ಸಟೆಯೆಂದು ಹೀಗಳಿಸದಿರು ತಮ್ಮ:
ಅರವತ್ತು ವರುಷಗಳ ಬೇಸಿಗೆಯ ಬಿಸಿಲನ್ನು
ನನ್ನ ಮೈ ಕಾಸಿಹುದು; ಆದೊಡೇಂ ಇನಿತು ದಿನ
ಬದುಕಿದುದು ವ್ಯರ್ಥಮಾಯ್ತೈ ಮಗುವೆ ಇನ್ನಾದ
ರೂ ಮರಣ ಬಂದಡಸಬಾರದೇ ಸಾಕು ಸಾ-
ಕೀ ಬಾಳು ನಾಯಿಗಿಂತಲು ಕೀಳು.

ಎನಿತು ನೊಂ
ದಿಹೆ ತಾಯೆ? ಇನಿತೇಕೆ ಬಾಳನ್ನೆ ಬೀಳುಗಳೆ
ಯುವೆಯಜ್ಜಿ? ಹೇಳಮ್ಮ ನಿನ್ನ ಕತೆ ಕೇಳುವೆನು
ಮನಗೊಟ್ಟು, ಮುಚ್ಚು ಮರೆ ಇಲ್ಲದಲೆ ಎಲ್ಲವನು
ಹೇಳಮ್ಮ ನನ್ನಮ್ಮ ಗೌರಮ್ಮ!

ಮಗುನಿನ್ನ
ಮನಮೆನಿತು ಮೃದು ನಿನ್ನ ನುಡಿಯೆನಿತು ಸಾತ್ವಿಕಂ?
ಮರುಗುವರ ಕಂಡು ನೀನೇಕಿಂತು ಮರುಗುವೆಯೋ?
ಚಿಣ್ಣ ನೀನೆಲ್ಲಿ ಈ ಧರ್ಮ ಬುದ್ಧಿಯಕಲಿತೆ?
ಬಾಳು ನೀ ಬಹುಕಾಲ! ನಿನಗೆ ಮಂಗಳಮಕ್ಕೆ

ಹೇಳಮ್ಮ ಕತೆಯ ನೀನದನೆ ಮರೆಯಿಸುತಿರುವೆ!
ನನ್ನ ಕತೆಯೇನು ಸವಿ? ಪಾಂಡವರ ಕೌರವರ
ಯುದ್ಧದಿತಿಹಾಸವೇ? ರಾಮ ರಾವಣನನ್ನು
ಸಂಹರಿಸಿ ಸೀತೆಯನು ಕರೆತಂದು ಪಟ್ಟವನು
ಏರಿ ಮೆರೆದಿಹ ಕತೆಯೇ? ನಳನಹುಷ ನರಪತಿಯ
ಕತೆಯೇನು ಹೇಳಲಿಕೆ? ಶ್ರೀಕೃಷ್ಣ ಪರಮಾತ್ಮ
ಗೈದಲೀಲೆಯದಿದೆಯೇ? ಏನಿಲ್ಲ ಎಂತಿಲ್ಲ
ಕತೆಯೆಲ್ಲಿ ಬಂತು ಮಗು?

ಎನಿತು ಓದಿಹೆಯಮ್ಮ?
ಭಾರತವ ಬಲ್ಲೆ; ರಾಮಾಯಣವ ನರಿತಿರುವೆ
ಶ್ರೀಕೃಷ್ಣನವತಾರ ಕಂಡುಕೊಂಡಿಹೆ ನೀನು
ಸಾಹಿತ್ಯ ಸಂಸ್ಕೃತಿಯ ತೂಗಿ ನೋಡಿಹೆ ನೀನು
ಇತಿಹಾಸವೂ ಗೊತ್ತು; ಎಲ್ಲಮ್ಮ ಇನಿತೆಲ್ಲ
ಓದಿಕೊಂಡುದು ಅಜ್ಜಿ?

ಓದು ಬರೆ ಕಲಿತಿಲ್ಲ
ಶಾಲೆಯನು ಕಂಡಿಲ್ಲ; ನಿನ್ನಂಥ ತಿಳಿದವರು
ಹೇಳಿದುದ ಕೇಳಿದೆನು: ನಾನು ತಿಳಿದುದೆ ನನಗೆ
ತಿಳಿಯದಂತಾಗಿಹುದು

ಬಲು ಮಾತುಗಾತಿ ನೀ
ಹೇಳಮ್ಮ ಹೇಳು ಕತೆ
ಹೇಳಲೇ ಬೇಕೇನು?
ಎಷ್ಟುಸಲ ಕೇಳುವುದು ?

ಮುನಿಯದಿರು ಮುನಿಯದಿರು
ಕೋಪವಲ್ಲವೆ ಪಾಪ? ಇರಲಿ ಹೇಳುವೆ ಕೇಳು:
ಚೆನ್ನೂರು ನನ್ನೂರು: ಅದು ಹಳ್ಳಿ; ಬಲು ಕಿರಿದು
ಜನ ಸಂಖ್ಯೆ ಗೊತ್ತಿಲ; ಮನೆಗಳನ್ನೆಣಿಸಿಲ್ಲ
ಚೆನ್ನೂರ ಪಡುವಣಕೆ ಮುಗಿಲನ್ನೆ ಮುದ್ದಿಡುವ
ಪರ್ವತಶ್ರೇಣಿಯಿದೆ; ಬೆಟ್ಟದಲಿ ಕಟ್ಟಡವಿ
ಬೆಳೆದು ನಿಂತಿದೆ ಸೊಕ್ಕಿ; ಗಿರಿವರನ ಚರಣದಲಿ
ಪರಮ ಪಾವನೆ ಪದ್ಮೆ ಪರಿದೋಡುತಿಹಳಲ್ಲಿ
ಜುಳು ಜುಳನೆ ಪರಿವ ತಿಳಿ ನೀರಿನಲಿ ಗಿಡಬಳ್ಳಿ
ಇಣುಕುವುವು ತಂತಮ್ಮ ನೆಳಲನೇ ನಿರುಕಿಸುತೆ
ಮೈಮರೆತು ನಲಿಯುವುವು. ಸಂಧ್ಯಾರುಣದ್ಯೋತಿ
ಮೂಡಿಬರೆ ಮೂಡಲಲಿ ಚೆನ್ನೂರು ಹೊನ್ನಿನಲಿ
ತೇಲಿದಂತೆನಿಸುವುದು.

ಊರ ಮುಂಬದಿಗಿರುವ
ಹೆಗ್ಗೆರೆಯ ತಡಿಯಲ್ಲಿ ತೆಂಗಾಯ ಮರಗಳಿವೆ
ಎಲ್ಲೆಲ್ಲು ಸೌಂದರ್ಯ ಸೂಸುತಿದೆ ಕಣ್ಮನವ
ತಣಿಸುತಿದೆ; ಕವಿಯನ್ನು ಕೈಮಾಡಿ ಕರೆಯುತಿದೆ.

ನನ್ನೂರು ಚೆನ್ನೂರ ಗೌಡಿಕೆಯು ನನ್ನ ಮಗ
ಚೆನ್ನನಿಗೆ ಸೇರಿದುದು; ಚೆನ್ನನೆಂಥವಗೊತ್ತೇ?
ಚಿನ್ನದಂತಹ ಬಣ್ಣ; ನೋಡಲಿಕೆ ಕಾಮಣ್ಣ!
ಚೆನ್ನ, ಚೆನ್ನಪ್ಪ, ಚೆನ್ನಿಗರಾಯ, ಚೆನ್ನಯ್ಯ
ಚಿನ್ನಬಾ, ರನ್ನಬಾ ಎನುತಿದ್ದೆ ದಿನದಿನವು
ಚೆನ್ನನಿಗೆ ಹದಿನಾರು ವರುಷಗಳು ತುಂಬುತಲೆ
ಹೊನ್ನಿಯನು ಕರೆತಂದು ಕಂಕಣವ ಕಟ್ಟಿಸಿದೆ
ಚಿನ್ನಕ್ಕೆ ರನ್ನವನು ಕುಂದಣಿಸಿದಂತಾಯ್ತು!
“ಎಂಥಜೊತೆ! ಬಲು ಸೊಗಸು ಗೌರಮ್ಮ ಗೌರವವ
ಪಡೆದೆ; ಚೆನ್ನನಿಗೆ ಚಿನ್ನವ ತಂದೆ ಮಾತಾಯಿ!”
ಎಂದು ಜನ ಹೊಗಳಿದುದು ಮನವಾರೆ, ಮದುವೆ ಬಲು
ಮುದದಿಂದ ಮುಗಿದಾಯ್ತು; ಮುಂದೆ ತಿಂಗಳು ಕಳೆದು
ನಾಲ್ಕು ದಿನವಾಗಿತ್ತು ಹೊನ್ನವ್ವ ಚೆನ್ನೂರ
ಚೆನ್ನನಲಿ ಬೆರೆತಾಗ! ಅಮೃತವೇ ಬುವಿಗಿಳಿದು
ಬಂದಂತೆ ಚೆನ್ನನಾ ಸಂಸಾರ ಕಂಡಿತ್ತು
ಅದೊಡೇಂ? ಒಲ್ಲೆ ಮಗು ನಾನೊಲ್ಲೆ ಮುಂದಾದ
ಕತೆಯ ಪೇಳೆನು ಕ್ಷಮಿಸು! ತುಂಬಿಬರುತಿದೆ ದುಃಖ

ಏನಮ್ಮ, ಏನಾಯ್ತು? ತಡೆ ಗಾಸಿಗೊಳಬೇಡ
ಪೇಳು ಮುಂದೇನಾಯ್ತು!

ಇಪ್ಪತ್ತುವರುಷಗಳ
ಒಂದೊಮ್ಮೆ ಚೆನ್ನೂರು ಪ್ಲೇಗಿಗಾಹುತಿಯಾಯ್ತು
ಆ ಹಾಳು ಬೇನೆಯಲಿ ಚೆನ್ನನೂ ಹೊನ್ನಿಯೂ
ತಿರುಗಿ ಬಾರದ ಶೂನ್ಯ ಬರಿ ಶೂನ್ಯ ದಾರಿಯಲಿ
ಮೈಮರೆತು ಸಾಗಿದರು; ಅಯ್ಯೋ ಅಯ್ಯೋ ಸಾವು
ಎನಿತು ದಾರುಣ ಮಗುವೇ! ಹೃದಯವೇ ಬೆಂದಾಯ್ತು!
ಭೀತಿ ಹೆಚ್ಚಿತು ಮನಕೆ; ಶಾಂತಿ ಹಾರಿತು ಎತ್ತೋ!

ಹಾಗು ಹೀಗೂ ಮಾಡಿ ನೂಕಿದೆನು ಬಾಳನ್ನು
ಸಾವು ಬಂದಡಸಿದರೆ ಸ್ವಾಗತವನೀಯುವೆನು
ಆದೊಡೆಲ್ಲವು ವ್ಯರ್ಥ; ಜಗದ ನೀತಿಯೆ ಬೇರೆ
ಬಯಸದುದು ಸಿಕ್ಕುವುದು; ಬಯಸಿದುದು ಇಲ್ಲಿಲ್ಲ!
* * *
ಮುದುಕಿ ಹೇಳಿದ ಕತೆಯು ಇಲ್ಲಿಗೇ ಮುಗಿದಾಯ್ತು.
*****
ಬೆಂಗಳೂರು : ೧೯೪೧

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...